ಸಿಇಟಿ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ಗೊಂದಲ: ಕೆಇಎಗೆ ಮಾಜಿ ಶಿಕ್ಷಣ ಸಚಿವರ ಸಾಲು ಸಾಲು ಪ್ರಶ್ನೆ

ಸಿಇಟಿ ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ನಿಗದಿಪಡಿಸುವಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಎಡವಟ್ಟು ಮಾಡಿದೆ. ಅಲ್ಲದೆ ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿನೇ ದಿನೇ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ವಾಗ್ದಾಳಿ ಮಾಡಿದರು.

ಸಿಇಟಿ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ಗೊಂದಲ: ಕೆಇಎಗೆ ಮಾಜಿ ಶಿಕ್ಷಣ ಸಚಿವರ ಸಾಲು ಸಾಲು ಪ್ರಶ್ನೆ
ಮಾಜಿ ಸಚಿವ ಸುರೇಶ್​ ಕುಮಾರ್​
Edited By: ವಿವೇಕ ಬಿರಾದಾರ

Updated on: Apr 13, 2024 | 2:22 PM

ಬೆಂಗಳೂರು, ಏಪ್ರಿಲ್​ 13: ಸಿಇಟಿ ಪರೀಕ್ಷೆಗಳ (CET Exam) ಕುರಿತಂತೆ ಆಗಿರುವ ಗೊಂದಲ ಕುರಿತಂತೆ ನಾನು ವ್ಯಕ್ತ ಪಡಿಸಿರುವ ಆತಂಕದ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ನೀಡಿರುವ ಸ್ವಷ್ಟಿಕರಣವನ್ನು ಮಾಧ್ಯಮಗಳ ಮೂಲಕ ಗಮನಿಸಿದ್ದೇನೆ. ತಾನು ತೆಗೆದುಕೊಂಡ ಕ್ರಮಗಳನ್ನು ಸಮರ್ಥಿಸಿಕೊಳ್ಳುವ ಒಂದೇ ಉದ್ದೇಶದಿಂದ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಪ್ರಯತ್ನಿಸದೆ ಪರೀಕ್ಷಾ ಪ್ರಾಧಿಕಾರ ದಿನೇ ದಿನೇ ಸಮಸ್ಯೆಗಳನ್ನು ಹೆಚ್ಚಿಸುತ್ತಿದೆ ಎಂದು ಬಿಜೆಪಿ ಶಾಸಕ ಸುರೇಶ್​ ಕುಮಾರ್ (Suresh Kumar)​ ಆರೋಪ ಮಾಡಿದರು.

ಪರೀಕ್ಷಾ ಪ್ರಾಧಿಕಾರದ ಸ್ವಷ್ಟಿಕರಣದ ಹಿನ್ನೆಲೆಯಲ್ಲಿ ಈ ಕೆಳಕಂಡ ವಿಷಯಗಳಲ್ಲಿ ವಿವರ ನೀಡಬೇಕೆಂದು ಪ್ರಾಧಿಕಾರವನ್ನು ಕೇಳುತ್ತಿದ್ದೇನೆ.

  1. ಸಿಇಟಿ ಪರೀಕ್ಷೆಯ ಪರೀಕ್ಷಾ ವಿದ್ಯಾರ್ಥಿಗಳಿಗೆ ತಮ್ಮ ಮನೆಯಿಂದ ಏಪ್ರಿಲ್ 18,19 ರಂದು ನಡೆಯಲಿರುವ ಪರೀಕ್ಷೆಗಳ ಪರೀಕ್ಷಾ ಕೇಂದ್ರಗಳಿಗೆ ನಿಗದಿ ಮಾಡಿದ ಕನಿಷ್ಠ (minmam) ಮತ್ತು ಗರಿಷ್ಠ (maximum) ದೂರ ವೆಷ್ಟು?
  2. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡಲಾಗಿತ್ತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿ ಕೈ ತೊಳೆದುಕೊಂಡಿದೆ. ಇದು ನಿಜವಾದರೆ ಬೆಂಗಳೂರಿನ ಬಸವನಗುಡಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಯಲಹಂಕವನ್ನು, ಕೆಂಗೇರಿಯಲ್ಲಿ ವಾಸಿಸುವ ವಿದ್ಯಾರ್ಥಿಗಳು ಪೀಣ್ಯ ಕೇಂದ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದಾಗುತ್ತದೆ. ಇದು ನಿಜಕ್ಕೂ ವಿಚಿತ್ರ ಮತ್ತು ಅಸ್ವಾಬಾವಿಕ ಅನಿಸುವುದಿಲ್ಲವೆ?
  3. ಕರ್ನಾಟಕದಲ್ಲಿ ಸಿಇಟಿ ಪರೀಕ್ಷೆಗಳಿಗೆ ಅರ್ಜಿ ಹಾಕಿರುವ ವಿದ್ಯಾರ್ಥಿಗಳಿಗೆ ಅವರ ಜಿಲ್ಲೆಯಿಂದ ಹೊರಗಿನ ಜಿಲ್ಲಾ ಕೇಂದ್ರವನ್ನು ಘೋಷಿಸಿರುವ ಕುರಿತು ಜಿಲ್ಲಾವಾರು ಸಂಖ್ಯೆ ನೀಡುವುದು? ಯಾವ್ಯಾವ ಜಿಲ್ಲೆಗಳಿಂದ ಯಾವ್ಯಾವ ಜಿಲ್ಲೆಗಳಿಗೆ ಪರೀಕ್ಷಾ ಕೇಂದ್ರಗಳನ್ನು ಘೋಷಿಸಲಾಗಿದೆ? ಮತ್ತು ಜಿಲ್ಲೆಗಳ ಹೊರಗಿನ ಜಿಲ್ಲಾ ಕೇಂದ್ರ ನಿಶ್ಚಯ ಮಾಡಿರುವ ಕಾರಣ ತಿಳಿಸತಕ್ಕದ್ದು.
  4. ಕಲ್ಯಾಣ ಕರ್ನಾಟಕ ಭಾಗದ ರಾಜ್ಯದ ಪ್ರಭಾವಶಾಲಿ ಸಚಿವರೊಬ್ಬರು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಈ ಅವಾಂತರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ನಂತರ ಆ ಸಚಿವರ ಜಿಲ್ಲೆಯ ವಿದ್ಯಾರ್ಥಿಗಳಿಗೆ ಮಾತ್ರ ಅದೇ ಜಿಲ್ಲೆಯಲ್ಲಿ ಸಿಇಟಿ ಪರೀಕ್ಷೆ ಬರೆಯುವ ಅವಕಾಶ ನೀಡಿರುವುದು ನಿಜವಲ್ಲವೇ?

