Borewell Fee: ಕೊಳವೆ ಬಾವಿ ನೀರು ಬಳಕೆಗೂ ಶುಲ್ಕ, ಬರಲಿದೆ ಡಿಜಿಟಲ್ ಟೆಲಿಮೆಟ್ರಿ!
Borewell Usage Fee in Karnataka: ಕರ್ನಾಟಕದ ಬಹುತೇಕ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನಲ್ಲಿಯೂ ಬೋರ್ವೆಲ್ ನೀರಿನ ಬಳಕೆ ಅತಿಯಾಗಿದೆ. ಮತ್ತೊಂದೆಡೆ, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕೂಡ ಇಳಿಕೆ ಆಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಹೀಗಾಗಿ ಕೊಳವೆ ಬಾವಿ ನೀರಿನ ಬಳಕೆಗೆ ನಿಯಂತ್ರಣ ತರಲು ಸರ್ಕಾರ ಹೊಸ ನಿಯಮ ಜಾರಿಗೆ ತರಲು ಮುಂದಾಗಿದೆ. ಡಿಜಿಟಲ್ ಟೆಲಿಮೆಟ್ರಿ ಅಳವಡಿಸಿ ಕೊಳವೆ ಬಾವಿ ಬಳಕೆಗೆ ಶುಲ್ಕ ವಿಧಿಸಲು ಮುಂದಾಗಿದೆ.

ಬೆಂಗಳೂರು, ಜುಲೈ 23: ನೀರು ಅತ್ಯಮೂಲ್ಯ ಎಂಬುದು ಸಾರ್ವಕಾಲಿಕ ಸತ್ಯವಾದರೂ ನೀರನ್ನು ಸದ್ಬಳಕೆ, ಪುನರ್ಬಳಕೆ ಮಾಡುವ ನಿಟ್ಟಿನಲ್ಲಿ ಪರಿಣಾಮಕಾರಿ ಕೆಲಸಗಳು ಆಗುತ್ತಿಲ್ಲ. ಹೀಗಾಗಿ, ಅಂತರ್ಜಲವನ್ನು (Ground Water) ಅತಿಯಾಗಿ ನಂಬಿಕೊಳ್ಳುವ ಆತಂಕಕಾರಿ ಪ್ರಮೇಯ ಬಂದೊದಗಿದೆ. ಮತ್ತೊಂದೆಡೆ, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕೂಡ ಇಳಿಕೆ ಆಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಷ್ಟೇ ಅಲ್ಲದೆ, ಸರ್ಕಾರಕ್ಕೂ ಕೊಳವೆ ಬಾವಿಗಳ (Borewell) ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗಿಲ್ಲ. ಹೀಗಾಗಿ ಬೋರ್ವೆಲ್ ನೀರು ದುರ್ಬಳಕೆ ಆಗುತ್ತಿದೆ. ಇದಕ್ಕೆ ಇತಿಶ್ರೀ ಹಾಡಲು ನಿರ್ಧರಿಸಿರುವ ಸರ್ಕಾರ, ನಗರ ಪ್ರದೇಶಗಳಲ್ಲಿ ಕೊಳವೆ ಬಾವಿಯಿಂದ ತೆಗೆಯುವ ನೀರಿನ ಬಳಕೆ ಪ್ರಮಾಣವನ್ನು ಅಳೆಯಲು ಡಿಜಿಟಲ್ ಟೆಲಿಮೆಟ್ರಿ (Digital Telemetry) ಅಳವಡಿಸಿ ದರ ನಿಗದಿ ಮಾಡಲು ಮುಂದಾಗಿದೆ. ಇನ್ನು ಸರ್ಕಾರದ ಈ ಕ್ರಮಕ್ಕೆ ತಜ್ಞರು ಸಹಮತ ವ್ಯಕ್ತಪಡಿಸಿದ್ದಾರೆ.
