
ಚಾಮರಾಜನಗರ, ಮಾರ್ಚ್ 11: ಮಧ್ಯಪ್ರಾಚ್ಯದ ಕದನ (Middle East conflict) ಇಡೀ ವಿಶ್ವಕ್ಕೆ ತಲೆನೋವು ತಂದೊಡ್ಡಿದೆ. ದೇಶದೆಲ್ಲೆಡೆ ಗ್ಯಾಸ್ ಸಿಲಿಂಡರ್ ಅಭಾವ ಎದುರಾಗಿದೆ. ಇತ್ತ ಮಾದಪ್ಪನಿಗೂ (Male Mahadeshwara Hills) ಯುದ್ಧದ ಕಾರ್ಮೋಡ ಕವಿದಿದ್ದು, ಯುಗಾದಿ ಜಾತ್ರೆಗೆ ಅನ್ನದಾಸೋಹ ಮತ್ತು ಲಾಡು ಪ್ರಸಾದಕ್ಕೂ ಎಫೆಕ್ಟ್ ಆಗುವ ಸಾಧ್ಯತೆ ಇದೆ.
ಏಳು ಮಲೆ ಎಪ್ಪತ್ತೇಳು ಮಲೆ ಒಡೆಯ. ಕಲಿಯುಗದ ಕಲ್ಪತರು ಬೇಡಿದನ್ನ ಕರುಣಿಸುವ ಮಾಯ್ಕಾರ ಈ ಮಾದಪ್ಪ. ಈ ಮಾದಪ್ಪನಿಗೆ ಇದೀಗ ಇರಾನ್-ಇಸ್ರೇಲ್ ಯುದ್ದದ ಬಿಸಿ ತಟ್ಟಿದೆ. ದಿನನಿತ್ಯ ಸಾವಿರಾರು ಭಕ್ತರು ಅನ್ನದಾಸೋಹದ ಮೂಲಕ ಪ್ರಸಾದವನ್ನ ಸ್ವಿಕರಿಸುತ್ತಾರೆ. ಅದೇ ರೀತಿ ಲಾಡು ಪ್ರಸಾದ ತಯಾರಿಕೆಗೆ ಒಂದು ದಿನಕ್ಕೆ ಬರೋಬ್ಬರಿ 12ಕ್ಕೂ ಹೆಚ್ಚು ಸಿಲಿಂಡರ್ಗಳನ್ನು ಬಳಸಲಾಗುತ್ತಿದೆ. ಒಂದು ವಾರದವರೆಗೆ ದಾಸೋಹಕ್ಕೆ ಯಾವುದೇ ಸಮಸ್ಯೆಯಿಲ್ಲ. ಆದರೆ ಇದು ಹೀಗೆ ಮುಂದುವರೆದರೆ ಮಾದಪ್ಪನ ಬೆಟ್ಟದಲ್ಲಿ ಅನ್ನದಾಸೋಹಕ್ಕೆ ಹಾಗೂ ಲಾಡು ಪ್ರಸಾದಕ್ಕೆ ಬ್ರೇಕ್ ಬೀಳಲಿದೆ.
ಇದನ್ನೂ ಓದಿ: ಪಿಜಿಗಳಲ್ಲಿಲ್ಲ ಮಧ್ಯಾಹ್ನದ ಊಟ, ಶಾಲೆಗಳಲ್ಲಿ ಬಿಸಿಯೂಟ ತಯಾರಿಕೆಗೂ ಸಂಕಷ್ಟ: ಸಿಲಿಂಡರ್ ಕೊರತೆ ಮತ್ತಷ್ಟು ಉಲ್ಬಣ
ಪ್ರತಿ ವರ್ಷ 3 ಬಾರಿ ಮಾದಪ್ಪನ ಬೆಟ್ಟದಲ್ಲಿ ಬೃಹತ್ ಜಾತ್ರಾಮಹೋತ್ಸವ ನಡೆಯುತ್ತದೆ. ಈ ವೇಳೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಮಲೆ ಮಹದೇಶ್ವರ ಬೆಟ್ಟಕ್ಕೆ ಬರ್ತಾರೆ. ಲಕ್ಷಾಂತರ ಲಾಡು ಪ್ರಸಾದ ಮಾರಾಟವಾದರೆ, ಅನ್ನದಾಸೋಹಕ್ಕೆ ಆಗಮಿಸಿ ಪ್ರಸಾದ ಸೇವಿಸುತ್ತಾರೆ. ಜಾತ್ರೆಯ ವೇಳೆ ಕೇವಲ ದಾಸೋಹಕ್ಕೆ ಒಂದು ದಿನಕ್ಕೆ 12 ರಿಂದ 15 ಸಿಲಿಂಡರ್ ಬೇಕಾಗುತ್ತೆ. 2.50 ಲಕ್ಷ ಲಾಡು ತಯಾರಿ ಮಾಡಲು 20 ಕ್ಕೂ ಹೆಚ್ಚು ಸಿಲಿಂಡರ್ ಒಂದು ದಿನಕ್ಕೆ ಬಳಕ್ಕೆ ಮಾಡಲಾಗುತ್ತೆ. ಗ್ಯಾಸ್ ಸಿಲಿಂಡರ್ ಅಭಾವ ಹೀಗೆ ಮುಂದುವರೆದರೆ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರಿಗೆ ಲಾಡು ಪ್ರಸಾದ ಹಾಗೂ ಅನ್ನದಾಸೋಹ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದ್ದು, ಈಗಾಗಲೇ ಮಲೆ ಮಹದೇಶ್ವರ ಪ್ರಾಧಿಕಾರದ ಕಾರ್ಯದರ್ಶಿ ರಘು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲೂ ಸಿಲಿಂಡರ್ ಕೊರತೆ ಗದ್ದಲ: ಆಡಳಿತ ಮತ್ತು ವಿಕ್ಷದ ನಡುವೆ ವಾಕ್ಸಮರ
ಒಟ್ಟಿನಲ್ಲಿ ಮಧ್ಯಪ್ರಾಚ್ಯದ ಯುದ್ದದ ಎಫೆಕ್ಟ್ ಯುದ್ದದಲ್ಲಿ ಭಾಗಿಯಾಗದ ತಟಸ್ಥ ದೇಶದ ಮೇಲೆಯೂ ಇಂಪ್ಯಾಕ್ಟ್ ಆಗ್ತಾಯಿರುವುದು ನಿಜಕ್ಕೂ ದುರಂತವೇ ಸರಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.