ಎಸಿ ಕಚೇರಿ ಪಿಠೋಪಕರಣಗಳನ್ನ ಹೊತ್ತೊಯ್ದ ದೂರುದಾರರು: ಬೆಪ್ಪರಾಗಿ ನಿಂತ ಎಸಿ!

ಅದು ಸರ್ಕಾರಿ ಕಚೇರಿ ಅದರಲ್ಲೂ ಎಸಿ ಕಚೇರಿ, ಎಸಿ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಎಂದಿನಂತೆ ತಮ್ಮ ಕರ್ತವ್ಯಕ್ಕೆ ಹಾಜರಾಗಿ ತಮ್ಮ ಚೇರ್ ಗಳಲ್ಲಿ ಕೂತು ಬೆಳ್ಳಂಬೆಳಿಗ್ಗೆ ತಮ್ಮ ಕೆಲಸ ಕಾರ್ಯ ನಿರ್ವಹಿಸುತ್ತಿದ್ರು...ಆದ್ರೆ ಆ ಕಚೇರಿಗೆ ಬಂದ 10 ಜನರು, ಎಸಿ ಕೂತಿದ್ದ ಚೇರ್ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳು ಕೂತಿದ್ದ ಚೇರ್ ಗಳನ್ನೇ ಹೊತ್ತೊಯ್ದಿದ್ದಾರೆ. ಅಷ್ಟಕ್ಕೂ ಅದ್ಯಾಕೆ ಅಧಿಕಾರಿಗಳ ಚೇರ್ ನ್ನೇ ಹೊತ್ತೊಯ್ದಿದ್ದಾರೆ ಎನ್ನುವುದನ್ನು ಈ ಸ್ಟೋರಿ ನೋಡಿ.

ಎಸಿ ಕಚೇರಿ ಪಿಠೋಪಕರಣಗಳನ್ನ ಹೊತ್ತೊಯ್ದ ದೂರುದಾರರು: ಬೆಪ್ಪರಾಗಿ ನಿಂತ ಎಸಿ!
Edited By:

Updated on: Nov 13, 2024 | 4:51 PM

ಚಿಕ್ಕಬಳ್ಳಾಪುರ, (ನವೆಂಬರ್ 13): ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ. ಪ್ರಜಾಪ್ರಭುತ್ವದ ಸೊಬಗೇ ಅಂತಾದ್ದು. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಈ ಸಾಂವಿಧಾನಿಕ ಆಶಯವನ್ನೇ ಇವತ್ತು ಚಿಕ್ಕಬಳ್ಳಾಪುರ ಸೀನಿಯರ್​ ಸಿವಿಲ್ ಜಡ್ಜ್ ಕೋರ್ಟ್ ಎತ್ತಿ ಹಿಡಿದಿದ್ದು, ಚಿಕ್ಕಬಳ್ಳಾಪುರ ಎಸಿ ಕಚೇರಿಯನ್ನೇ ಜಪ್ತಿ ಮಾಡುವಂತೆ ದೂರುದಾರರಿಗೆ ಆದೇಶಿಸಿದೆ. ಅದರಂತೆ ದೂರುದಾರರು ಚಿಕ್ಕಬಳ್ಳಾಪುರ  ಎಸಿ ಕಚೇರಿಯಲ್ಲಿರುವ ಕಂಪ್ಯೂಟರ್, ಟೇಬಲ್, ಕೈಗೆ ಏನೇನು ಸಿಗುತ್ತೋ ಎಲ್ಲವನ್ನೂ ಹೊತ್ತುಕೊಂಡು ಹೋಗಿದ್ದಾರೆ. ಸಾಲದ್ದಕ್ಕೆ ಎಸಿ ಸಾಹೇಬ್ರು ಕೂರೋ ಖುರ್ಚಿಯನ್ನೂ ಸಹ ಬಿಡಲಿಲ್ಲ.

ತಪ್ಪು ಮಾಡಿ ಬೆಪ್ಪರಾಗಿ ನಿಂತರಾ ಸಹಾಯಕ ಆಯುಕ್ತರು?

