AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೆಟ್ರೋ ರೈಲ್ವೆ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ

Bangaluru Metro News: ಬೆಂಗಳೂರು ನಮ್ಮ ಮೆಟ್ರೋದ ಹಳದಿ ಮಾರ್ಗದಲ್ಲಿ ದುರಂತವೊಂದು ಸಂಭವಿಸಿದೆ. 35 ವರ್ಷದ ವ್ಯಕ್ತಿ ರೈಲು ಹಳಿಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ರೈಲಿನ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ. ಘಟನೆ ಹಿನ್ನೆಲೆ ಎಲೆಕ್ಟ್ರಾನಿಕ್ ಸಿಟಿ ಟು ಬೊಮ್ಮಸಂದ್ರ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತಗೊಂಡಿದೆ.

ಮೆಟ್ರೋ ರೈಲ್ವೆ ಹಳಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ: ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಸ್ಥಗಿತ
ನಮ್ಮ ಮೆಟ್ರೋImage Credit source: tv9 kannada
ಕಿರಣ್​ ಸೂರ್ಯ
| Edited By: |

Updated on:Jul 27, 2026 | 8:55 PM

Share

ಮುಖ್ಯಾಂಶಗಳು

  • ಮೆಟ್ರೋ ರೈಲು ಹಳಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು
  • ನಮ್ಮ ಮೆಟ್ರೋ ಹಳದಿ ಮಾರ್ಗದ ಹುಸ್ಕೂರು ನಿಲ್ದಾಣದಲ್ಲಿ ಘಟನೆ
  • ​ರಾಯಚೂರು ಮೂಲದವರಾಗಿದ್ದ ರಾಜೇಶ್ ಹೀರೆಮಠ್​ ಮೃತ ವ್ಯಕ್ತಿ.

ಬೆಂಗಳೂರು, ಜುಲೈ 27: ನಮ್ಮ ಮೆಟ್ರೋದ (Namma Metro) ಆರ್‌ವಿ ರಸ್ತೆ-ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ ಹುಸ್ಕೂರು ಮೆಟ್ರೋ ನಿಲ್ದಾಣದಲ್ಲಿ ಇಂದು ಸಂಜೆ 5:50ರ ಸುಮಾರಿಗೆ ವ್ಯಕ್ತಿಯೊಬ್ಬರು ರೈಲು ಹಳಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ರಾಜೇಶ್ ಹೀರೆಮಠ್ ಮೃತ ವ್ಯಕ್ತಿ. ಹಳಿಗೆ ರಾಜೇಶ್ ಜಿಗಿಯುತ್ತಿದ್ದಂತೆ ಸ್ಥಳದಲ್ಲಿದ್ದ ಮೆಟ್ರೋ ಸಿಬ್ಬಂದಿ ತಕ್ಷಣ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ರೈಲಿನ ಅಡಿಯಲ್ಲಿ ಸಿಲುಕಿಕೊಂಡಿದ್ದರಿಂದ ವ್ಯಕ್ತಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ಬಿಎಂಆರ್‌ಸಿಎಲ್ (BMRCL) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ನಡೆದಿದ್ದೇನು?

ಮೂಲತಃ ರಾಯಚೂರು ಮೂಲದವರಾಗಿದ್ದ ರಾಜೇಶ್ ಹೀರೆಮಠ್​​ ನ್ಯೂಸ್ ಫಸ್ಟ್ ಪ್ರೈಮ್ ಯೂಟ್ಯೂಬ್ ಇಂಗ್ಲಿಷ್​ ಚಾನಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಕಳೆದ ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದರು. ಇನ್ನು ಇತ್ತೀಚೆಗೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಸೋಮವಾರ ಸಂಜೆ 5-50ಕ್ಕೆ ಹುಸ್ಕೂರ್ ಮೆಟ್ರೋ ನಿಲ್ದಾಣಕ್ಕೆ ಆಗಮಿಸಿದ್ದ ರಾಜೇಶ್, ಹಳದಿ ಮಾರ್ಗದ ಮೆಟ್ರೋ ಹಳಿ​ಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೂಡಲೇ ಪವರ್ ಆಫ್ ಮಾಡಿ ಮೆಟ್ರೋ ಸಿಬ್ಬಂದಿ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಮೆಟ್ರೋ ರೈಲಿನ ಕೆಳಗೆ ಸಿಲುಕಿದ್ದರಿಂದ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಹಸಿರು ಮಾರ್ಗದಲ್ಲಿ ವಿದ್ಯುತ್ ತಾಂತ್ರಿಕ ದೋಷ: ಯಶವಂತಪುರ – ಮಾದಾವರ ನಡುವೆ ರೈಲು ಸಂಚಾರ ವ್ಯತ್ಯಯ!

