
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 03: ಕರ್ತವ್ಯಲೋಪ ಹಾಗೂ ಅಕ್ರಮ ಖಾತೆಗಳ ವಿವಾದಗಳಿಗೆ ಪದೇಪದೇ ಸುದ್ದಿಯಾಗುತ್ತಿದ್ದ ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಮತ್ತೊಂದು ಭಾರೀ ಭ್ರಷ್ಟಾಚಾರದ ಜಾಲ ಬಯಲಾಗಿದೆ. ನಗರಸಭೆ ವ್ಯಾಪ್ತಿಗೇ ಸೇರದ, ಸುಮಾರು 100 ಕೋಟಿ ರೂಪಾಯಿ ಮೌಲ್ಯದ 24 ಎಕರೆ ಸರ್ಕಾರಿ ಬಿ-ಖರಾಬು ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಿ, ಬೆಂಗಳೂರು ಮೂಲದ ಖಾಸಗಿ ವ್ಯಕ್ತಿಯೊಬ್ಬರಿಗೆ ಅಕ್ರಮವಾಗಿ ಇ-ಖಾತೆ ಮಾಡಿಕೊಟ್ಟಿರುವ ಗಂಭೀರ ಆರೋಪ ಕೇಳಿಬಂದಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಅಣಕನೂರು ಗ್ರಾಮದ ಸರ್ವೆ ನಂಬರ್ 109ರಲ್ಲಿರುವ ಜಾಗವು ರೈಲ್ವೆ ಇಲಾಖೆ, ಕೆರೆಯಂಗಳ, ರಾಜಕಾಲುವೆ ಹಾಗೂ ಸರ್ಕಾರಿ ಬಿ-ಖರಾಬು ಜಮೀನನ್ನು ಒಳಗೊಂಡಿದೆ. ಇದು ನಗರಸಭೆಯ ಗಡಿಯಲ್ಲೇ ಬಾರದಿದ್ದರೂ, ಅಕ್ರಮವಾಗಿ ನಕಲಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗೆ ಧಾರೆ ಎರೆಯಲಾಗಿದೆ.
ಇದನ್ನೂ ಓದಿ: ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!
ಈ ಬೃಹತ್ ಹಗರಣದ ಸಂಪೂರ್ಣ ದಾಖಲೆಗಳನ್ನು ಕಲೆಹಾಕಿರುವ ನಗರಸಭೆಯ ಮಾಜಿ ಸದಸ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಅಮೀರ್ ಮೊಹಮ್ಮದ್ ಸಾಧಿಕ್, ನೇರವಾಗಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ನಗರಸಭೆಯ ಹಾಲಿ ಪೌರಾಯುಕ್ತ ಮನ್ಸೂರ್ ಅಲಿ ನೇತೃತ್ವದಲ್ಲೇ ಈ ಅಕ್ರಮ ನಡೆದಿದೆ ಎಂಬ ಆಪಾದನೆ ವ್ಯಕ್ತವಾಗಿದೆ. ಕಚೇರಿಯ ವ್ಯವಸ್ಥಾಪಕಿ ಸಿ.ಆರ್. ವೀಣಾ, ವಿಷಯ ನಿರ್ವಾಹಕಿ ನೀಲಾಂಬರಿ, ಕಂದಾಯ ನಿರೀಕ್ಷಕ ವಿ.ಆರ್. ವೆಂಕಟೇಶ ಹಾಗೂ ಕಂಪ್ಯೂಟರ್ ಆಪರೇಟರ್ ರಾಘವೇಂದ್ರ ಸೇರಿ ಈ ಜಾಲ ಹೆಣೆಯಲಾಗಿದೆ ಎನ್ನಲಾಗಿದೆ.
ಯಾವುದೇ ಭೂ ಪರಿವರ್ತನೆ (ಸಿಎಲ್ ಯು), ನಗರಾಭಿವೃದ್ಧಿ ಇಲಾಖೆಯ ಅಧಿಕೃತ ಅನುಮೋದನೆ, ನಕ್ಷೆ ಅಥವಾ ಮಾಲೀಕತ್ವದ ಪ್ರಾಥಮಿಕ ದಾಖಲೆಗಳೇ ಇಲ್ಲದಿದ್ದರೂ ಕಣ್ಣುಮುಚ್ಚಿ ಇ-ಖಾತೆ ಸೃಷ್ಟಿಸಿಕೊಟ್ಟಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಇನ್ನು ಹಗರಣದ ಕುರಿತು ಸ್ಪಷ್ಟನೆ ನೀಡಿರುವ ಪೌರಾಯುಕ್ತ ಮನ್ಸೂರ್ ಅಲಿ, ‘ಅರ್ಜಿ ಬಂದಾಗ ಕಣ್ತಪ್ಪಿನಿಂದ ಈ ಎಡವಟ್ಟಾಗಿದೆ. ಈಗ ಅದಕ್ಕೆ ಪಶ್ಚಾತ್ತಾಪವಾಗಿದ್ದು, ಖಾತೆಯನ್ನು ಕ್ಯಾನ್ಸಲ್ ಮಾಡಲು ಹಿರಿಯ ಅಧಿಕಾರಿಗಳಿಗೆ ಈಗಾಗಲೇ ವರದಿ ಸಲ್ಲಿಸಲಾಗಿದೆ’ ಎಂದು ಸಮರ್ಥಿಸಿಕೊಂಡಿದ್ದಾರೆ. ಆದರೆ, ಸಾರ್ವಜನಿಕರ ಆಸ್ತಿಯಾದ ಕೆರೆಯಂಗಳ, ರಾಜಕಾಲುವೆಯನ್ನೇ ನುಂಗಿ ಹಾಕಲು ಯತ್ನಿಸಿದ ಅಧಿಕಾರಿಗಳ ಈ ಬೇಜವಾಬ್ದಾರಿಯ ಹಿಂದೆ ರಿಯಲ್ ಎಸ್ಟೇಟ್ ಕುಳಗಳ ಪ್ರಭಾವ ಇರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ತಕ್ಷಣವೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಕೈಗೊಳ್ಳಬೇಕು ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.