ಕೇರಳ ವಯನಾಡು ಗುಡ್ಡ ಕುಸಿತದಿಂದ ಪಾರಾಗಿ, ಮೂವರನ್ನ ರಕ್ಷಿಸಿದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ

| Updated By: ವಿವೇಕ ಬಿರಾದಾರ

Updated on: Aug 02, 2024 | 10:59 AM

ಕೇರಳದ ವಯನಾಡು ಜಿಲ್ಲೆಯಲ್ಲಿ ಭೀಕರ ಭೂಕುಸಿತ ದುರಂತದಲ್ಲಿ ಮೃತರ ಸಂಖ್ಯೆ 316ಕ್ಕೆ ಏರಿಕೆಯಾಗಿದೆ. 29 ಮಕ್ಕಳು ಸೇರಿದಂತೆ 316 ಜನ ಮೃತಪಟ್ಟಿದ್ದಾರೆ. 200ಕ್ಕೂ ಅಧಿಕ ಜನರಿಗೆ ಗಾಯಗಳಾಗಿವೆ. 298ಕ್ಕೂ ಅಧಿಕ ಜನರು ನಾಪತ್ತೆಯಾಗಿದ್ದಾರೆ. ಈ ನಡುವೆ ದುರಂತದಿಂದ ಪಾರಾಗಿ ಬಂದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ.

ಕೇರಳ ವಯನಾಡು ಗುಡ್ಡ ಕುಸಿತದಿಂದ ಪಾರಾಗಿ, ಮೂವರನ್ನ ರಕ್ಷಿಸಿದ ಕನ್ನಡಿಗನ ಸಾಹಸ ಕಥೆ ಇಲ್ಲಿದೆ
ಸ್ವಾಮಿಶೆಟ್ಟಿ
Follow us on

ಚಾಮರಾಜನಗರ, ಆಗಸ್ಟ್​ 02: ದೇವರನಾಡು ಕೇರಳ ರಾಜ್ಯದ ವಯನಾಡಿನಲ್ಲಿ ಸಂಭವಿಸಿದ ಗುಡ್ಡ ಕುಸಿತ (Wayanad land slide) ಮನ ಕಲಕುವಂತಿದೆ. ಗುಡ್ಡ ಕುಸಿತದಿಂದ ಅಪಾರ ಸಾವು ನೋವು ಸಂಭವಿಸಿದೆ. ಹಲವರು ನಾಪತ್ತೆಯಾಗಿದ್ದಾರೆ. ಕರ್ನಾಟಕದ ಆರು ಜನರು ಮೃತಪಟ್ಟಿದ್ದಾರೆ. ಇದೇ ಭೀಕರ ಗುಡ್ಡ ಕುಸಿತದಿಂದ ತಪ್ಪಿಸಿಕೊಂಡು ಬಚಾವ್​ ಆಗಿ ಬದುಕಿ ಬಂದ ಕನ್ನಡಿಗನ ರೋಚಕ ಕಥೆ ಇಲ್ಲಿದೆ. ಚಾಮರಾಜನಗರ (Chamrajnagar) ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ತ್ರಿಯಂಬಕಪುರ ಗ್ರಾಮದ ಸ್ವಾಮಿಶೆಟ್ಟಿ ಎಂಬುವರು ತಾವು ಸಾವಿನ ದವಡೆಯಿಂದ ಪಾರಾಗಿ ಬಂದದ್ದನ್ನು ಟಿವಿ9 ಡಿಜಿಟಲ್​ ಮುಂದೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

ಸ್ವಾಮಿಶೆಟ್ಟಿ ಅವರ ಅಣ್ಣ ವಯನಾಡು ಬಳಿಯ ಚೂರಲಮಲ ಗ್ರಾಮದಲ್ಲಿ ವಾಸವಾಗಿದ್ದರು. ಗುಡ್ಡ ಕುಸಿತವಾಗುವ ಎರಡು ದಿನ ಮುನ್ನ ಸ್ವಾಮಿಶೆಟ್ಟಿ ಅವರ ಅಣ್ಣ ನಿಧನರಾಗಿದ್ದರು. ಹೀಗಾಗಿ ಸ್ವಾಮಿಶೆಟ್ಟ ಅವರು ಅಂತ್ಯಸಂಸ್ಕಾರಕ್ಕೆಂದು ಚೂರಲಮಲ ಗ್ರಾಮಕ್ಕೆ ತೆರಳಿದ್ದರು. ಅಣ್ಣನ ವಿಧಿವಿಧಾನ ನೆರವೇರಿಸಲು ಅಲ್ಲಿಯೇ ತಂಗಿದ್ದರು.