ಅನೇಕ ಪೋಷಕರು ತಮ್ಮ ಮಕ್ಕಳು ಬಹಳ ಮುಂಚಿತವಾಗಿಯೇ ಸಿಇಟಿ ಪರೀಕ್ಷೆಗಳಿಗೆ ಅರ್ಜಿ ಸಲ್ಲಿಸಿದರೂ ಸಹ, ಪರೀಕ್ಷಾ ಪ್ರವೇಶ ಪತ್ರಿಕೆ ಸಿಇಟಿ ಅಡ್ಮಿಷನ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳಲು ಸಾಧ್ಯವಾಗಿಲ್ಲದರ ಬಗ್ಗೆ ನನಗೆ ದೂರು ನೀಡಿದ್ದಾರೆ.

ಇದಕ್ಕೆ ಸಿಇಟಿ ಅಧಿಕಾರಿಗಳು ನೀಡುತ್ತಿರುವ ಉತ್ತರವೇನೆಂದರೆ ನೀಟ್ (NEET) ಪರೀಕ್ಷೆಗಳಿಗೆ ತಮ್ಮ ಆದ್ಯತೆ ತೋರಿಸಿರುವ ವಿದ್ಯಾರ್ಥಿಗಳಿಗೆ ಸಿಇಟಿ ಪರೀಕ್ಷೆ ಬರೆಯಲು ಅವಕಾಶವಿಲ್ಲವೆಂದು.

ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯುವುದರ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಇರುವ ತಕರಾರು ಏನು? ಪ್ರಾಧಿಕಾರದ ಈ ನಡೆ ವಿದ್ಯಾರ್ಥಿಗಳಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿ ಸಂಕಷ್ಟ ತಂದಿದೆ.

ಇದನ್ನೂ ಓದಿ: ಏ. 20, 21ರಂದು ನಿಗದಿಯಾಗಿದ್ದ ಸಿಇಟಿ ಪರೀಕ್ಷೆ ದಿನಾಂಕ ಬದಲು: ಇಲ್ಲಿದೆ ಪರಿಷ್ಕೃತ ವೇಳಾಪಟ್ಟಿ 

ಕರ್ನಾಟಕ ಪರೀಕ್ಷಾ ಪ್ರಾಧಿಕಾರವನ್ನು ಸೃಷ್ಟಿಸಿರುವುದು ಪಿಸಿಎಂ ಮತ್ತು ಪಿಸಿಬಿ ವಿಷಯಗಳಲ್ಲಿ ಪರೀಕ್ಷೆ ನಡೆಸಲು. ಮತ್ತು ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರವೇಶ ಪತ್ರಿಕೆ ನೀಡುವುದು ಪ್ರಾಧಿಕಾರದ ಕರ್ತವ್ಯ. ಯಾವ ಪರೀಕ್ಷೆ ಬರೆಯಬೇಕು ಎಂಬುದು ವಿದ್ಯಾರ್ಥಿಗಳು ನಿಶ್ಚಯ ಮಾಡಲಿ. ಅದು ಆ ವಿದ್ಯಾರ್ಥಿಗಳ ಮೂಲಭೂತ ಹಕ್ಕು. ಅದನ್ನು ಕಸಿದುಕೊಳ್ಳಲು ಪರೀಕ್ಷಾ ಪ್ರಾಧಿಕಾರಕ್ಕೆ ಅಧಿಕಾರವಿಲ್ಲ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಸಿಇಟಿ ಪರೀಕ್ಷೆ ಬರೆಯಲು ಅರ್ಜಿ ಸಲ್ಲಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲವಿಲ್ಲದಂತೆ ಪ್ರವೇಶ ಪತ್ರಿಕೆ ದೊರೆಯುವಂತೆ ಕ್ರಮ ವಹಿಸಬೇಕೆಂದು ಈ ಮೂಲಕ ಆಗ್ರಹಿಸುತ್ತೇನೆ.

ರಾಜರಾಜೇಶ್ವರಿ ನಗರದ ಪೋಷಕರು ನನಗೆ ದೂರು ನೀಡಿರುವಂತೆ ಅವರ ಮಗನಿಗೆ ಚಿತ್ರದುರ್ಗದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ. ಇದು ಯಾವ ನ್ಯಾಯ?

ರಾಜ್ಯದ ಮತ್ತಷ್ಟು ಸುದ್ದಿಗಳನ್ನುಓದಲು ಇಲ್ಲಿ ಕ್ಲಿಕ್​ ಮಾಡಿ

Web contact

TV9 Kannada

Read More
Follow Us