ನವವಿವಾಹಿತೆ ಸಂಸಾರ ಹಾಳು ಮಾಡಿದ ಆ ವಿಡಿಯೋ: ಮಾಜಿ ಲವರ್ ಮನೆ ಮುಂದೆ ಧರಣಿ ಕುಳಿತ ಮಹಿಳೆ
ಅವರಿಬ್ಬರೂ ಪರಸ್ಪರ ಪ್ರೀತಿಸಿ ಯಾವುದೋ ಕಾರಣಕ್ಕೆ ಬೇರೆಯಾಗಿದ್ರು. ಯುವತಿ ಎಲ್ಲವನ್ನು ಮರೆತು ಬೇರೊಬ್ಬರನ ಜೊತೆ ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದ್ದಳು. ಆದ್ರೆ ಮಾಜಿ ಪ್ರಿಯಕರ ಮಾಡಿದ ಅದೊಂದು ಕಿತಾಪತಿಗೆ ಆಕೆಯ ಸಂಚಾರವೇ ಛಿದ್ರ ಛಿದ್ರವಾಗಿದೆ. ಪತಿ ಜೊತೆಗೆ ಬದುಕಿ ಬಾಳಬೇಕಿದ್ದ ಆಕೆಯ ಸಾಂಸಾರಿಕ ಜೀವನ ತಿಂಗಳು ಕಳೆಯುವುದರ ಒಳಗೆ ಅಂತ್ಯ ಕಂಡಿದೆ. ಹೀಗಾಗಿ ನೊಂದ ಯುವತಿ ಮಾಜಿ ಪ್ರಿಯಕರನ ಮನೆ ಮುಂದೆ ಧರಣಿ ಕೂತಿದ್ದಾಳೆ.

ಚಿಕ್ಕಬಳ್ಳಾಪುರ, ಡಿಸೆಂಬರ್ 15: ಪ್ರೀತಿ ಹೆಸರಲ್ಲಿ ವಂಚಿಸಿ ಬೇರೆಯವರ ಜೊತೆ ಪ್ರಿಯತಮ ಮದುವೆ ಆಗುವ ವೇಳೆ ಕಲ್ಯಾಣ ಮಂಟಪಕ್ಕೇ ಸಂತ್ರಸ್ತೆಯರು ನುಗ್ಗಿ ರಾದ್ಧಾಂತ ನಡೆಸಿದ ಪ್ರಕರಣಗಳು ಕಳೆದೊಂದು ವಾರದಿಂದ ರಾಜ್ಯದಲ್ಲಿ ಸದ್ದು ಮಾಡುತ್ತಿವೆ. ಈ ನಡುವೆ ಚಿಕ್ಕಬಳ್ಳಾಪುರದಲ್ಲಿ ಇದಕ್ಕೆ ವಿರುದ್ಧ ಎನ್ನುವಂತಹ ಪ್ರಸಂಗವೊಂದು ನಡೆದಿದೆ. ಮದುವೆಯಾದ್ರೂ ಮಾಜಿ ಪ್ರಿಯತಮನ ಕಾಟ ತಪ್ಪದ ಹಿನ್ನೆಲೆ ರೊಚ್ಚಿಗೆದ್ದ ಯುವತಿಯೊಬ್ಬಳು ಆತನ ಮನೆ ಮುಂದೆಯೇ ಧರಣಿ ನಡೆಸಿದ್ದಾಳೆ.
ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಪಲಿಚರ್ಚು ಗ್ರಾಮದ ಅಂಬರೀಶ ಎಂಬಾತನ ಮನೆ ಎದುರು ಯುವತಿ ಧರಣಿ ನಡೆಸುತ್ತಿದ್ದು, ಬೇರೊಬ್ಬನ ಜೊತೆ ಆಕೆಯ ಮದುವೆಯಾದ್ರೂ ಬಿಡದೆ ಸಂಸಾರ ಮುರಿದ ಆರೋಪ ಕೇಳಿಬಂದಿದೆ. ಅಂಬರೀಶ ಹಾಗೂ ಈಕೆ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರಂತೆ. ಇನ್ನೇನು ಇಬ್ಬರು ಮದುವೆಯಾಗಬೇಕು ಎನ್ನುವಷ್ಟರಲ್ಲಿ ಅಂಬರೀಶ ಜಾತಿ ಹೆಸರು ಹೇಳಿ ಬೇರೆಯಾಗೋಣ ಎಂದಿದ್ದಾನೆ. ಇದಕ್ಕೆ ಈಕೆಯೂ ಒಪ್ಪಿಕೊಂಡಿದ್ದು, ಆ ಬಳಿಕ ಬೇರೆ ಯುವಕನನ್ನು ಮದುವೆ ಮಾಡಿಕೊಂಡಿದ್ದಳು. ಆದ್ರೆ ಮಾಜಿ ಪ್ರಿಯಕರ ಮಾಡಿದ ಕಿತಾಪತಿಗೆ ಈಕೆಯಸಂಸಾರ 20 ದಿನಗಳಲ್ಲೇ ಹಾಳಾಗಿದೆ.
ಇದನ್ನೂ ಓದಿ: ಇನ್ನೇನು ತಾಳಿ ಕಟ್ಟುವ ವೇಳೆಯಲ್ಲೇ ಮಂಟಪ್ಪಕ್ಕೆ ಪ್ರೇಯಸಿ ಎಂಟ್ರಿ; ಕಕ್ಕಾಬಿಕ್ಕಿಯಾದ ಪ್ರಿಯಕರ
ಇನ್ನು ಮಾಜಿ ಪ್ರಿಯಕರ ಅಂಬರೀಶ ಈಕೆಯ ಜೊತೆಗಿದ್ದಾಗ ತೆಗೆದುಕೊಂಡ ಖಾಸಗಿ ವಿಡಿಯೋ ಮತ್ತು ಪೋಟೊಗಳನ್ನ ಅವಳ ಗೆಳೆಯ ಸುನಿಲ್ ಎನ್ನುವವರಿಗೆ ರವಾನೆ ಮಾಡಿದ್ದನಂತೆ. ಆ ಸುನೀಲ ಈಕೆಯ ಮೇಲಿನ ವೈಯಕ್ತಿಕ ದ್ವೇಷದ ಕಾರಣಕ್ಕೆ ಅವನ್ನು ಯುವತಿಯ ಗಂಡನಿಗೆ ಕಳುಹಿಸಿದ್ದ. ಅದನ್ನು ನೋಡಿದ್ದೇ ತಡ ನಿನ್ನ ಸಹವಾಸವೇ ಬೇಡ ಎಂದು ಕಟ್ಟಿದ್ದ ಮಾಂಗಲ್ಯವನ್ನೂ ಕಿತ್ತುಕೊಂಡು ಗಂಡ ಈಕೆಯನ್ನು ತವರಿಗೆ ವಾಪಸ್ ಕಳುಹಿಸಿದ್ದಾನೆ. ಹೀಗಾಗಿ ನ್ಯಾಯಕ್ಕೆ ಆಗ್ರಹಿಸಿ ಯುವತಿ ಮಾಜಿ ಪ್ರಿಯಕರ ಅಂಬರೀಶ್ ಮನೆಯ ಎದುರು ಪ್ರತಿಭಟನೆ ನಡೆಸಿದ್ದಾಳೆ. ಆದ್ರೆ ಮನೆಗೆ ಮನೆಗೆ ಬೀಗ ಜಡಿದು ಅಂಬರೀಶ ನಾಪತ್ತೆಯಾಗಿದ್ದು, ಆತನ ವಿರುದ್ಧ ಶಿಡ್ಲಘಟ್ಟ ಗ್ರಾಮಾಂತರ ಠಾಣೆಗೆ ದೂರು ಕೂಡ ನೀಡಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:17 pm, Mon, 15 December 25




