ಎಣ್ಣೆಗಾಗಿ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ ಅಧ್ಯಕ್ಷನಿಂದ ಹಲ್ಲೆ
ಕೊಪ್ಪದಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಎಂಬುವವರು ಬಾರ್ ಕ್ಯಾಷಿಯರ್ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಎಣ್ಣೆ ಕೊಡದ ಕಾರಣಕ್ಕೆ ಈ ಹಲ್ಲೆ ನಡೆದಿದೆ ಎನ್ನಲಾಗಿದೆ. ಬಾರ್ನ ಸಿಸಿಟಿವಿ ದೃಶ್ಯಗಳು ಹಲ್ಲೆಯನ್ನು ದೃಢಪಡಿಸುತ್ತವೆ. ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲಿ ಆತಂಕ ಮೂಡಿದೆ.
ಚಿಕ್ಕಮಗಳೂರು, ಮಾರ್ಚ್ 18: ಮದ್ಯ (Alchol) ಕೊಡಲಿಲ್ಲ ಎಂಬ ಕಾರಣಕ್ಕಾಗಿ ಬಾರ್ ಒಳಗೆ ನುಗ್ಗಿ ಕ್ಯಾಶಿಯರ್ ಮೇಲೆ ಯೂತ್ ಕಾಂಗ್ರೆಸ್ (Congress) ಅಧ್ಯಕ್ಷ ಮನಸ್ಸೋ ಇಚ್ಛೆ ಹಲ್ಲೆ ಮಾಡಿರುವ ಘಟನೆ ಕೊಪ್ಪ (Koppa) ಪಟ್ಟಣದಲ್ಲಿ ನಡೆದಿದೆ. ಕೊಪ್ಪ ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಶನಿವಾರ (ಮಾ. 15) ಮಧ್ಯರಾತ್ರಿ ಶ್ರೀಗಂಧ ಬಾರ್ಗೆ ಬಂದು ಎಣ್ಣೆ ಕೇಳಿದ್ದಾರೆ. ಕ್ಯಾಶಿಯರ್ ಎಣ್ಣೆ ಕೊಡಲು ನಿರಾಕರಿಸಿದ್ದಾರೆ. ಇದೇ ಕಾರಣಕ್ಕೆ ಭಾನುವಾರ (ಮಾ.16) ಬೆಳಗ್ಗೆ ತನ್ನ ಪಟಾಲಂ ಜೊತೆ ಬಂದ ವಿಜಯಾನಂದ್ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿದ್ದಾರೆ. ಹಲ್ಲೆ ಮಾಡುವ ದೃಶ್ಯ ಬಾರ್ ಸಿಸಿ ಕ್ಯಾಮೆರಾದಲ್ಲಿ ಸೇರೆಯಾಗಿದೆ.
ಅಲ್ಲದೇ, ಶ್ರೀಗಂಧ ಬಾರ್ ಕಾಂಗ್ರೆಸ್ ಮುಖಂಡ ಸುರೇಶ್ ಎಂಬುವವರಿಗೆ ಸೇರಿದೆ. ಇಷ್ಟೆಲ್ಲ ಗಲಾಟೆ ಹಲ್ಲೆ ನಡೆದಿದ್ದರೂ ಯೂತ್ ಕಾಂಗ್ರೆಸ್ ಅಧ್ಯಕ್ಷನ ಪರ ಬಾರ್ ಮಾಲೀಕ ನಿಂತಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡದೆ ರಾಜಿ ಪಂಚಾಯಿತಿ ನಡೆಸಿದರು.
ಇದನ್ನೂ ಓದಿ: ಸಮುದಾಯಗಳ ನಡುವೆ ಘರ್ಷಣೆ, ಕಲ್ಲು ತೂರಾಟ: ಬೆಳಗಾವಿ ಬೆಕ್ಕೇರಿ ಗ್ರಾಮದಲ್ಲಿ ಹೈ ಅಲರ್ಟ್
ಬಾರ್ನಲ್ಲಿ ವಿಜಯಾನಂದ್ ಮತ್ತು ಆತನ ಪಟಾಲಂ ನಡೆಸಿದ ಗುಂಡಾಗಿರಿ ನಡೆಸಿರುವ ವಿಡಿಯೋ ವೈರಲ್ ಆಗಿದ್ದು, ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಸೂಚನೆ ಮೇರೆಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಸೇರಿದಂತೆ ಏಳು ಜನರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ. ಹಲ್ಲೆಗೊಳಗಾದ ಕ್ಯಾಶಿಯರ್ಗೆ ಕೆಲಸಕ್ಕೆ ರಜೆ ನೀಡಲಾಗಿದ್ದು, ಹಲ್ಲೆ ಮಾಡಿದ ವಿಜಯಾನಂದ್ ಆ್ಯಂಡ್ ಟೀಮ್ ಬಂಧನ ಭೀತಿಯಿಂದ ಪರಾರಿಯಾಗಿದೆ.
ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದರೂ, ಎಣ್ಣೆ ವಿಚಾರಕ್ಕೆ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ ಆಂಡ್ಯ್ ಗ್ಯಾಂಗ್ ನಡೆಸಿದ ಬಾರ್ ಕ್ಯಾಶಿಯರ್ ಮೇಲಿನ ಹಲ್ಲೆ ನಿಜಕ್ಕೂ ಆತಂಕ ಸೃಷ್ಟಿ ಮಾಡಿದೆ. ಹಲ್ಲೆ ಸಂಬಂಧ ಪೊಲೀಸರು ಸುಮೋಟೋ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಯೂತ್ ಕಾಂಗ್ರೆಸ್ ಅಧ್ಯಕ್ಷನ ಮೇಲೆ ಯಾವ ಕ್ರಮ ಕೈಗೊಳ್ಳುತ್ತೆ ಎಂದು ಕಾದುನೋಡಬೇಕಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:21 am, Tue, 18 March 25