
ಚಿಕ್ಕಮಗಳೂರು, ಮೇ 24: ಎಪಿಎಂಸಿಯಲ್ಲಿ ಬೀನ್ಸ್ ವ್ಯಾಪಾರಿಗಳಿಂದ ಬೆಲೆಯಲ್ಲಿ ಮೋಸವಾಗಿದೆ ಎಂದು ಆರೋಪಿಸಿ ನೂರಾರು ರೈತರು ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರಲ್ಲಿ (Chikkamagaluru) ನಡೆದಿದೆ. ಮೈಸೂರು ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಕೆಜಿಗೆ 85 ರಿಂದ 90 ರೂಪಾಯಿ ಇದ್ದು, ಚಿಕ್ಕಮಗಳೂರಿನಲ್ಲಿ ಕೇವಲ 40 ರೂಪಾಯಿಗೆ ಖರೀದಿಸಲಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಎಪಿಎಂಸಿ ಗೇಟ್ ಬಂದ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ.
ಬೀನ್ಸ್ಗೆ ಈ ಬಾರಿ ಉತ್ತಮ ಬೆಲೆ ಬಂದಿದೆ. ಮೈಸೂರು, ಬೆಂಗಳೂರು APMC ಮಾರುಕಟ್ಟೆಯಲ್ಲಿ 80 ರಿಂದ 90 ರೂಪಾಯಿ ಪ್ರತಿ ಕೆಜಿಗೆ ಮಾರಾಟವಾಗುತ್ತಿದೆ. ಆದರೆ ಚಿಕ್ಕಮಗಳೂರು APMC ಮಾರುಕಟ್ಟೆಯಲ್ಲಿ ಮಾತ್ರ ಇದರ ಅರ್ಧದಷ್ಟು ಬೆಲೆ ಎಂಬುದು ರೈತರ ಆರೋಪ. ಇಲ್ಲಿನ ವ್ಯಾಪಾರಿಗಳು ಕೆಜಿ ಬೀನ್ಸ್ನ ಕೇವಲ 40-60 ರೂಪಾಯಿಗೆ ಖರೀದಿಸುತ್ತಿದ್ದಾರೆ ಎಂಬುದು ರೈತರ ಆಕ್ರೋಶದ ಕಟ್ಟೆ ಒಡೆಯಲು ಕಾರಣವಾಗಿದೆ. ಈ ಸಂಬಂಧ ಪೊಲೀಸರ ಜೊತೆಗೆ APMC ಆವರಣದಲ್ಲಿ ಸಭೆ ನಡೆಸಲಾಗಿದೆಯಾದರೂ, ರೈತರು ಮಾತ್ರ ವರ್ತಕರು, APMC ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದ ಪ್ರಸಂಗ ನಡೆದಿದೆ.
ಇದನ್ನೂ ಓದಿ: ಕಾಮಗಾರಿ ವಿಚಾರವಾಗಿ ಹೈಡ್ರಾಮ; ಆಣೆ ಪ್ರಮಾಣ ಹಂತಕ್ಕೆ ತಲುಪಿದ ಸಿ.ಟಿ ರವಿ, ತಮ್ಮಯ್ಯ ಫೈಟ್!
ರೈತರ ಆಕ್ರೋಶ ಹೆಚ್ಚುತ್ತಿದ್ದಂತೆ ಸ್ಥಳಕ್ಕೆ ಬಂದ ಚಿಕ್ಕಮಗಳೂರು ತಹಶಿಲ್ದಾರ್ ರೇಷ್ಮಾ, ಎಸಿ ನಟೇಶ್ ರೈತರ ಸಭೆ ನಡೆಸಿದ್ದಾರೆ. ಹೀಗಿದ್ದರೂ APMC ಅಧಿಕಾರಿಗಳು ಮಾತ್ರ ನಾಪತ್ತೆಯಾಗಿದ್ದು, ಸ್ವತಃ ಎಸಿಯೇ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಅಧಿಕಾರಿಗಳು ಮಾತಿಗೆ ಸಿಕ್ಕಿಲ್ಲ ಎನ್ನಲಾಗಿದೆ. ಮಧ್ಯರಾತ್ರಿ 12ರ ವರೆಗೆ ರೈತರು ಪ್ರತಿಭಟನೆ ನಡೆಸಿದ್ದು, ಬೀನ್ಸ್ ದರ ನಿಗದಿ ಸೇರಿ ಜಿಲ್ಲಾಧಿಕಾರಿಗಳ ಜೊತೆ ರೈತರ ಸಭೆ ನಡೆಸುವ ಭರವಸೆಯನ್ನು ತಹಶೀಲ್ದಾರ್ ಮತ್ತು ಎಸಿ ನೀಡಿದ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.