ಆದರೆ, ಕೊಳವೆ ಬಾವಿ ನೀರಿನ ಬಳಕೆಗೆ ವಿಧಿಸಲಾಗುವ ಶುಲ್ಕದಿಂದ ಕೆಲವರಿಗೆ ವಿನಾಯಿತಿಯೂ ಸಿಗಲಿದೆ.
ಕೊಳವೆ ಬಾವಿ ಬಳಕೆ ಶುಲ್ಕದಿಂದ ಯಾರಿಗೆಲ್ಲ ವಿಯಾಯಿತಿ?
- ವೈಯಕ್ತಿಕ ಗೃಹೋಪಯೋಗಿ ಬಳಕೆಗೆ
- ಸೇನೆ ಹಾಗೂ ಸಶಸ್ತ್ರ ಪಡೆಗಳು ಹಾಗೂ ಸಂಸ್ಥೆಗಳು
- ಕೃಷಿ ಚಟುವಟಿಕೆಗಳು
- ದಿನಕ್ಕೆ 10 ಕ್ಯೂಬಿಕ್ ಗಿಂತ ಕಡಿಮೆ ಬಳಕೆ ಮಾಡುವಸಣ್ಣ ಮತ್ತು ಅತಿ ಸಣ್ಣ ಉದ್ಯಮಗಳಿಗೆ
- 20 KLD ವರೆಗೆ ಕುಡಿಯುವ ಹಾಗೂ ಗೃಹೋಪಯೋಗಿ ಬಳಕೆಗೆ, ಇತ್ಯಾದಿ
ಈ ಮೇಲಿನ ಚಟುವಟಿಕೆಗಳಿಗೆ ಕೊಳವೆ ಬಾವಿ ಬಳಕೆ ಶುಲ್ಕದಿಂದ ವಿನಾಯಿತಿ ದೊರೆಯಬಹುದು ಎಂದು ನಿರೀಕ್ಷಿಸಲಾಗಿದೆ.
ಸರ್ಕಾರದ ಈ ಕ್ರಮಕ್ಕೆ ಸಾರ್ವಜನಿಕರಿಂದಲೂ ಸಹಮತ ವ್ಯಕ್ತವಾಗಿದೆ. ಅಂತರ್ಜಲ ದುರ್ಬಳಕೆ ಹೆಚ್ಚಾಗುತ್ತಿದ್ದು, ಅಗತ್ಯ ರೀತಿಯಲ್ಲಿ ಸದ್ಬಳಕೆ ಮಾಡುವ ಹಾಗೂ ಬೋರ್ವೆಲ್ಗಳ ಸ್ಥಿತಿಗತಿಯನ್ನು ಮೇಲ್ವಿಚಾರಣೆ ಮಾಡಲು ಈ ಯೋಜನೆ ಒಳ್ಳೆಯದು ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವಿದ್ಯುತ್ ಬಿಲ್ ಪಾವತಿ ಸೇರಿ 5 ಎಸ್ಕಾಂ ಆನ್ಲೈನ್ ಸೇವೆ 2 ದಿನ ಸ್ಥಗಿತ
ಸದ್ಯ ಈ ವಿಚಾರವಾಗಿ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿಯನ್ನು ಒಪ್ಪಿಕೊಂಡಿರುವ ರಾಜ್ಯ ಸರ್ಕಾರ, ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಕೂಡ ನೀಡಿದೆ. ಒಟ್ಟಿನಲ್ಲಿ ಈ ಯೋಜನೆ ಜಾರಿಯಾಗಿ, ಅಂತರ್ಜಲ ದುರ್ಬಳಕೆ ಮಾಡಿಕೊಂಡು ವಾಟರ್ ಮಾಫಿಯಾ ಮಾಡುತ್ತಿರುವವರಿಗೆ ಬಿಸಿ ಮುಟ್ಟಿದರೆ ಸಾಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9, ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:21 am, Wed, 23 July 25