
ಚಾಮರಾಜನಗರ, ಫೆಬ್ರವರಿ 20: ಬಿಳಿಗಿರಿ ಹುಲಿ ಸಂರಕ್ಷಿತಾರಣ್ಯದ ಕೊಳ್ಳೇಗಾಲ ವಲಯದಲ್ಲಿ ಇತ್ತೀಚೆಗೆ ನಡೆದಿದ್ದ ಉರುಳಿಗೆ ಸಿಲುಕಿ ಹುಲಿ ಸಾವು ಪ್ರಕರಣಕ್ಕೆ (Tiger death case) ಸಂಬಂಧಿಸಿದಂತೆ ಇದೀಗ ಉರುಳು ಹಾಕಿದ್ದ ಆರೋಪಿಯನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ (arrest). ಕೊಳ್ಳೇಗಾಲ ತಾಲೂಕಿನ ಕೊಂಗರಹಳ್ಳಿ ಗ್ರಾಮದ ಕುಮಾರ್(35) ಬಂಧಿತ ಬೇಟೆಗಾರ. ಆರೋಪಿ ವನ್ಯಜೀವಿ ಬೇಟೆಯಾಡಲು ಉರುಳು ಹಾಕಿದ್ದ. ಕೊಳ್ಳೇಗಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಫೆಬ್ರವರಿ 15ರಂದು ಬೃಹದಾಕಾರದ ಗಂಡು ಹುಲಿಯ ಮೃತದೇಹವೊಂದು ಗುಂಡಾಲ್ ಜಲಾಶಯದಲ್ಲಿ ತೇಲುತ್ತಿತ್ತು. ಸ್ಥಳಕ್ಕೆ ಭೇಟಿ ಕೊಟ್ಟ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಪರಿಶೀಲನೆ ನಡೆಸಿ ಪ್ರಾಥಮಿಕ ತನಿಖೆಯಲ್ಲಿ ಕತ್ತಿಗೆ ಉರುಳು ಸಿಲುಕಿ ಪರದಾಡಿ ಬಳಿಕ ನೀರು ಕುಡಿಯಲು ಬಂದಾಗ ನೀರಿನಲ್ಲಿ ಹುಲಿ ಬಿದ್ದು ಸಾವನ್ನಪ್ಪಿರುವುದು ಬೆಳಕಿಗೆ ಬಂದಿತ್ತು. ಹುಲಿಯ ಶ್ವಾಸಕೋಶದಲ್ಲಿ ನೀರು ಸಂಗ್ರಹವಾಗಿರುವುದು ತಿಳಿದುಬಂದಿತ್ತು.
ಇದನ್ನೂ ಓದಿ: ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು
ಇನ್ನು ಗುಂಡಾಲ್ ಜಲಾಶಯದ ಸುತ್ತಮುತ್ತ ಜಮೀನುಗಳಿವೆ. ಜಮೀನಿನಲ್ಲಿ ಬೆಳೆದ ಬೆಳೆಗಳನ್ನ ಕಾಡು ಹಂದಿಗಳು ಬಂದು ನಾಶ ಮಾಡುತ್ತಿರುತ್ತವೆ. ಹಾಗಾಗಿ ಕಾಡು ಹಂದಿಗಳ ಉಪಟಳಕ್ಕೆ ಬ್ರೇಕ್ ಹಾಕಲು ಕೆಲವರು ಬೈಕ್ ಕ್ಲಚ್ ಕೇಬಲ್ನ ಮೂಲಕ ಉರಳನ್ನ ಸಿದ್ಧಪಡಿಸಿ ಬೇಲಿ ಬಳಿ ಹಾಕಿರುತ್ತಾರೆ.
ಮೃತ ಹುಲಿ 6 ವರ್ಷದ ಗಂಡು ಹುಲಿ ಆಗಿದ್ದು, ಬರೋಬ್ಬರಿ 150 ಕೆಜಿಯಷ್ಟು ತೂಕವಿತ್ತು. ಇನ್ನು ಪೊಲೀಸರು ಉರುಳು ಹಾಕಿದವರ ಪತ್ತೆಗಾಗಿ ವಿಶೇಷ ತಂಡ ರಚನೆ ಮಾಡಿ ಶೋಧ ಕಾರ್ಯ ನಡೆಸಿದ್ದರು. ಅದರಂತೆ ಇದೀಗ ಓರ್ವ ಬೇಟೆಗಾರನ ಬಂಧನವಾಗಿದೆ. ಬೈಕ್ ಕ್ಲಚ್ ವೈರ್ ಬಳಸಿ ವನ್ಯಜೀವಿ ಬೇಟೆಗೆ ಆರೋಪಿ ಕುಮಾರ್ ಉರುಳು ಹಾಕಿದ್ದ.
ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ
ಆಹಾರ ಅರಸಿ ಬಂದಿದ್ದ ಹುಲಿ, ಉರುಳಿಗೆ ಸಿಲುಕಿ ನರಳಾಡಿ ಕೊನೆಗೆ ಗುಂಡಾಲ್ ಜಲಾಶಯದಲ್ಲಿ ಪ್ರಾಣ ಬಿಟ್ಟಿತ್ತು. ಕುಮಾರ್ ಜೊತೆ ಇನ್ನಿತರರು ಸೇರಿ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದ್ದು, ಸದ್ಯ ಅರಣ್ಯಾಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.