
ಬೆಂಗಳೂರು, ಜುಲೈ 31: ‘ಕಾವೇರಿ ನೀರು ಹಂಚಿಕೆ (Cauvery water Dispute) ಹಾಗೂ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕದೊಂದಿಗೆ ನೇರ ಮಾತುಕತೆ ಬೇಡ. ಮಾತುಕತೆ ನಡೆಸುವುದರಿಂದ ತಮಿಳುನಾಡಿಗೆ ಹಿನ್ನಡೆ ಆಗುತ್ತದೆ’ ಎಂದು ಸಿಎಂ ವಿಜಯ್ಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ (Edappadi K. Palaniswami) ಸಲಹೆ ನೀಡಿದ್ದಾರೆ.
ಸೇಲಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ, ‘ಕರ್ನಾಟಕ ಸರ್ಕಾರದೊಂದಿಗೆ ಸಿಎಂ ಜೋಸೆಫ್ ನೇರ ಮಾತುಕತೆ ನಡೆಸುವುದು ಬೇಡ, ಇದರಿಂದ ತಮಿಳುನಾಡಿಗೆ ರಾಜಕೀಯ ಹಾಗೂ ಕಾನೂನಾತ್ಮಕವಾಗಿ ಹಿನ್ನಡೆಯಾಗಲಿದೆ. ಕೋರ್ಟ್ ಆದೇಶದ ಮೂಲಕವೇ ಕಾವೇರಿ ನೀರು ಪಡೆದುಕೊಳ್ಳಬೇಕೆ ಹೊರತು ಮಾತುಕತೆಯಿಂದಲ್ಲ. ಕಾವೇರಿ ನೀರು ಹಾಗೂ ಮೇಕೆದಾಟು ಯೋಜನೆಯಲ್ಲಿ ಯಾವುದೇ ರಾಜೀ ಮಾಡಿಕೊಳ್ಳಬಾರದು. ತಮಿಳುನಾಡು ಸಿಎಂ ತಮ್ಮ ನಿರ್ಧಾರವನ್ನು ಮರುಪರಿಶೀಲಿಸುವಂತೆ’ ಆಗ್ರಹಿಸಿದರು.
ಕರ್ನಾಟಕ ಸರ್ಕಾರದ ಧೋರಣೆ ವಿರುದ್ಧ ವಾಗ್ದಾಳಿ ಮಾಡಿದ ಎಡಪ್ಪಾಡಿ ಕೆ. ಪಳನಿಸ್ವಾಮಿ, ‘ತಮಿಳುನಾಡು ಮುಖ್ಯಮಂತ್ರಿಗೆ ಕರ್ನಾಟಕಕ್ಕೆ ಭೇಟಿ ನೀಡುವಂತೆ ಆಹ್ವಾನ ನೀಡಿ, ಹೆಲಿಕಾಪ್ಟರ್ ವ್ಯವಸ್ಥೆ ಮಾಡುವುದಾಗಿ ಹೇಳಿರುವ ಕರ್ನಾಟಕ ಸರ್ಕಾರದ ಆಫರ್ನಿಂದ ತಮಿಳುನಾಡಿಗೆ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕಕ್ಕೆ ಭೇಟಿ ನೀಡುವ ಆಹ್ವಾನ ಎಂದರೆ ತಮಿಳುನಾಡಿಗೆ ನೀರು ನೀಡುವುದಿಲ್ಲ ಎಂದೇ ಅರ್ಥ’ ಎಂದು ಅವರು ಕಿಡಿಕಾರಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಸಿಎಂ ಬೆಂಗಳೂರಿಗೆ ಬರುವುದು ಬೇಡ ಎಂದ ಡಿಕೆ ಶಿವಕುಮಾರ್, ಕಾರಣವೇನು?
‘ತಮಿಳುನಾಡಿನ 20 ಜಿಲ್ಲೆಗಳಿಗೆ ಕಾವೇರಿ ನದಿಯೇ ಮುಖ್ಯ ಕುಡಿಯುವ ನೀರಿನ ಆಧಾರವಾಗಿದೆ. ಒಂದು ವೇಳೆ ಮೇಕೆದಾಟು ಅಣೆಕಟ್ಟು ನಿರ್ಮಾಣವಾದರೆ ತಮಿಳುನಾಡಿನ ಫಲವತ್ತಾದ ಡೆಲ್ಟಾ ಜಿಲ್ಲೆಗಳು ಸಂಪೂರ್ಣವಾಗಿ ಮರುಭೂಮಿಯಾಗಲಿವೆ. ಆದರೆ ಕರ್ನಾಟಕ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ಅವರು ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಕೈಬಿಡುವುದಿಲ್ಲ, ಅಣೆಕಟ್ಟು ಕಟ್ಟೇ ತೀರುತ್ತೇವೆ ಎಂದು ಹೇಳುತ್ತಿರುವುದು ತಮಿಳುನಾಡಿನ ರೈತರ ಹಿತಾಸಕ್ತಿಗೆ ಮಾರಕವಾಗಿದೆ. ಆದ್ದರಿಂದ ತಮಿಳುನಾಡು ಸರ್ಕಾರ ತನ್ನ ನಿರ್ಧಾರವನ್ನು ತಕ್ಷಣವೇ ಮರುಪರಿಶೀಲಿಸಬೇಕು’ ಎಂದು ಒತ್ತಾಯಿಸಲಾಗಿದೆ.
‘ಇನ್ನು ತಮಿಳುನಾಡಿನ ರೈತರ ಹಕ್ಕನ್ನು ಕಾಪಾಡಲು ರಾಜ್ಯದಲ್ಲಿ ತಕ್ಷಣವೇ ಸರ್ವಪಕ್ಷ ಸಭೆ ಕರೆಯಬೇಕು ಮತ್ತು ಡೆಲ್ಟಾ ಭಾಗದ ಮುಖ್ಯ ರೈತ ಸಂಘಟನೆಗಳನ್ನೂ ಈ ಸಭೆಗೆ ಆಹ್ವಾನಿಸಬೇಕು ಎಂದು ಎಡಪ್ಪಾಡಿ ಕೆ. ಪಳನಿಸ್ವಾಮಿ ಆಗ್ರಹಿಸಿದ್ದಾರೆ. ಮೇಕೆದಾಟು ಹಾಗೂ ಕಾವೇರಿ ವಿಷಯದಲ್ಲಿ ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗಟ್ಟು ಪ್ರದರ್ಶಿಸಬೇಕು ಹಾಗೂ ಕಾವೇರಿ ನೀರಿಗಾಗಿ ಕಾನೂನು ಹೋರಾಟದ ಜೊತೆಗೆ ರಾಜಕೀಯ ಒತ್ತಡವನ್ನು ತರಲು ಎಐಎಡಿಎಂಕೆ ಒತ್ತಾಯಿಸಿದೆ.’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:40 pm, Fri, 31 July 26