ಪ್ರಜಾಪ್ರಭುತ್ವ ಭಾರತದಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಈ ಸಾಂವಿಧಾನಿಕ ಆಶಯವನ್ನೇ ಇಂದು ಚಿಕ್ಕಬಳ್ಳಾಪುರ ಸೀನಿಯರ್​ ಸಿವಿಲ್ ಜಡ್ಜ್ ಕೋರ್ಟ್ ಎತ್ತಿ ಹಿಡಿದಿರುವುದು. ತಪ್ಪು ಯಾರೇ ಮಾಡಿದ್ರು ತಪ್ಪು ಎನ್ನುವುದನ್ನು ಮುಲಾಜಿಲ್ಲದೆ ಹೇಳಿರೋ ಕೋರ್ಟ್, ಚಿಕ್ಕಬಳ್ಳಾಪುರ ಎಸಿ ಕಚೇರಿಯ ಚರಾಸ್ತಿ ಜಪ್ತಿ ಮಾಡುವಂತೆ ದೂರುದಾರರಿಗೆ ಆದೇಶಿಸಿದೆ. ಕೋರ್ಟ್​ ಆದೇಶದ ಬಲದಿಂದಲೇ ದೂರುದಾರರು ಎಸಿ ಕಚೇರಿಯ ಪೀಠೋಪಕರಣಗಳನ್ನು ಮುಲಾಜಿಲ್ಲದಂತೆ ತೆಗೆದುಕೊಂಡು ಹೋಗಿದ್ದಾರೆ. ಕಚೇರಿಯ ಚೇರ್​ಗಳನ್ನು ತೆಗೆದುಕೊಂಡು ಹೋಗಿತ್ತಿರುವುದನ್ನ ಸಹಾಯಕ ಆಯುಕ್ತ ಅಶ್ವಿನ್ ಬೆಪ್ಪರಾಗಿ ನಿಂತುಕೊಂಡಿದ್ದರು.

ಇಷ್ಟಕ್ಕೆಲ್ಲಾ ಕಾರಣ ಆಗಿದ್ದಿಷ್ಟು, ಅದು 2011ನೇ ಇಸವಿ. ಬಾಗೇಪಲ್ಲಿ ಡಿವಿಜಿ ರಸ್ತೆ ಅಗಲೀಕರಣಕ್ಕೆಂದು ಬೀದಿ ಬದಿ ಅಂಗಡಿ ಮುಂಗಟ್ಟುಗಳನ್ನು ಇಟ್ಟುಕೊಂಡಿದ್ದವರೆನ್ನೆಲ್ಲಾ ಸ್ಥಳಾಂತರಿಸಲಾಗಿತ್ತು. ಅಗಲೀಕರಣದ ವೇಳೆ ಜಾಗ ಕಳೆದುಕೊಂಡವರಿಗೆ ಪರಿಹಾರವೆಂದು ಜಿಲ್ಲಾಡಳಿತ ಒಂದು ಅಡಿಗೆ ಕೇವಲ 240 ರೂಪಾಯಿಗಳಂತೆ ಪಾವತಿ ಮಾಡಿತ್ತು. ಪರಿಹಾರದ ಮೊತ್ತ ಸಾಲದೇ ಇದ್ದಾಗ ಜಾಗ ಕಳೆದುಕೊಂಡವರು ಕೋರ್ಟ್​ ಮೆಟ್ಟಿಲೇರಿದರು. ಚಿಕ್ಕಬಳ್ಳಾಪುರದ ಸೀನಿಯರ್ ಸಿವಿಲ್​ ಜಡ್ಜ್​ ಮತ್ತು ಜೆಎಂಎಫ್​ಸಿ ಕೋರ್ಟ್​ ಜಾಗ ಕಳೆದುಕೊಂಡ ದೂರುದಾರರಿಗೆ ಪ್ರತಿ ಒಂದು ಅಡಿಗೆ 890 ರೂಪಾಯಿಗಳಂತೆ ಪರಿಹಾರ ನೀಡುವಂತೆ ಆದೇಶಿಸಿತ್ತು. ಕಳೆದ ಎರಡು ತಿಂಗಳ ಹಿಂದೆಯೇ ಕೋರ್ಟ್ ಆದೇಶ ಹೊರಡಿಸಿದರೂ ಚಿಕ್ಕಬಳ್ಳಾಪುರ ಎಸಿ ಪರಿಹಾರದ ಮೊತ್ತವನ್ನು ಕೊಟ್ಟಿರಲಿಲ್ಲ. ಜೊತೆಗೆ ಕೋರ್ಟ್ ಆದೇಶಕ್ಕೂ ಕೇರ್​ ಮಾಡದೆ ನಿರ್ಲಕ್ಷ್ಯವಹಿಸಿದ್ದಾರೆ. ಹೀಗಾಗಿ ಎಸಿ ಕಚೇರಿಯ ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವಂತೆ ದೂರುದಾರರಿಗೆ ಕೋರ್ಟ್​ ಆದೇಶಿಸಿದೆ.

