ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆ: ವಿಜಯದಶಮಿಯಂದು ಉದ್ಘಾಟನೆಗೆ ಸಿದ್ಧತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Sep 23, 2024 | 3:56 PM

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬೆಂಗಳೂರು ಜಲಮಂಡಳಿಯ ಪಂಪ್ ಹೌಸ್​​ಗೆ ಡಿಸಿಎಂ ಡಿಕೆ ಶಿವಕುಮಾರ್​ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಾವೇರಿ 5ನೇ ಹಂತದಲ್ಲಿ ಜಲರೇಚಕ ಯಂತ್ರಗಾರ ನಿರ್ಮಿಸಲಾಗಿದ್ದು, ವಿಜಯದಶಮಿಯಂದು ಉದ್ಘಾಟನೆಗೆ ರಾಜ್ಯ ಸರ್ಕಾರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಮಂಡ್ಯ, ಸೆಪ್ಟೆಂಬರ್​ 23: ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆಗೆ ರಾಜ್ಯ ಸರ್ಕಾರ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ವಿಜಯ ದಶಮಿ ದಿನದಂದು ಯೋಜನೆ ಉದ್ಘಾಟಿಸಲು ಸಿದ್ಧತೆಗಳು ನಡೆದಿವೆ. ಈ ಸಂಬಂಧ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಇಂದು 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯನ್ನು ಪರಿಶೀಲನೆ ಮಾಡಿದರು. ಇಂದು (ಸೆ.23) ಜಿಲ್ಲೆಯ ಮಳವಳ್ಳಿ ತಾಲೂಕಿನ ಹಲಗೂರು ಸಮೀಪದ ತೊರೆಕಾಡನಹಳ್ಳಿಯಲ್ಲಿ ಕಾವೇರಿ 5ನೇ ಹಂತದಲ್ಲಿ ನಿರ್ಮಿಸಲಾದ ಜಲರೇಚಕ ಯಂತ್ರಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ನಗರದ ಪ್ರತಿ ಮನೆಗೂ ನೀರು ಪೂರೈಕೆ ಮಾಡೋದು ನಮ್ಮ ಸಂಕಲ್ಪ: ಡಿಕೆ ಶಿವಕುಮಾರ್

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಬೆಂಗಳೂರಿನಲ್ಲಿ 5ನೇ ಹಂತದ ಕಾವೇರಿ ನೀರು ಪೂರೈಕೆ ಯೋಜನೆಯನ್ನು ಉದ್ಘಾಟಿಸಲು ವಿಜಯ ದಶಮಿ ದಿನದಂದು ಸಿದ್ಧತೆ ನಡೆದಿದೆ. ಶುಭ ಗಳಿಗೆಯಲ್ಲಿ ಸಿಎಂ ಸಿದ್ರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಯಿಂದ ಬೆಂಗಳೂರಿಗೆ 10 ವರ್ಷ ನೀರಿನ ಸಮಸ್ಯೆ ಇರಲ್ಲ. ನಗರದ ಪ್ರತಿ ಮನೆಗೂ ನೀರು ಪೂರೈಕೆ ಮಾಡೋದು ನಮ್ಮ ಸಂಕಲ್ಪ. ಯಶವಂತಪುರ ಕ್ಷೇತ್ರದಲ್ಲಿ ಯೋಜನೆ ವಿಚಾರದಲ್ಲಿ ಸ್ವಲ್ಪ ಸಮಸ್ಯೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಸಮಸ್ಯೆ ಬಗೆಹರಿಸುತ್ತೇವೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Bengaluru Water Crisis: ನೀರಿನ ಬಿಕ್ಕಟ್ಟು ಪರಿಹರಿಸಲು ಬಂದಿವೆ 4 ಆ್ಯಪ್! ಇದರಿಂದೇನು ಪ್ರಯೋಜನ? ಇಲ್ಲಿದೆ ನೋಡಿ

ನಾನು ಕಣ್ಣಾರೆ ನೋಡಲು ಇಲ್ಲಿಗೆ ಬಂದಿದ್ದೇನೆ. ಕಿವಿಯಿಂದ ಕೇಳಿ ಕಾಮಗಾರಿ ಒಪ್ಪಿಗೆ ನೀಡಲ್ಲ. ಇದಕ್ಕಾಗಿ ನಾನಿಲ್ಲಿ ಬಂದಿದ್ದೇನೆ. ಡ್ರೈನೇಜ್ ಸಂಬಂಧಿಸಿದಂತೆ ಸಾವಿರ ಕೋಟಿ ರೂ. ಕಾಮಗಾರಿ ನಡೆಯುತ್ತಿದೆ. ಜೈಕಾ‌ ಜೊತೆ ಸಾಲದ ಒಪ್ಪಂದ ಮಾಡಿಕೊಂಡಿದ್ದೇವೆ. 110 ಕಿ.ಮೀ. ನೀರು ಸರಬರಾಜಿಗೆ 1.45 ಲಕ್ಷ ಮೆಗಾ ಟನ್ ಸ್ಟೀಲ್ ಪೈಪ್ ಬಳಕೆ ಮಾಡಲಾಗಿದೆ ಎಂದಿದ್ದಾರೆ.

ಕನಕಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ಪರವಾನಿಗೆ ಪಡೆದು ಕಾಮಗಾರಿ ಮಾಡಲಾಗುತ್ತಿದೆ. ಯಶವಂತಪುರ, ಬ್ಯಾಟರಾಯನಪುರ, ದಾಸರಹಳ್ಳಿ ಸೇರಿದೆ. ಬೆಂಗಳೂರು ಮೂರನೇ ಒಂದು ಭಾಗ 110 ಹಳ್ಳಿಗಳಿಗೆ ಕುಡಿಯುವ ನೀರಿನ ಪೂರೈಕೆ ಮಾಡಲಾಗುವುದು.

ಡಿಕೆ ಶಿವಕುಮಾರ್​ ಟ್ವೀಟ್ 

ಈ ಮೊದಲು 1450 ಎಂಎಲ್​ಡಿ ನೀರು ನಾಲ್ಕು‌ ಹಂತದಲ್ಲಿ ಸರಬರಾಜು ಮಾಡಲಾಗುವುದು. ಇದೀಗ ಒಂದೇ ಹಂತ‌ 750 ಎಂಎಲ್​ಡಿ ನೀರು ಸರಬರಾಜು ಮಾಡಲಾಗುತ್ತಿದೆ. 4 ಲಕ್ಷ ಹೊಸ ನೀರಿನ ಸಂಪರ್ಕ ಕೊಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಬೆಂಗಳೂರು ವಾಟರ್ ಸರ್ಪಲೆಸ್ ಮಾಡುವುದು ನಮ್ಮ ದಿಟ್ಟ ಹೆಜ್ಜೆ. ಇಡೀ ದೇಶದಲ್ಲಿ ಇದೇ ಅತಿ ದೊಡ್ಡ ನೀರಿನ ಯೋಜನೆ. ಬೆಂಗಳೂರು ನಗರಕ್ಕೆ ಸಾಕಷ್ಟು ಟೀಕೆ ಬಂದಿವೆ. ಈ ಯೋಜನೆಗೆ ಮಾರ್ವೆಲ್ ಅಂತ ಕರೀತಾರೆ. ಶಾಶ್ವತವಾಗಿ ಈ ಯೋಜನೆ ಮುಂದುವರೆಯಬೇಕು. ಕಾಟಾಚಾರಕ್ಕೆ ಕಾಮಗಾರಿ ಮಾಡಲ್ಲ. ದಸರಾ ಹಬ್ಬದೊಳಗೆ ಮಾಡಬೇಕಿತ್ತು ಆಗಲಿಲ್ಲ. ದಸರಾ ಹಬ್ಬಕ್ಕೆ 110 ಹಳ್ಳಿಗಳಿಗೆ ನೀರು ಸರಬರಾಜು ಮಾಡುವ ವಿಶ್ವಾಸವಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಕಾರು ವಾಷಿಂಗ್, ಗಾರ್ಡನ್​ಗೆ ನೀರು ಬಳಕೆ ಮಾಡಿದರೆ 5 ಸಾವಿರ ರೂ. ದಂಡ

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ತೊರೆಕಾಡನಹಳ್ಳಿ ಬೆಂಗಳೂರು ಜಲಮಂಡಳಿಯ ಪಂಪ್ ಹೌಸ್​​ಗೆ ಡಿಕೆ ಶಿವಕುಮಾರ್​ ಭೇಟಿ ನೀಡಿದ್ದು, ಕಾವೇರಿ 5ನೇ ಹಂತದಲ್ಲಿ 64 ದಶಲಕ್ಷ ಲೀಟರ್ ಸಾಮರ್ಥ್ಯದ ನೀರು ಶುದ್ಧೀಕರಣ ಯಂತ್ರಗಾರ ನಿರ್ಮಿಸಲಾಗಿದೆ. 775 ದಶಲಕ್ಷ ಲೀಟರ್ ಸಾಮರ್ಥ್ಯದ ಜಲರೇಚಕ ಘಟಕ ಪರಿಶೀಲನೆ ಮಾಡಿದ್ದರು. ಈ ವೇಳೆ ಎಸ್.ಟಿ.ಸೋಮಶೇಖರ್, ಪಿ.ಎಂ.ನರೇಂದ್ರಸ್ವಾಮಿ, ವಿಧಾನಪರಿಷತ್ ಸದಸ್ಯ ಎಸ್.ರವಿ ಸಾಥ್ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.