
ಚಿಕ್ಕಮಗಳೂರು, ಫೆಬ್ರವರಿ 22: ಕಾಫಿನಾಡಿನಲ್ಲಿ ಕಾಡಾನೆ (Elephant) ದಾಳಿಗೆ ಮತ್ತೊಂದು ಬಲಿಯಾಗಿದೆ. ಕೇವಲ 7 ದಿನಗಳ ಅಂತರದಲ್ಲಿ ಒಂದೇ ಸ್ಥಳದಲ್ಲಿ ಇಬ್ಬರನ್ನ ಕಾಡಾನೆ ಬಲಿ (death) ಪಡೆದಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಆನೆ ಹಾವಳಿಗೆ ಶಾಶ್ವತ ಪರಿಹಾರ ಬೇಕೆಂದು ಆಗ್ರಹಿಸಿ ಸಾವಿರಾರು ಜನರು ರಾಜ್ಯ ಹೆದ್ದಾರಿ ಬಂದ್ ಮಾಡಿ ರಸ್ತೆಯಲ್ಲಿ ಮೃತ ದೇಹವಿಟ್ಟು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಜನರು ಮತ್ತು ಪೊಲೀಸರ ಮಧ್ಯೆ ತಳ್ಳಾಟ ನೂಕಾಟ ಉಂಟಾಗಿದೆ. ಹೀಗಾಗಿ ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಾಠಿಚಾರ್ಜ್ ಕೂಡ ನಡೆದಿದೆ. ಇನ್ನು ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನ ಪೊಲೀಸರು ಬಂಧಿಸಿದ್ದಾರೆ.
ಚಿಕ್ಕಮಗಳೂರು ಭಾಗದ ಜನರಿಗೆ ಕಾಡಾನೆ ಕಾಟದಿಂದ ತಪ್ಪಿಸಿಕೊಳ್ಳಲು ಆಗ್ತಿಲ್ಲ. ಎಷ್ಟೇ ಹೋರಾಟ ನಡೆಸಿದರೂ ಮಾನವ, ಕಾಡುಪ್ರಾಣಿ ಸಂಘರ್ಷ ನಿಲುತ್ತಿಲ್ಲ. ವಾರದ ಹಿಂದಷ್ಟೇ ಕಾಡಾನೆ ದಾಳಿಗೆ ಹಾವೇರಿ ಮೂಲದ ಕಾರ್ಮಿಕ ಯಲ್ಲಪ್ಪ ಬಲಿ ಆಗಿದ್ದ. ಅಂದು ಆಕ್ರೋಶ ಹೊರಹಾಕ್ತಿದ್ದಂತೆ ದಾಳಿ ಮಾಡ್ತಿರೋ ಆನೆಯನ್ನ ಹಿಡಿಯೋದಾಗಿ ಅರಣ್ಯ ಇಲಾಖೆ ಭರವಸೆ ನೀಡಿತ್ತು. ಹೀಗಿರುವಾಗಲೇ ಇಂದು ಮತ್ತೊಬ್ಬ ಕಾರ್ಮಿಕ ಮಹಿಳೆ ಕಾಡಾನೆ ದಾಳಿಗೆ ಬಲಿ ಆಗಿದ್ದಾರೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ! ಕೊನೆಗೂ ಸೆರೆ ಸಿಕ್ತು ಕಿಲ್ಲರ್ ಒಂಟಿ ಸಲಗ
ವಿಜಯನಗರ ಜಿಲ್ಲೆಯ ಹೊಸಪೇಟೆಯ ಬೋರಮ್ಮ ಅನ್ನೋ ಮಹಿಳೆ ತುತ್ತಿನ ಚೀಲ ತುಂಬಿಸಿಕೊಳ್ಳೋಕೆ ಚಿಕ್ಕಮಗಳೂರಿಗೆ ಬಂದಿದ್ದರು. ತಾಲೂಕಿನ ಪುರ ಗ್ರಾಮದ ಕಾಫಿತೋಟದಲ್ಲಿ ಕೆಲಸ ಮಾಡ್ತಿದ್ರು. ಈ ವೇಳೆ ಏಕಾಏಕಿ ಕಾಡಾನೆ ದಾಳಿ ಮಾಡಿದ್ದು, ಅಲ್ಲೇ ಉಸಿರು ನಿಲ್ಲಿಸಿದ್ದಾರೆ.
