ಚಿಕ್ಕಮಗಳೂರಿನಲ್ಲಿ ಅಮಾನವೀಯ ಘಟನೆ: ಹೆಣ್ಣು ಮಗುವಿನ ಮೇಲೆ ಬಿಸಿ ನೀರು ಸುರಿದ ಸಿಬ್ಬಂದಿ
ಚಿಕ್ಕಮಗಳೂರಿನ ದತ್ತು ಸಂಸ್ಥೆಯಲ್ಲಿ ಹೆಣ್ಣು ಮಗುವಿನ ಮೇಲೆ ಆರೈಕಾ ಸಿಬ್ಬಂದಿ ಕುದಿಯುವ ನೀರು ಸುರಿದ ಘಟನೆ ನಡೆದಿದೆ. ಮಗುವಿನ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ಘಟನೆ ಸಂಭವಿಸಿದೆ. ಈ ಘಟನೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿರುದ್ಧ ಆಕ್ರೋಶಕ್ಕೆ ಕಾರಣವಾಗಿದೆ.

ಚಿಕ್ಕಮಗಳೂರು, ಜುಲೈ 19: ಕಾಫಿನಾಡಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಶಿಶು (baby) ಆರೈಕಾ ಸಿಬ್ಬಂದಿ ಎಡವಟ್ಟಿನಿಂದಾಗಿ ಹೆಣ್ಣು ಮಗುವೊಂದು ನರಳುವಂತಾಗಿದೆ. ಒಂದು ವರ್ಷ ಮೂರು ತಿಂಗಳ ಹೆಣ್ಣು ಮಗುವಿನ ಮೇಲೆ ಸಿಬ್ಬಂದಿ ಕುದಿಯುವ ಬಿಸಿ ನೀರು (hot water) ಸುರಿದ ಪರಿಣಾಮ ಸೊಂಟದ ಕೆಳಭಾಗ ಸಂಪೂರ್ಣ ಸುಟ್ಟು ಹೋಗಿದೆ. ಮಲ ವಿಸರ್ಜನೆ ಮಾಡಿದ್ದ ಮಗುವನ್ನು ಸ್ವಚ್ಛ ಮಾಡುವಾಗ ದುರ್ಘಟನೆ ಸಂಭವಿಸಿದೆ.
ಚಿಕ್ಕಮಗಳೂರು ನಗರದ ಗಾಂಧಿನಾಗರದಲ್ಲಿರುವ ಸರ್ಕಾರಿ ವಿಶೇಷ ದತ್ತು ಸಂಸ್ಥೆ ಮಕ್ಕಳ ರಕ್ಷಣಾ ನಿರ್ದೇಶನಾಲಯದ ಅಡಿಯಲ್ಲಿ ಬರಲಿದೆ. ಅನಾಥ ಮಕ್ಕಳನ್ನು ರಕ್ಷಣೆ ಮಾಡಿ ಆರೈಕೆ ಮಾಡುವ ಜವಾಬ್ದಾರಿ ಹೊಂದಿದೆ. ಆದರೆ ಸಿಬ್ಬಂದಿಗಳ ಬೇಜವಾಬ್ದಾರಿಗೆ ಮಗು ನರಳಾಡುವಂತಾಗಿದೆ.
ಇದನ್ನೂ ಓದಿ: ಪ್ರೀತಿ ದೈಹಿಕ ಸಂಪರ್ಕಕ್ಕೆ ತಿರುಗಿ ಮಗು ಜನನ: ಅಪ್ರಾಪ್ತೆಗೆ ಹುಟ್ಟಿದ ಶಿಶು ಕಸದ ಬುಟ್ಟಿಗೆ..!
ಹೆಣ್ಣು ಮಗುವನ್ನ ದತ್ತು ಪಡೆಯಲು ಪೋಷಕರು ಸಿದ್ದತೆ ನಡೆಸಿದ್ದರು. ಅಷ್ಟರಲ್ಲಿ ಸಿಬ್ಬಂದಿಯಿಂದ ಎಡವಟ್ಟಾಗಿದೆ. ಜುಲೈ 09 ರಂದು ಘಟನೆ ನಡೆದಿದ್ದು, ಇಡೀ ಪ್ರಕರಣ ಮೇಲಧಿಕಾರಿಗಳಿಗೆ ತಿಳಿಯದಂತೆ ಸಿಬ್ಬಂದಿ ಮುಚ್ಚಿಟ್ಟಿದ್ದಾರೆ.
ಸದ್ಯ ಚಿಕ್ಕಮಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದತ್ತು ಸಂಸ್ಥೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.
ವೈದ್ಯರ ನಿರ್ಲಕ್ಷ್ಯ: ಗಂಡು ಮಗು ಸಾವು
ಇನ್ನು ಇತ್ತೀಚೆಗೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಸುಂಕಸಾಲೆ ಗ್ರಾಮದ ಶೇಖರ್ ದಂಪತಿಯ ಎರಡು ತಿಂಗಳ ಗಂಡು ಮಗು ತೀವ್ರ ಜ್ವರ ಹಾಗೂ ಕಫದಿಂದ ನರಳುತ್ತಿದ್ದ ಹಿನ್ನಲೆ ಮಗುವನ್ನು ಮೂಡಿಗೆರೆಯ ಎಂಜಿಎಂ ತಾಲೂಕಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದಿದ್ದರು. ಆದರೆ ವೈದ್ಯರು ಸರಿಯಾದ ಚಿಕಿತ್ಸೆ ನೀಡದೆ, ಆಕ್ಸಿಜನ್ ಕೂಡ ಕೊಡದೆ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ಯಾದಗಿರಿಯಲ್ಲಿ 2 ವಾರದ ಅಂತರದಲ್ಲಿ 3 ನವಜಾತ ಶಿಶುಗಳ ಸಾವು, 130ಕ್ಕೆ ಏರಿಕೆ
ಉಸಿರಾಟಕ್ಕೆ ತೊಂದರೆ ಹಿನ್ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಆಸ್ಪತ್ರೆಯಲ್ಲಿ ವೈದ್ಯರೇ ಇಲ. ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಬರುವವರೆಗೂ ಮಗುವಿನ ಉಸಿರಾಟಕ್ಕಾಗಿ ಆಕ್ಸಿಜನ್ ಹಾಕಿ ಅಂದ್ರೆ ಆಕ್ಸಿಜನ್ ಕೂಡ ಇಲ್ಲವೆಂದು ಆರೋಪಿಸಲಾಗಿದೆ. ಇನ್ನೂ ಆಸ್ಪತ್ರೆಯಲ್ಲಿ ಆಂಬ್ಯುಲೆನ್ಸ್ ಇದೆಯಾ ಅಂದರೆ ಅದೂ ಕೂಡ ಇಲ್ಲ. ಆಂಬ್ಯುಲೆನ್ಸ್ ಬರುವುದರಲ್ಲಿ ಮಗು ಪ್ರಾಣವನ್ನೇ ಬಿಟ್ಟಿದ್ದು, ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:53 pm, Sat, 19 July 25