ನಿರಂತರ ಮಳೆಯಿಂದ ಇರುವಝಿಂಜಿ ನದಿ ಅಪಾಯದ ಮಟ್ಟ ಮೀರಿ ಹರಿಯಲು ಆರಂಭಿಸಿದ್ದು, ಜುಲೈ 23 ರಂದು ನದಿಯ ತೆರೆಗಳು ದಡ್ಡಕ್ಕೆ ಸಮುದ್ರದ ಅಲೆಗಳಂತೆ ಅಪ್ಪಳಿಸಲು ಆರಂಭಿಸಿವೆ. ಇದನ್ನು ಕಂಡ ಸ್ವಾಮಿಶೆಟ್ಟಿ ಅವರು ಈ ವಿಚಾರವನ್ನು ತಮ್ಮ ಅತ್ತಿಗೆಗೆ ಹೇಳಿದ್ದಾರೆ. ಆದರೆ, ಅವರು ಏನು ಆಗಲ್ಲ, ಇದು ಸರ್ವೆ ಸಾಮಾನ್ಯ ಎಂದಿದ್ದಾರೆ. ಆದರೂ ಅನುಮಾನಗೊಂಡ ಸ್ವಾಮಿಶೆಟ್ಟಿ ರಾತ್ರಿ 8:30ರ ಸುಮಾರಿಗೆ ಕೊಟ್ಟಿಗೆಯಲ್ಲಿದ್ದ 6 ಹಸುಗಳನ್ನ ಬಿಚ್ಚಿದ್ದಾರೆ. ನಂತರ ರಾತ್ರಿ 11:30 ಗಂಟೆ ಸುಮಾರಿಗೆ ಮಲಗಿದ್ದ ವೇಳೆ ಯಾರೋ ಬಾಗಿಲು ತಟ್ಟಿದವರ ರೀತಿ ಸದ್ದಾಗಿದೆ. ಇಷ್ಟೊತ್ತಿನಲ್ಲಿ ಯಾರು ಬಂದಿರಬಹುದು ಅಂತ ಬಾಗಿಲು ತೆರೆದರೆ, ಪ್ರವಾಹಕ್ಕೆ ಕೊಚ್ಚಿಕೊಂಡು ಬಂದ ವಸ್ತು, ಮರದ ಕೊಂಬೆಗಳು ಒಮ್ಮೆಲೆ ಮನೆಯೊಳಗೆ ನುಗ್ಗಿವೆ.

ಪ್ರವಾಹದ ರಭಸಕ್ಕೆ ಸ್ವಾಮಿಶೆಟ್ಟಿ ಕೊಚ್ಚಿಕೊಂಡು ಮನೆಯ ಹಿಂದೆ ಹಾಕಿದ್ದ ಬೇಲಿಗೆ ತಗಲಾಕಿಕೊಂಡಿದ್ದಾರೆ. ಬೇಲಿಯನ್ನು ಹಿಡಿದುಕೊಂಡು ಅಲ್ಲೇ ಕುಳಿತಿದ್ದಾರೆ. ಬಳಿಕ ಬೇಲಿಯ ಸಹಾಯದಿಂದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿದ್ದಾರೆ. ಮನೆಯಲ್ಲಿದ್ದ ಇತರ ಮೂವರನ್ನು ಕರೆದುಕೊಂಡು ಮನೆ ಹಿಂದೆ ಇದ್ದ ಬೆಟ್ಟದ ಮೇಲೆ ಹತ್ತಿದ್ದಾರೆ. ಪ್ರಾಣ ಕಾಪಾಡಿಕೊಳ್ಳುವ ವೇಳೆ ಸ್ವಾಮಿ ಶೆಟ್ಟಿ ಅವರ ಎದೆ ಹಾಗೂ ಕಾಲಿಗೆ ಗಂಭೀರ ಗಾಯಗಳಾಗಿವೆ.

ಬಾರ್ಬರಿಕನಂತೆ ಗುಡ್ಡ ಕುಸಿತ ಕಂಡ ಸ್ವಾಮಿಶೆಟ್ಟಿ

ಬಾರ್ಬರಿಕನು ಭೀಮನ ಮೊಮ್ಮಗ ಮೌರವಿ ಯಾದವ ರಾಜನ ಮಗಳಾಗಿದ್ದಳು. ಕುರುಕ್ಷೇತ್ರ ಯುದ್ಧದಲ್ಲಿ ಭಾಗವಹಿಸಲು ಬಾರ್ಬರಿಕನಿಗೆ ಸಾಧ್ಯವಾಗಲಿಲ್ಲ. ಆದರೆ, ಯುದ್ಧಕ್ಕೆ ಸಾಕ್ಷಿಯಾದನು. ಬೇಡಿಕೆಯಂತೆ ಬಾರ್ಬರಿಕ ಶ್ರೀಕಷ್ಣನಿಗೆ ತನ್ನ ತಲೆಯನ್ನು ಕತ್ತರಿಸಿ ಕೊಟ್ಟನು . ಕೃಷ್ಣನು ಬಾರ್ಬರಿಕನ ತಲೆಯನ್ನು ಬೆಟ್ಟದ ತುದಿಯಲ್ಲಿ ಇರಿಸಿ, ಮಹಾಭಾರತದ ಯುದ್ಧಕ್ಕೆ ಸಾಕ್ಷಿಯಾಗುವಂತೆ ಹಾಗೂ ಎಲ್ಲವನ್ನೂ ವೀಕ್ಷಿಸಲು ಅನುವು ಮಾಡಿಕೊಟ್ಟನು. ಬಾರ್ಬರಿಕನಂತೆ ಸ್ವಾಮಿಶೆಟ್ಟಿ ಕೂಡ ಗುಡ್ಡ ಕುಸಿತ ಕಂಡಿದ್ದಾನೆ.