ಇನ್ನು ಘಟನೆ ಸಂಭವಿಸಿದ ತಕ್ಷಣ ಸ್ಥಳಕ್ಕೆ ಹಿರಿಯ ಮೆಟ್ರೋ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದರು. ಪ್ರಯಾಣಿಕರು ತಮ್ಮ ಪ್ರಯಾಣವನ್ನು ಪರ್ಯಾಯವಾಗಿ ಯೋಜಿಸಿಕೊಳ್ಳುವಂತೆ ಬಿಎಂಆರ್‌ಸಿಎಲ್​​ ಮನವಿ ಮಾಡಿದ್ದು, ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದೆ.

ರೈಲಿನ ಕೆಳಗೆ ಸಿಲುಕಿರುವ ಮೃತದೇಹವನ್ನು ಮೆಟ್ರೋ ಸಿಬ್ಬಂದಿ, ಹೆಬ್ಬಗೋಡಿ ಪೊಲೀಸರು ಶವ ಹೊರತೆಗೆದಿದ್ದು, ಆ್ಯಂಬುಲೆನ್ಸ್​ನಲ್ಲಿ ಸೇಂಟ್​ ಜಾನ್ಸ್​ ಆಸ್ಪತ್ರೆ ಶವಾಗಾರಕ್ಕೆ ಶಿಫ್ಟ್ ಮಾಡಿದ್ದಾರೆ. ಹುಸ್ಕೂರು ಮೆಟ್ರೋ ನಿಲ್ದಾಣಕ್ಕೆ ಆಗ್ನೇಯ ವಿಭಾಗ ಡಿಸಿಪಿ ಮೊಹಮ್ಮದ್ ಸುಜಿತಾ ಭೇಟಿ ನೀಡಿ ಪರಿಶೀಲಿಸಿದರು.

ಮೆಟ್ರೋ ಸಂಚಾರ ಸ್ಥಗಿತ

ಸದ್ಯ ಎಲೆಕ್ಟ್ರಾನಿಕ್ ಸಿಟಿಯಿಂದ ಬೊಮ್ಮಸಂದ್ರ ನಡುವಿನ ಒಟ್ಟು 5 ಮೆಟ್ರೋ ನಿಲ್ದಾಣಗಳ ನಡುವೆ ರೈಲು ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಪ್ರಸ್ತುತ ಆರ್‌ವಿ ರೋಡ್‌ನಿಂದ ಎಲೆಕ್ಟ್ರಾನಿಕ್ ಸಿಟಿ ನಡುವೆ ಮಾತ್ರ ಮೆಟ್ರೋ ರೈಲುಗಳ ಸಂಚಾರ ಮಾಡುತ್ತಿವೆ.

ಮೆಟ್ರೋ ಕಾಮಗಾರಿ ಕ್ರೇನ್ ಏರಿ ವ್ಯಕ್ತಿಯಿಂದ ಹುಚ್ಚಾಟ

ಬೆಂಗಳೂರಿನ ಮಾರತಹಳ್ಳಿ ಸಮೀಪ ರಾತ್ರಿ ವೇಳೆ ಹೈಡ್ರಾಮಾವೊಂದು ನಡೆದಿದೆ. ಮೆಟ್ರೋ ಕಾಮಗಾರಿ ಸ್ಥಳದಲ್ಲಿದ್ದ ಬೃಹತ್ ಕ್ರೇನ್ ಏರಿದ ವ್ಯಕ್ತಿಯೊಬ್ಬ ಕೆಳಗಿಳಿಯಲಾಗದೆ ಒದ್ದಾಡಿದ ಘಟನೆ ಬೆಳಗಿನ ಜಾವ 1:30ರ ಸುಮಾರಿಗೆ ನಡೆದಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ತಕ್ಷಣವೇ ಮತ್ತೊಂದು ಕ್ರೇನ್ ವ್ಯವಸ್ಥೆ ಮಾಡಿ ಸತತ ಪ್ರಯತ್ನದ ಬಳಿಕ ವ್ಯಕ್ತಿಯನ್ನು ಸುರಕ್ಷಿತವಾಗಿ ಕೆಳಗೆ ಇಳಿಸಿದ್ದಾರೆ. ಕ್ರೇನ್‌ನಿಂದ ಕೆಳಗಿಳಿಸಿದ ತಕ್ಷಣ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತ ಮಧ್ಯರಾತ್ರಿ ಮೆಟ್ರೋ ಕಾಮಗಾರಿಯ ಕ್ರೇನ್ ಅನ್ನು ಯಾವ ಕಾರಣಕ್ಕಾಗಿ ಹತ್ತಿದ್ದ ಎಂಬ ಕುರಿತು ಇನ್ನು ಮಾಹಿತಿ ಲಭ್ಯವಾಗಿಲ್ಲ. ಈ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:57 pm, Mon, 27 July 26

Follow Us