ಮಹಿಳೆ ಸಾವಿನ ವಿಷಯ ಗೊತ್ತಾಗ್ತಿದ್ದಂತೆ ಕೆರಳಿದ ಜನರು ಕಡಬಗೆರೆಯಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿ ರಸ್ತೆಗೆ ಇಳಿದಿದ್ದಾರೆ. ರಸ್ತೆಯಲ್ಲೇ ಶವವಿಟ್ಟು ಆಕ್ರೋಶ ಹೊರಹಾಕಿದರು. ಮೃತರ ಕುಟುಂಬಕ್ಕೆ 50 ಲಕ್ಷ ರೂ ಪರಿಹಾರ ಕೊಡ್ಬೇಕು ಅಂತಾ ರಸ್ತೆಯಲ್ಲೇ ಶಾಮಿಯಾನ ಹಾಕಿಕೊಂಡು ಹೋರಾಟ ನಡೆಸಿದರು. ಇದ್ರಿಂದ ಎರಡು ಕಿಲೋ ಮೀಟರ್ವರೆಗೂ ಟ್ರಾಫಿಕ್ ಜಾಮ್ ಆಗಿತ್ತು. ಚಿಕ್ಕಮಗಳೂರು-ಶೃಂಗೇರಿ ರಾಜ್ಯ ಹೆದ್ದಾರಿಯಲ್ಲಿ ಸಾಗ್ತಿದ್ದ ಸವಾರರು ಪರದಾಟುವಂತಾಗಿತ್ತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಹೋರಾಟ ಮಾಡಿದ್ರೂ ಯಾರೊಬ್ಬರು ಸ್ಥಳಕ್ಕೆ ಬಂದಿರಲಿಲ್ಲ. ಮಧ್ಯಾಹ್ನ ಸ್ಥಳಕ್ಕೆ ಬಂದ ಶಾಸಕ ಟಿಡಿ ರಾಜೇಗೌಡ ಹಾಗೂ ಕೊಪ್ಪ ಡಿಎಫ್ಒಗೂ ಪ್ರತಿಭಟನಾಕಾರರು ತರಾಟೆ ತೆಗೆದುಕೊಂಡರು. ಬಳಿಕ ಎಸ್ಪಿ, ಜಿಲ್ಲಾಧಿಕಾರಿಗಳು ಸ್ಪಾಟ್ಗೆ ಬಂದು ಮನವೊಲಿಸೋ ಪ್ರಯತ್ನ ಮಾಡಿದರು. ಅಷ್ಟೇ ಅಲ್ಲ ರಸ್ತೆ ಮಧ್ಯದಲ್ಲಿದ್ದ ಮಹಿಳೆ ಮೃತದೇಹವನ್ನ ಆ್ಯಂಬುಲೆನ್ಸ್ನಲ್ಲಿಟ್ಟು ಆಸ್ಪತ್ರೆ ರವಾನಿಸಲು ಮುಂದಾದರು. ಈ ವೇಳೆ ಪ್ರತಿಭಟನಾಕಾರರು ಶವ ತೆಗೆಯದಂತೆ ಆ್ಯಂಬುಲೆನ್ಸ್ಗೆ ಅಡ್ಡ ಕುಳಿತರು. ಪೊಲೀಸರು ಹಾಗೂ ಹೋರಾಟಗಾರರ ನಡುವೆ ನೂಕಾಟ-ತಳ್ಳಾಟ ಆಗ್ತಿದ್ದಂತೆ ಲಘು ಲಾಠಿಪ್ರಹಾರವೇ ನಡೆಯಿತು. ಇನ್ನು ಈ ವೇಳೆ ಮಾಜಿ ಶಾಸಕ ಜೀವರಾಜ್, ಜೆಡಿಎಸ್ ವಕ್ತಾರ ಸುಧಾಕರ್ ಶೆಟ್ಟಿ ಸೇರಿದಂತೆ 25ಕ್ಕೂ ಹೆಚ್ಚು ಜನರನ್ನ ಬಂಧಿಸಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಕಾಫಿ ತೋಟದ ಕಾರ್ಮಿಕ ಸಾವು!