ಸ್ವಾಮಿಶೆಟ್ಟಿ ಅವರು ಗುಡ್ಡ ಏರುತ್ತಿದ್ದಂತೆ ಮತ್ತೊಮ್ಮೆ ಗುಡ್ಡ ಕುಸಿತವಾಗಿದೆ. ಕಣ್ಮುಂದೆಯೇ 20ಕ್ಕೂ ಹೆಚ್ಚು ಜನ ನೀರಿನಲ್ಲಿ ಕೊಚ್ಚಿ ಹೋದರು. ದನಕರಗಳು ಸಹ ನೀರಿನಲ್ಲಿ ಕೊಚ್ಚಿ ಹೋದ್ವು. ಕಣ್ಮುಂದೆಯೇ ಸಾವಿನ ಆಕ್ರಂದನ ಕಂಡರೂ ಏನು ಮಾಡದ ಅಸಹಾಯಕತೆಯಲ್ಲಿ ಸ್ವಾಮಿ ಶೆಟ್ಟಿ ಇದ್ದರು.

ಇದನ್ನೂ ಓದಿ: ವಯನಾಡಿನಲ್ಲಿ ಬೈಲಿ ಸೇತುವೆ ನಿರ್ಮಿಸಿದ ಸೇನಾಪಡೆ; ರಕ್ಷಣಾ ಕಾರ್ಯ ಇನ್ನು ಸುಗಮ

ಮರುದಿನ ಜು.24ರ ಮದ್ಯಾಹ್ನ 1.30ರ ನಂತರ ಸ್ವಾಮಿಶೆಟ್ಟಿ ಅವರ ಬಳಿ ರೆಸ್ಕ್ಯೂ ಟೀಂ ತಲುಪಿ, ಅವರನ್ನು ರಕ್ಷಿಸಿದೆ. ಬಳಿಕ ಆರೈಕೆ ಕೇಂದ್ರದಲ್ಲಿ ಅವರನ್ನು ಇರಿಸಲಾಗಿತ್ತು. ಆರೈಕೆ ಕೇಂದ್ರದಲ್ಲಿ ಕನ್ನಡ ಮಾತನಾಡುವುದನ್ನು ಕಂಡು ಗುಂಡ್ಲುಪೇಟೆ ಪಿಎಸ್ಐ ಪ್ರಕಾಶ್ ಸ್ವಾಮಿಶೆಟ್ಟಿಯರನ್ನು ಕರ್ನಾಟಕಕ್ಕೆ ಕಳಹುಸಿದ್ದಾರೆ. ಸ್ವಾಮಿಶೆಟ್ಟಿ ಅವರು ಸ್ವ ಗ್ರಾಮಕ್ಕೆ ಬಂದಿದ್ದಾರೆ.

ಸ್ವಾಮಿ ಶೆಟ್ಟಿಯನ್ನು ಕಾಪಾಡ್ತ ಸೂಸೆಯ ಹರಕೆ

ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆದ ಭೀಕರ ಗುಡ್ಡ ಕುಸಿತದ ಸುದ್ಧಿ ಟಿವಿಯಲ್ಲಿ ಬರುತ್ತಿದ್ದನ್ನು ಕಂಡು ಸ್ವಾಮಿಶೆಟ್ಟಿ ಅವರ ಸೊಸೆ ನಂದಿನಿ  ಚಡಪಡಿಸಲು ಆರಂಭಿಸಿದ್ದಾರೆ. ಮಾವ ಸ್ವಾಮಿಶೆಟ್ಟಿ ಅವರನ್ನು ಸಂಪರ್ಕಿಸಲು ಯತ್ನಿಸಿದ್ದಾರೆ ಆದರೆ ಸಾಧ್ಯವಾಗಿಲ್ಲ. ಇದರಿಂದ ಭಯಗೊಂಡ ನಂದಿನಿ “ಅಪ್ಪ ಸಿದ್ದಪ್ಪಾಜಿ ನನ್ನ ಮಾವ ಬದುಕಿ ಬಂದರೆ ನಿನಗೆ ವಿಶೇಷ ಅಲಂಕಾರ ಮಾಡಿಸುತ್ತೇನೆ” ಎಂದು ಹರಕೆ ಕಟ್ಟಿಕೊಂಡಿದ್ದಾರೆ. “ನಮ್ಮ ಮಾವ ಬದುಕಿ ಬರಲು ಹರಕೆ ಕಾರಣವೆಂದು” ಸೊಸೆ ನಂದಿನಿ ಭಾವುಕರಾಗಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:30 am, Fri, 2 August 24