ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿದಾರರಿಗೆ ನೋಟೀಸ್, ಶುರುವಾಯ್ತು ನಡುಕ

| Updated By: ವಿವೇಕ ಬಿರಾದಾರ

Updated on: Sep 28, 2024 | 11:03 AM

ರಾಜ್ಯ ಸರ್ಕಾರದ ಸೂಚನೆ ಮೇರೆಗೆ 13 ತಹಶಿಲ್ದಾರರ ನೇತೃತ್ವದ ತಂಡ‌ ಕಡೂರು ,ಮೂಡಿಗೆರೆ ತಾಲೂಕಿನಲ್ಲಿ ನಡೆದ ಕಂದಾಯ ಭೂಮಿ ಅಕ್ರಮದ ಕುರಿತು ವರದಿ ಸಿದ್ದ ಮಾಡಿ ಸರ್ಕಾರಕ್ಕೆ ನೀಡಿದ್ದು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಭಾಗಿಯಾದವರಿಗೆ ಜೈಲು ‌ಸೇರುವ ಆತಂಕ ಎದುರಾಗಿದೆ.

ಚಿಕ್ಕಮಗಳೂರು: ಅಕ್ರಮ ಭೂ ಮಂಜೂರಾತಿದಾರರಿಗೆ ನೋಟೀಸ್, ಶುರುವಾಯ್ತು ನಡುಕ
ಚಿಕ್ಕಮಗಳೂರು ತಾಲೂಕು ಪಂಚಾಯಿತಿ
Follow us on

ಚಿಕ್ಕಮಗಳೂರು, ಸೆಪ್ಟೆಂಬರ್​ 28: ಚಿಕ್ಕಮಗಳೂರಿನ (Chikkamagaluru) ಮೂಡಿಗೆರೆ (Mudigere) ಹಾಗೂ ಕಡೂರು (Kadur) ತಾಲೂಕಿನಲ್ಲಿ 2023ರಲ್ಲಿ ನಡೆದಿದ್ದ ಅಕ್ರಮ ಭೂ ಮಂಜೂರಾತಿ ಪ್ರಕರಣದ ಉರುಳು, ಇದೀಗ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿದ್ದವರ ಕೊರಳಿಗೆ ಸುತ್ತಿಕೊಂಡಿದೆ. ರಾಜ್ಯದಲ್ಲೇ ನಡೆದಿದೆ ಎನ್ನಲಾಗಿದ್ದ ಅತಿದೊಡ್ಡ ಭೂ ಹಗರಣ ಇದಾಗಿದ್ದು, ಪ್ರರಕಣಕ್ಕೆ ಸಂಬಂಧಿಸಿದಂತೆ 13 ಮಂದಿ ತಹಸೀಲ್ದಾರ್ ಒಳಗೊಂಡ ತಂಡ ತನಿಖೆ ನಡೆಸಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.

ರಾಜ್ಯದಲ್ಲಿ ನಡೆದ ಅತಿ ದೊಡ್ಡ ಕಂದಾಯ ಭೂಮಿ ಅಕ್ರಮ ಸಂಬಂಧ ರಾಜ್ಯ ಸರ್ಕಾರ ನೇಮಕ ಮಾಡಿದ್ದ 13 ತಹಶಿಲ್ದಾರರ ತನಿಖಾ ತಂಡ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ. ಹೀಗಾಗಿ ಇದೀಗ ಪ್ರತಿಯೊಂದು ಪ್ರಕರಣಗಳನ್ನು ಎಸಿ ನ್ಯಾಯಾಲಯದಲ್ಲಿ ವಿಚಾರಣೆಗೊಳಪಡಿಸಲು ತೀರ್ಮಾನಿಲಾಗಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಹಾಗೂ ತರೀಕೆರೆ ಉಪವಿಭಾಗಾಧಿ ಕಚೇರಿಯಿಂದ ಅಕ್ರಮ ಭೂ ಮಂಜೂರಾತಿದಾರರಿಗೆ ನೋಟೀಸ್ ಜಾರಿಗೊಳಿಸಲಾಗುತ್ತಿದೆ. ಈ ಭೂ ಅಕ್ರಮ ಪ್ರಕರಣದಲ್ಲಿ ಸಾವಿರಾರು ಮಂದಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡಿರುವುದು ದೃಢಪಟ್ಟಿದೆ.

