
ಚಿಕ್ಕಬಳ್ಳಾಪುರ, ಸೆಪ್ಟೆಂಬರ್ 2: ವಾರಾಂತ್ಯ ಬಂತೆಂದರೆ ಸಾಕು, ಬೆಂಗಳೂರಿನ ಹೆಚ್ಚಿನವರು ಭೇಟಿ ನೀಡುವ ನೆಚ್ಚಿನ ತಾಣ ಚಿಕ್ಕಬಳ್ಳಾಪುರ (Chikkaballapur) ತಾಲೂಕಿನ ವಿಶ್ವವಿಖ್ಯಾತ ಪ್ರವಾಸಿತಾಣ ನಂದಿಗಿರಿಧಾಮ (Nandi Hills) . ಆದರೆ, ಇದೀಗ ನಂದಿಗಿರಿಧಾಮಕ್ಕೆ ಸಂಜೆ ವೇಳೆ ಅಥವಾ ಮುಂಜಾನೆ ಹೋಗುವುದಾದರೆ, ಅದೂ ದ್ವಿಚಕ್ರ ವಾಹನದಲ್ಲಿ ಹೋಗುವುದಾದರೆ ಬಹಳ ಎಚ್ಚರಿಕೆ ಅಗತ್ಯ. ಬೆಟ್ಟದ ಕ್ರಾಸ್ನಿಂದ ಚಿಕ್ಕಬಳ್ಳಾಪುರದ ಕಡೆ ಬರುವ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಇತ್ತೀಚೆಗೆ ಚಿರತೆ ಕಾಣಿಸುವುದು ಹೆಚ್ಚಾಗಿದೆ. ಚಿಕ್ಕಬಳ್ಳಾಪುರದ ನಿವಾಸಿಯೊಬ್ಬರು ನಂದಿಗಿರಿಧಾಮಕ್ಕೆ ಹೋಗಿ ವಾಪಸ್ ಬರುವಾಗ ಅವರ ಕಾರಿಗೆ ಚಿರತೆ ಅಡ್ಡ ಬಂದಿದೆ.
ಚಿರತೆ ಹಾವಳಿ ಹೆಚ್ಚಾಗಿರುವುದರಿಂದ ಚಿಕ್ಕಬಳ್ಳಾಪುರ ನಂದಿಗಿರಿಧಾಮದ ರಸ್ತೆಯಲ್ಲಿ ರಾತ್ರಿಯಾದರೆ ಬೈಕ್ ಸವಾರರು ರಸ್ತೆಯಲ್ಲಿ ಸಂಚಾರ ಮಾಡುವುದನ್ನೇ ಬಿಟ್ಟಿದ್ದಾರೆ. ರಾತ್ರಿಯಾದರೆ ಸಾಕು ಚಿರತೆ ಭೀತಿ ಭಯ ಕಾಡುತ್ತಿದೆ ಎಂದು ಸ್ಥಳೀಯ ನಿವಾಸಿ ವೆಂಕಟೇಶ ಎಂಬವರು ತಿಳಿಸಿದ್ದಾರೆ.
ಇತ್ತೀಚಿಗೆ ಚಿಕ್ಕಬಳ್ಳಾಪುರ ತಾಲೂಕಿನ ವರ್ಲಕೊಂಡ ಬೆಟ್ಟದ ಬಳಿ, ಚಿರತೆಗಳ ಹಿಂಡು ಪ್ರತ್ಯೇಕ್ಷವಾಗಿ ರೈತರೊಬ್ಬರ ಮೇಲೆ ದಾಳಿ ಮಾಡಿತ್ತು. ಅದಾದ ನಂತರ ತಪ್ಪಿಸಿಕೊಂಡಿದ್ದ ಕೆಲವು ಚಿರತೆಗಳು ಎಲ್ಲಿವೆ ಎಂಬ ಮಾಹಿತಿ ತಿಳಿದಿರಲಿಲ್ಲ. ಆದರೆ, ಈಗ ನಂದಿಗಿರಿಧಾದ ಸುತ್ತಮುತ್ತ ಚಿರತೆಗಳು ಗಿರಕಿ ಹೊಡೆಯುತ್ತಿವೆ. ಅಲ್ಲಲ್ಲಿ ಸ್ಥಳೀಯರ ಕಣ್ಣಿಗೆ ಕಾಣಿಸುತ್ತಿವೆ. ಚಿಕ್ಕಬಳ್ಳಾಪುರ ತಾಲೂಕಿನ ಅಂಗಟ್ಟ, ಈರೇನಹಳ್ಳಿ ಸೇರಿದಂತೆ ಮೊಕ್ಷಗುಂಡಂ ಸರ್ ಎಂ. ವಿಶ್ವೇಶ್ವರಯ್ಯ ಮಾಸ್ಟರ್ ತರಬೇತಿ ಕೇಂದ್ರದ ಸುತ್ತಮುತ್ತ ಚಿರತೆಗಳು ಪತ್ತೆಯಾಗಿವೆ. ಇದರಿಂದ ಸ್ಥಳೀಯರು ಸಂಜೆಯಾದ ನಂತರ ಮನೆಯಿಂದ ಹೊರ ಬರಲು ಹಿಂದೇಟು ಹಾಕುತ್ತಿದ್ದಾರೆ. ಚಿರತೆಗಳನ್ನು ಹಿಡಿಯುವಂತೆ ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಡ್ಯಾನ್ಸ್ ಮಾಡುತ್ತಿರುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು ಇಬ್ಬರು ಸಾವು
ಚಿರತೆಗಳು ಪ್ರವಾಸಿಗರು ಹಾಗೂ ಸ್ಥಳಿಯರ ಮೇಲೆ ದಾಳಿ ಮಾಡುವುದಕ್ಕೂ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.