ಲಾಠಿಚಾರ್ಜ್ ವೇಳೆ ಕೊಪ್ಪ ಠಾಣೆಯ ಲೇಡಿ ಕಾನ್ಸ್ಟೇಬಲ್ ರೇಖಾಗೆ ಕಿವಿಗೆ ಗಾಯವಾಗಿದ್ದು, ಬಾಳೆಹೊನ್ನೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಲೇಡಿ ಕಾನ್ಸ್ಟೇಬಲ್ ರೇಖಾ ಕಿವಿಗೆ ಕಲ್ಲು ಬಿದ್ದಿರುವ ಶಂಕೆ ವ್ಯಕ್ತವಾಗಿದೆ.
ಇನ್ನು ಡಿಸಿ ನಾಗರಾಜ್ ಬರುವಂತೆ ಪಟ್ಟು ಹಿಡಿದು ಕುಳಿತಿದ್ದ ನೂರಾರು ಹೋರಾಟಗಾರರು ಅವರು ಬರುತ್ತಿದ್ದಂತೆ ಆಕ್ರೋಶ ಹೆಚ್ಚಾಯಿತು. ಮನವೊಲಿಸುವ ಪ್ರಯತ್ನ ಮಾಡಿದರು ಹೋರಾಟಗಾರರು ಬಗ್ಗದೆ ಜಿಲ್ಲಾಡಳಿತದ ನಡೆ ವಿರುದ್ಧ ಭಾರೀ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ಇಂದ ಹೋರಾಟ ಮಾಡಿದರೂ ನಿಮಗೆ ಮಾಹಿತಿ ಸಿಕ್ಕಿಲ್ಲವಾ ಎಂದು ಪ್ರಶ್ನಿಸಿದ್ದು, ಪ್ರತಿಭಟನಾಕಾರರ ಮನವೊಲಿಸಲು ಜಿಲ್ಲಾಡಳಿತ ಸಂಪೂರ್ಣ ವಿಫಲವಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿ ನಾಗರಾಜ್, ದೊಡ್ಡ ಮಟ್ಟದಲ್ಲಿ ಲಾಠಿಚಾರ್ಜ್ ಮಾಡಿಲ್ಲ. ಪೊಲೀಸ್ ಸಿಬ್ಬಂದಿ ಗುಂಪು ಚದುರಿಸುವ ಕೆಲಸ ಮಾಡಿದ್ದಾರೆ. ಪ್ರಚೋದನೆ ಮಾಡುತ್ತಿದ್ದವರನ್ನು ಕರೆದುಕೊಂಡು ಹೋಗಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಅವಕಾಶ ನೀಡಿದ್ದೆವು. ಸರ್ಕಾರ ಕಾಡಾನೆ ದಾಳಿ ಸಂಬಂಧ ಸಂಕಷ್ಟು ಕ್ರಮಕೈಗೊಂಡಿದೆ ಎಂದರು. ಪ್ರಮುಖ ರಸ್ತೆ ಬಂದ್ ಆಗಿತ್ತು. ಹೀಗಾಗಿ ಜನರಿಗೆ ತೊಂದರೆಯಾಗಿತ್ತು. ರಸ್ತೆ ಕ್ಲಿಯರ್ ಮಾಡುವ ನಿಟ್ಟಿನಲ್ಲಿ ನಾವು ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ವಿರುದ್ಧ ಬಿಜೆಪಿ ಸೇರಿದಂತೆ ಮಲೆನಾಡು ನಾಗರಿಕ ರಕ್ಷಣಾ ವೇದಿಕೆ, ರೈತ ಸಂಘಟನೆಗಳ ಒಕ್ಕೂಟದಿಂದ ನಾಳೆ ಶೃಂಗೇರಿ ವಿಧಾನಸಭಾ ಕ್ಷೇತ್ರ ಬಂದ್ಗೆ ಕರೆ ನೀಡಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:12 pm, Sun, 22 February 26