ಚಿಕ್ಕಬಳ್ಳಾಪುರ ಎಸಿ ಕಚೇರಿ ಚರಾಸ್ತಿ ಮುಟ್ಟುಗೋಲಿಗೆ ಕೋರ್ಟ್​ ಆದೇಶಿಸುತ್ತಿದ್ದಂತೆಯೇ ದೂರುದಾರರು ಎಸಿ ಕಚೇರಿ ಹೊಕ್ಕಿದ್ದಾರೆ. 10ಕ್ಕೂ ಹೆಚ್ಚು ಜನ ದೂರುದಾರರು ಎಸಿ ಕಚೇರಿಯಲ್ಲಿದ್ದ ಕಂಪ್ಯೂಟರ್, ಟೇಬಲ್, ಗಾಡ್ರೆಜ್, ಖುರ್ಚಿಗಳನ್ನೆಲ್ಲಾ ಹೊತ್ತೊಯ್ದಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಕೊರ್ಟ್ ಸಿಬ್ಬಂದಿ ಹಾಗೂ ದೂರುದಾರ ವರ್ತಕರು, ಚಿಕ್ಕಬಳ್ಳಾಪುರದ ಎ.ಸಿ.ಕಚೇರಿಯಲ್ಲಿದ್ದ ಸಾಮಾಗ್ರಿಗಳನ್ನು ಜಪ್ತಿ ಮಾಡಿ ಬುದ್ದಿ ಕಲಿಸಿದ್ದಾರೆ.

ದೂರುದಾರ ವರ್ತಕರು ಕಚೇರಿಗೆ ನುಗ್ಗಿ ಪಿಠೋಪಕರಣಗಳನ್ನ ಹೊತ್ತೊಯ್ಯುತ್ತಿದ್ದರೆ, ಇರುಸು ಮುರುಸಿಗೊಳಗಾದ ಸಹಾಯಕ ಆಯುಕ್ತ ಅಶ್ವಿನ್, ಕೂರಲು ಚೇರ್ ಇಲ್ಲದೆ ಪ್ರತ್ಯೇಕ ಕೊಠಡಿ ಸೇರಿದ್ರು. ಇತ್ತ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಪ್ಪರಂತಾಗಿದ್ದರು. ಕೊನೆಗೆ ಸಾರ್ವಜನಿಕರ ಹಿತದೃಷ್ಠಿಯಿಂದ ಪಿಠೋಪಕರಣಗಳನ್ನು ವಾಪಸ್ ನೀಡುವಂತೆ ಎಸಿ ಮನವಿ ಮಾಡಿಕೊಂಡರು. ಅಲ್ಲದೆ ಎರಡು ತಿಂಗಳ ಕಾಲಾವಕಾಶ ಕೊಡಿ ಎಂದು ಎಸಿ ಕೇಳಿಕೊಳ್ಳುತ್ತಿದ್ದಂತೆ ಕರಗಿದ ದೂರುದಾರರು ಹಾಗೂ ನ್ಯಾಯಾಲಯ ಪಿಠೋಪಕರಣಗಳನ್ನು ವಾಪಸ್ ನೀಡಿ ಸಮಯಾವಕಾಶ ನೀಡಿದೆ.

ರಾಜ್ಯದ ಮತ್ತಷ್ಟ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:45 pm, Wed, 13 November 24

Bheemappa Patil

ಚಿಕ್ಕಬಳ್ಳಾಪುರ ಎಂಬ ಸುಂದರ ಊರು ನನಗೆ ಸುಂದರವಾದ ಬದುಕನ್ನು ಕಟ್ಟಿಕೊಟ್ಟಿದೆ. 18 ವರ್ಷಗಳಿಂದ ಹಗಲುರಾತ್ರಿ ಟಿವಿ9 ಕನ್ನಡ ಸುದ್ದಿವಾಹಿನಿಯಲ್ಲಿ ಹಿರಿಯ ವರದಿಗಾರನಾಗಿ ಜನ ಸೇವೆಯಲ್ಲಿದ್ದೇನೆ. ಶಿಕ್ಷಣವೆಲ್ಲ ಬೆಂಗಳೂರಿನಲ್ಲಿ. ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಪದವಿ. ಬೆಂಗಳೂರು ವಿವಿಯಲ್ಲಿ ಬಿ.ಸಿ.ಎ ವ್ಯಾಸಂಗ. ವಿದ್ಯಾರ್ಥಿದೆಸೆಯಿಂದಲೆ ಟಿವಿ9 ಕನ್ನಡದಲ್ಲಿ ಕೆಲಸ.

Read More
Follow Us