ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು

ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ. ಛತ್ರಿಮರ ದೇಗುಲ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. 26 ಕಾಡಾನೆಗಳೊಂದಿಗೆ ರಾತ್ರೋರಾತ್ರಿ ಬೀಟಮ್ಮ ಗ್ಯಾಂಗ್ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ.

ಮುಂದುವರೆದ ಬೀಟಮ್ಮ ಗ್ಯಾಂಗ್ ಉಪಟಳ; ಛತ್ರಿಮರ ದೇಗುಲ ಬಳಿ ಬೀಡುಬಿಟ್ಟ 26 ಕಾಡಾನೆಗಳು
ಬೀಟಮ್ಮ ಗ್ಯಾಂಗ್
Follow us
| Updated By: ಆಯೇಷಾ ಬಾನು

Updated on: Feb 13, 2024 | 10:01 AM

ಚಿಕ್ಕಮಗಳೂರು, ಫೆ.13: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಬೀಟಮ್ಮ ಗ್ಯಾಂಗ್ (Beetamma Gang) ಉಪಟಳ ಹೆಚ್ಚಾಗುತ್ತಲೇ ಇದೆ. ಚಿಕ್ಕಮಗಳೂರು (Chikkamagaluru) ಹೊರವಲಯದ ಇಂದಾವರ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ. ಛತ್ರಿಮರ ದೇಗುಲ ಬಳಿ ಕಾಡಾನೆಗಳು ಬೀಡುಬಿಟ್ಟಿವೆ. 26 ಕಾಡಾನೆಗಳೊಂದಿಗೆ ರಾತ್ರೋರಾತ್ರಿ ಬೀಟಮ್ಮ ಗ್ಯಾಂಗ್ ಗ್ರಾಮಕ್ಕೆ ಎಂಟ್ರಿ ಕೊಟ್ಟಿವೆ. ಚಿಕ್ಕಮಗಳೂರು ನಗರ ಪ್ರವೇಶಿಸದಂತೆ ಇಂದಾವರ ಗ್ರಾಮದ ಸುತ್ತ ಅರಣ್ಯ ಇಲಾಖೆ, ETF ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ.

ಕಳೆದ 20 ದಿನಗಳಿಂದ ಬೀಟಮ್ಮ ಗ್ಯಾಂಗ್ ಚಿಕ್ಕಮಗಳೂರು ತಾಲೂಕಿನ ವ್ಯಾಪ್ತಿಯಲ್ಲಿ ಸಂಚಾರ ಮಾಡುತ್ತಿವೆ. ಮುತ್ತೋಡಿ ಅರಣ್ಯಕ್ಕೆ ಕಾಡಾನೆ ಓಡಿಸಲು ಅರಣ್ಯ ಇಲಾಖೆ ಪ್ರಯತ್ನಿಸಿತ್ತು. ಆಗ ಮುತ್ತೋಡಿ ಅರಣ್ಯದ‌ ಸಮೀಪದ ಗ್ರಾಮಕ್ಕೆ ತೆರಳಿ ಬೀಟಮ್ಮ ಗ್ಯಾಂಗ್ ವಾಪಸ್ ಆಗಿತ್ತು. ಸದ್ಯ ಈಗ ಚಿಕ್ಕಮಗಳೂರು ನಗರದ ಹೊರವಲಯದ ಇಂದಾವರ ಗ್ರಾಮದಲ್ಲಿ ಬೀಟಮ್ಮ ಗ್ಯಾಂಗ್ ಬೀಡುಬಿಟ್ಟಿದೆ.

ಬೀಟಮ್ಮ ಗ್ಯಾಂಗ್ ಬಲಿಷ್ಠವಾಗಿದೆ. ಸಿಕ್ಕ ಸಿಕ್ಕ ಕಡೆಗಳಲ್ಲಿ ದಾಳಿ ನಡೆಸಿ ಸಿಕ್ಕ ಆಹಾರ ತಿನ್ನುತ್ತಿವೆ. ಇವುಗಳ ಕಾರ್ಯಚರಣೆಗೆ ಕರೆಸಿದ್ದ ಕುಮ್ಕಿ ಆನೆಗಳ ಮೇಲೂ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಆಗ ರಾತ್ರೋರಾತ್ರಿ ಅರಣ್ಯ ಇಲಾಖೆಯವರು ಮೂಡಿಗೆರೆಯ ಹಳೆ ಕೋಟೆಗೆ ಅಭಿಮನ್ಯು & ಟೀಂ ಅನ್ನ ಸ್ಥಳಾಂತರ ಮಾಡಿದ್ದರು.

ಇದನ್ನೂ ಓದಿ: Belagavi: ಚುನಾವಣೆ ಹೊತ್ತಲ್ಲೇ ಬೆಳಗಾವಿ ಜಿಲ್ಲೆ ವಿಭಜನೆಗೆ ಆಸಕ್ತಿ ತೋರಿಸಿದ ಸರ್ಕಾರ

ಕುಮ್ಕಿ ಕ್ಯಾಂಪ್‌ನಲ್ಲಿದ್ದ ಅಭಿಮನ್ಯು, ಮಹೇಂದ್ರ, ಭೀಮ, ಧನಂಜಯ, ಸುಗ್ರೀವ, ಹರ್ಷ, ಅಶ್ವತ್ಥಾಮ, ಪ್ರಶಾಂತ ಹೆಸರಿನ ಆನೆಗಳು ಮತ್ತಾವರ ಗ್ರಾಮದ ಅರಣ್ಯ ಇಲಾಖೆಯ ಗೆಸ್ಟ್ ಹೌಸ್ ನಲ್ಲಿ ಇರಿಸಲಾಗಿತ್ತು. ಆಗ ಬೀಟಮ್ಮ ಗ್ಯಾಂಗ್ ದಾಳಿ ನಡೆಸಿತ್ತು. ಇದರಿಂದ ಭಯಗೊಂಡ ಅರಣ್ಯ ಸಿಬ್ಬಂದಿ ಅಭಿಮನ್ಯ ಟೀಮನ್ನು ಮೂಡಿಗೆರೆಗೆ ಶಿಫ್ಟ್ ಮಾಡಿದ್ದರು.

ಅನಾವಶ್ಯಕವಾಗಿ ಯಾರೂ ರಸ್ತೆಗೆ ಇಳಿಯಬೇಡಿ ಎಂದು ಗ್ರಾಮಸ್ಥರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಎಚ್ಚರಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಕೆಲಸವಿದ್ದರೆ ಬೆಳಗ್ಗೆ ಮಾಡಿಕೊಳ್ಳಿ ಎಂಬ ಮಾತುಗಳನ್ನು ಮೈಕ್ ಮೂಲಕ ಅನೌನ್ಸ್ ಮಾಡಿಸಿದ್ದಾರೆ. ಕಾಫಿ ತೋಟ ಹಾಗೂ ಇತರೆ ಕೆಲಸಗಳಿಗೆ ಅನಾವಶ್ಯಕವಾಗಿ ಹೋಗಬೇಡಿ ಎಂದು ಹೇಳಿದ್ದಾರೆ. ಆದರೆ ಇಲ್ಲಿನ ಜನರಲ್ಲಿ ಆನೆ ಭೀತಿ ಮಾತ್ರ ಕೊಂಚವೂ ಕಡಿಮೆಯಾಗಿಲ್ಲ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