ಯಾವುದೇ ದಾಖಲೆಗಳಿಲ್ಲದಿದ್ದರೂ ಅಧಿಕಾರಿಗಳ ಸಹಾಯ ಪಡೆದು ತಮ್ಮ ಪ್ರಭಾವ ಬಳಸಿಕೊಂಡು ಭೂಮಿ ಮಂಜೂರು ಮಾಡಿಸಿಕೊಂಡಿರುವುದು ತನಿಖಾ ವರದಿಯಲ್ಲೂ ಬೆಳಕಿಗೆ ಬಂದಿದೆ. ಜೊತೆಗೆ ಈ ಪ್ರರಕಣದಲ್ಲಿ ಹಿಂದಿನ ಶಾಸಕರು, ಸಚಿವರ ಹೆಸರುಗಳು ಕೇಳಿಬಂದಿವೆಯಾದರೂ ಇದನ್ನು ವರದಿಯಲ್ಲಿ ಉಲ್ಲೇಖಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ ಅಕ್ರಮ ಭೂ ಮಂಜೂರಾತಿ ನಡೆದ ಅವಧಿಯಲ್ಲಿದ್ದ ತಹಸೀಲ್ದಾರ್ ಹಾಗೂ ಇತರೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೆಸರನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಚಿಕ್ಕಮಗಳೂರು ಅರಣ್ಯ ವಲಯದ ಹೋಂಸ್ಟೇ, ರೆಸಾರ್ಟ್​​ಗಳಿಗೆ ಅರಣ್ಯ ಇಲಾಖೆ ನೋಟಿಸ್​

ಕಡೂರು ಹಾಗೂ ಮೂಡಿಗೆರೆ ತಾಲೂಕಿನಲ್ಲಿ 3021 ಕ್ಕೂ ಹೆಚ್ಚು ಪ್ರಕರಣಗಳಲ್ಲಿ 10,598 ಎಕರೆ ಭೂಮಿ ಅಕ್ರಮವಾಗಿ ಮಂಜೂರು ಮಾಡಿರುವ ಹಿನ್ನೆಲೆಯಲ್ಲಿ ಅಕ್ರಮ ಭೂ ಮಂಜೂರಾತಿದಾರರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗುತ್ತಿದೆ. ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಕಚೇರಿಯಿಂದ ಮೂಡಿಗೆರೆ ತಾಲೂಕಿನ ಭೂ ಅಕ್ರಮಕ್ಕೆ ಸಂಬಂಧಿಸಿದಂತೆ 778 ಪ್ರಕರಣಗಳಲ್ಲಿ 396 ಜನರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.

ಇನ್ನು ತರೀಕೆರೆ ಉಪವಿಭಾಗಾಧಿಕಾರಿ ಕಚೇರಿಯಿಂದ ಕಡೂರು ತಾಲೂಕಿನ ಭೂ ಅಕ್ರಮಕ್ಕೆ ಸಂಬಂಧಿಸಿದಂರೆ 2243 ಪ್ರಕರಣಗಳಲ್ಲಿ 50 ಜನರಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಂತಹಂತವಾಗಿ ಅಕ್ರಮ ಭೂ ಮಂಜೂರಾತಿದಾರರಿಗೆ ನೋಟೀಸ್ ನೀಡಲಾಗುತ್ತಿದೆ. ಪ್ರತಿದಿನ 20 ರಿಂದ 30 ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸಿ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಾಗುತ್ತಿದೆ. ಹೀಗಾಗಿ ಅಕ್ರಮವಾಗಿ ಭೂಮಿ ಮಂಜೂರು ಮಾಡಿಸಿಕೊಂಡು ಖುಷಿಯಾಗಿದ್ದವರಿಗೆ ಇದೀಗ ನಡುಕ ಆರಂಭವಾಗಿದೆ. ಈ ಹಿಂದೆ ಕಡೂರು ತಹಶಿಲ್ದಾರ್ ಆಗಿದ್ದ ಉಮೇಶ್ ವಿರುದ್ಧ ಪ್ರಕರಣ ‌ದಾಖಲಿಸಿ ಜೈಲಿಗೆ ಕಳಿಸಲಾಗಿತ್ತು.

ರಾಜ್ಯ ಸರ್ಕಾರದ ಸೂಚನೆ ಮೇರೆಗೆ 13 ತಹಶಿಲ್ದಾರರ ನೇತೃತ್ವದ ತಂಡ‌ ಕಡೂರು ,ಮೂಡಿಗೆರೆ ತಾಲೂಕಿನಲ್ಲಿ ನಡೆದ ಕಂದಾಯ ಭೂಮಿ ಅಕ್ರಮದ ಕುರಿತು ವರದಿ ಸಿದ್ದ ಮಾಡಿ ಸರ್ಕಾರಕ್ಕೆ ನೀಡಿದ್ದು ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು ಮತ್ತು ಭಾಗಿಯಾದವರಿಗೆ ಜೈಲು ‌ಸೇರುವ ಆತಂಕ ಎದುರಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