ಸಿಎಂ ಸಿದ್ದರಾಮಯ್ಯ ವಿರುದ್ದ ದೂರು ನೀಡಿದ ಸ್ನೇಹಮಹಿ ಕೃಷ್ಣಗೂ ಸಂಕಷ್ಟ..!

ಸಿಎಂ ಸಿದ್ದರಾಮಯ್ಯ ವಿರುದ್ದ ದೂರು ನೀಡಿರುವ ಸ್ನೇಹಮಹಿಕೃಷ್ಣರ ವಿರುದ್ದವೇ ವಂಚನೆ ಪ್ರಕರಣ ದಾಖಲಾಗಿದೆ. ಈ ಹಿನ್ನಲೆ ಇಂದು ಚಾಮರಾಜನಗರ ನ್ಯಾಯಾಲಯಕ್ಕೆ ಭೇಟಿ ನೀಡಿ ವಿಚಾರಣೆ ಎದುರಿಸಿದ್ದಾರೆ. ಅಸಲಿಗೆ ಇವರ ವಿರುದ್ದ ದಾಖಲಾಗಿರುವ ವಂಚನೆ ಪ್ರಕರಣ ಆದರೂ ಏನು ಅಂತೀರಾ ಈ ಸ್ಟೋರಿ ಓದಿ.

ಸಿಎಂ ಸಿದ್ದರಾಮಯ್ಯ ವಿರುದ್ದ ದೂರು ನೀಡಿದ ಸ್ನೇಹಮಹಿ ಕೃಷ್ಣಗೂ ಸಂಕಷ್ಟ..!
ಸ್ನೇಹಮಹಿ ಕೃಷ್ಣ
Updated By: ಕಿರಣ್ ಹನುಮಂತ್​ ಮಾದಾರ್

Updated on: Sep 27, 2024 | 10:27 PM

ಚಾಮರಾಜನಗರ, ಸೆ.27: ಸಿಎಂ ಸಿದ್ದರಾಮಯ್ಯ ವಿರುದ್ದ ಕೇಳಿ ಬಂದಿರುವ ಮುಡಾ ಹಗರಣ ಕೆಲ ತಿಂಗಳಿಂದ ರಾಜ್ಯಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಅದರಂತೆ ಸಿಎಂ ವಿರುದ್ದ ದೂರು ನೀಡಿ ಕೊನೆಗೂ ಲೋಕಾಯುಕ್ತದಲ್ಲಿ ಎಫ್ ಐ ಆರ್ ದಾಖಲಾಗಿದೆ. ಈ ಪ್ರಕರಣದ ದೂರುದಾರ ಸ್ನೇಹಮಹಿ ಕೃಷ್ಣ(Snehamayi Krishna)ರವರ ವಿರುದ್ದವೇ ಈಗ ವಂಚನೆ ಆರೋಪ ಕೇಳಿ ಬಂದಿದೆ. ತನ್ನ ಸ್ನೇಹಿತ ಕರುಣಾಕರ್​ಗೆ 3 ಲಕ್ಷ ಹಣವನ್ನ ಸಾಲ ಪಡೆದು ಈಗ ವಂಚನೆ ಮಾಡಿದ್ದಾರೆಂದು ದೂರು ದಾಖಲಾಗಿದ್ದು, ಈ ಹಿನ್ನಲೆ ಇಂದು ಸ್ನೇಹಮಹಿ ಕೃಷ್ಣ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಯನ್ನ ಎದುರಿಸಿದ್ದಾರೆ.

ಅಸಲಿಗೆ ಕರುಣಾಕರ್ ವಿರುದ್ದ ಮೈಸೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಈ ವಿಚಾರವಾಗಿ ಸ್ನೇಹಮಹಿಕೃಷ್ಣರೇ ಕರುಣಾಕರ್​ಗೆ ಜಾಮೀನು ಕೊಡಿಸಿದ್ದರು. ಅದಾದ ಬಳಿಕ 50 ಸಾವಿರದಂತೆ ಒಟ್ಟು 3 ಲಕ್ಷ ಹಣವನ್ನ ಸಾಲದ ರೂಪದಲ್ಲಿ ನೀಡಿದ್ದರು. ಸಾಲ ಪಡೆದ ಬಳಿಕ ಪ್ರೊನೋಟ್ ಸಹ ಬರೆದು ಕೊಟ್ಟಿದ್ದರು. ಇತ್ತ ಬಡ್ಡಿಯೂ ನೀಡದೆ ಅತ್ತ ಹಣವನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದಾರೆಂದು ಕರುಣಾಕರ್ ಈಗ ನ್ಯಾಯಾಲಯ ಮೆಟ್ಟಿಲೇರಿದ್ದು, ಇಂದು ಚಾಮರಾಜನಗರದ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆಯನ್ನ ಎದುರಿಸಿದ್ದಾರೆ.

ಇದನ್ನೂ ಓದಿ:ಮುಡಾ ಕೇಸ್​ನಲ್ಲಿ ಸಿಎಂ ವಿರುದ್ಧ FIR: ದೂರುದಾರ ಸ್ನೇಹಮಹಿ ಕೃಷ್ಣ ಫಸ್ಟ್ ರಿಯಾಕ್ಷನ್

ಆದ್ರೆ, ಸ್ನೇಹಮಹಿಕೃಷ್ಣರ ವಾದವೇ ಬೇರೆ. ನಾನು ಪಡೆದಿದ್ದು ಕೇವಲ 50 ಸಾವಿರ ಹಣವಷ್ಟೇ ಬೇಕಂತಲೆ ಕರುಣಾಕರ್ ನನ್ನ ವಿರುದ್ದ ಸುಳ್ಳು ದೂರು ನೀಡಿದ್ದು, ನಾನು ಕಾನೂನು ಹೋರಾಟ ಮುಂದುವರೆಸುತ್ತೇನೆ ಎಂದು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ ಸಿಎಂ ವಿರುದ್ದವೇ ದೂರು ನೀಡಿ ಸುದ್ದಿಯಲ್ಲಿದ್ದ ಸ್ನೇಹಮಹಿಕೃಷ್ಣರ ವಿರುದ್ದ ವಂಚನೆ ಆರೋಪ ಕೇಳಿ ಬಂದಿದ್ದು, ಸಾಕಷ್ಟು ಹಲ್ ಚಲ್ ಸೃಷ್ಟಿಯಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