ಚಾಮರಾಜನಗರ: ಮೀನಾಕ್ಷಿ ಸೋಮೇಶ್ವರ ದೇವಾಲಯದಲ್ಲಿ ಹರಕೆ ತೀರಿಸಿದ ಅನಿಲ್ ಕುಂಬ್ಳೆ ದಂಪತಿ
ಇಷ್ಟಾರ್ಥ ಸಿದ್ಧಿ ಹಿನ್ನಲೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿ ಇರುವ ಮೀನಾಕ್ಷಿ ಸೋಮೇಶ್ವರ ದೇವಾಲಯದಲ್ಲಿ ಮಾಜಿ ಕ್ರಿಕೆಟಿಗ, ಖ್ಯಾತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ದಂಪತಿ ಹರಕೆ ತೀರಿಸಿದ್ದಾರೆ. ಹುಣ್ಣಿಮೆ ದಿನ ತಾಯಿಯ ದರ್ಶನ ಪಡೆದ್ರೆ ಒಳಿತಾಗುತ್ತೆಂಬ ಪ್ರತೀತಿ ಇರುವ ಕಾರಣ ಇಂದೇ ಭೇಟಿ ನೀಡಿದ್ದಾರೆ ಎನ್ನಲಾಗಿದೆ.

ಚಾಮರಾಜನಗರ, ಅಕ್ಟೋಬರ್ 07: ಭಾರತದ ಮಾಜಿ ಕ್ರಿಕೆಟಿಗ, ಖ್ಯಾತ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ (Anil Kumble) ದಂಪತಿ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಬಳಿ ಇರುವ ಮೀನಾಕ್ಷಿ ಸೋಮೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಂದು ಕೊಂಡಿದ್ದ ಕಾರ್ಯ ನೆರವೇರಿದ ಹಿನ್ನಲೆ ಪತ್ನಿ ಜೊತೆ ದೇವಾಲಯಕ್ಕೆ ಆಗಮಿಸಿದ್ದು, ಕುಂಬ್ಳೆ ಪತ್ನಿ ಚೇತನಾ ದೇವರಿಗೆ ಮಡಿಲಕ್ಕಿ ಅರ್ಪಿಸಿದ್ದಾರೆ.
ಕೆಲ ಸಮಯ ದೇವಾಲಯದಲ್ಲೇ ಧ್ಯಾನಕ್ಕೆ ಜಾರಿದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹಾಗೂ ಪತ್ನಿ ಚೇತನಾ, ಷೋಡೋಪಚಾರ ಪೂಜೆಯಲ್ಲಿಯೂ ಭಾಗಿಯಾಗಿದ್ದಾರೆ. ಶ್ರೀ ಚಕ್ರ ಸಮೇತ ಪ್ರತಿಷ್ಠಾನವಾಗಿರುವ ಮೀನಾಕ್ಷಿ ಸೋಮೇಶ್ವರ ದೇವಾಲಯದ ಪಕ್ಕದಲ್ಲೇ ಇರೊ ಮದ್ಯ ರಂಗ ದೇವಾಲಯಕ್ಕೂ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಹುಣ್ಣಿಮೆ ದಿನ ತಾಯಿಯ ದರ್ಶನ ಪಡೆದ್ರೆ ಒಳಿತಾಗುತ್ತೆಂಬ ಪ್ರತೀತಿ ಇರುವ ಕಾರಣ, ಕುಂಬ್ಳೆ ದಂಪತಿ ಇಂದೇ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿದ್ದಾರೆ.
ಇದನ್ನೂ ಓದಿ: ನಾಳೆಯ ಹವಾಮಾನ: ಕರಾವಳಿ ಜಿಲ್ಲೆಗಳಲ್ಲಿ ವರುಣನ ಅಬ್ಬರ, ಉತ್ತರ ಕರ್ನಾಟಕ ಭಾಗದಲ್ಲಿ ಸಾಧಾರಣ ಮಳೆ
ಮೀನಾಕ್ಷಿ ಸೋಮೇಶ್ವರ ದೇವಾಲಯವು ತಮಾನಗಳಷ್ಟು ಸುಪ್ರಸಿದ್ಧ ಇತಿಹಾಸವನ್ನು ಹೊಂದಿದೆ. 8 ನೇ ಶತಮಾನದಲ್ಲಿ ಭಾರತದ ಉದ್ದಗಲಕ್ಕೂ ಸಂಚರಿಸಿದ ತತ್ವಜ್ಞಾನಿ ಮತ್ತು ಸಂತ ಆದಿ ಗುರು ಶ್ರೀ ಶಂಕರಾಚಾರ್ಯರಿಗೂ ಈ ದೇಗುಲಕ್ಕೂ ಸಂಬಂಧ ಇದೆ ಎನ್ನಲಾಗುತ್ತೆ. ದಂತಕಥೆಯ ಪ್ರಕಾರ, ಶಂಕರಾಚಾರ್ಯರು ತಮ್ಮ ಆಧ್ಯಾತ್ಮಿಕ ಯಾತ್ರೆಯ ಸಮಯದಲ್ಲಿ ಶಿವನಸಮುದ್ರಕ್ಕೆ ಭೇಟಿ ನೀಡಿ ದೇವಾಲಯದ ಆವರಣದಲ್ಲಿ ಪವಿತ್ರ ಶ್ರೀ ಚಕ್ರವನ್ನು ಸ್ಥಾಪಿಸಿದ್ದಾರೆ. ದೈವಿಕ ಶಕ್ತಿಯ ಈ ಸಂಕೇತ ಇವತ್ತಿಗೂ ಭಕ್ತರನ್ನ ತನ್ನತ್ತ ಸೆಳೆಯುತ್ತಿದೆ ಎನ್ನುವುದು ನಂಬಿಕೆ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




