
ಚಿಕ್ಕಮಗಳೂರು, ಏಪ್ರಿಲ್ 19: ರಾಜ್ಯದಲ್ಲಿ ಮಾನವ ಮತ್ತು ಕಾಡು ಪ್ರಾಣಿಗಳ ಸಂಘರ್ಷ ಮುಂದುವರಿದಿದೆ. ಕಾಡಾನೆಗಳ ಉಪಟಳದಿಂದ ಮೊದಲೇ ಕಂಗೆಟ್ಟಿದ್ದ ಕಾಫಿ ನಾಡು ಚಿಕ್ಕಮಗಳೂರಲ್ಲಿ (Chikkamagaluru) ಇದೀಗ ಕಾಡುಕೋಣಗಳ ಹಾವಳಿಯೂ ಶುರುವಾಗಿದೆ. ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಏಕಾಏಕಿ ಕಾಡುಕೋಣ ದಾಳಿ ನಡೆಸಿದ ಪರಿಣಾಮ 30 ವರ್ಷದ ಯುವಕ ಚೇತನ್ ಎಂಬಾತ ದಾರುಣವಾಗಿ ಮೃತಪಟ್ಟಿದ್ದಾನೆ. ಎದೆಯ ಭಾಗಕ್ಕೆ ಕಾಡುಕೋಣ ಇರಿದ ಕಾರಣ ಆತ ಉಸಿರು ಚೆಲ್ಲಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಮರಸಣಿಗೆ ಸಮೀಪದ ಮೈದಾಡಿ ಯಮಗೊಂಡ ಎಸ್ಟೇಟ್ನಲ್ಲಿ ನಡೆದಿದೆ.
ಘಟನೆಯ ಬೆನ್ನಲ್ಲೇ ಕಳಸ ತಾಲೂಕಿನಲ್ಲಿ ಬೀಡುಬಿಟ್ಟಿರುವ ಕಾಡುಕೋಣಗಳು ಜನರಲ್ಲಿ ಆತಂಕ ಸೃಷ್ಟಿ ಮಾಡಿವೆ. ಕಾಫಿ ತೋಟಗಳಲ್ಲಿ ಕಾಡುಕೋಣಗಳು ಹಿಂಡು ಹಿಂಡಾಗಿ ಕಾಣಿಸಿಕೊಳ್ಳುತ್ತಿದ್ದು, ಮಾನವರ ಮೇಲೆ ದಾಳಿಗೆ ಮುಂದಾಗುತ್ತಿವೆ. ಈ ಹಿನ್ನೆಲೆ ಇವುಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಮುಂದಾಗಿದೆ. ಅಧಿಕಾರಿಗಳ ಜೊತೆ ಸಭೆ ನಡೆಸಿ ಕಾಡುಕೋಣಗಳ ಸೆರೆ ಹಿಡಿದು ಸ್ಥಳಾಂತರ ಮಾಡುವುದಾಗಿ ಸಚಿವ ಈಶ್ವರ್ ಖಂಡ್ರೆ ಮಾಹಿತಿ ನೀಡಿದ್ದಾರೆ. ಮಾನವರ ಮೇಲೆದಾಳಿಗೆ ಮುಂದಾಗುವ ಕಾಡುಕೋಣ ಸೇರಿದಂತೆ ಕಾಡಾನೆ, ಚಿರತೆಗಳ ಮೇಲೆ ದಿನದ 24 ಗಂಟೆಗಳ ಕಾಲ ನಿಗಾ ಇಡುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿರುವ ಅವರು, ಕಾಡು ಪ್ರಾಣಿಗಳ ಉಪಟಳ ತಡೆಯುವ ನಿಟ್ಟಿನಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನ ನೇಮಕ ಮಾಡುವುದಾಗಿಯೂ ತಿಳಿಸಿದ್ದಾರೆ.
ಇದನ್ನೂ ಓದಿ: ಹಿಂಡು ಹಿಂಡಾಗಿ ನಾಡಿಗೆ ಲಗ್ಗೆ ಇಟ್ಟ ‘ಬೀಟಮ್ಮ’ ಗ್ಯಾಂಗ್! ಚಿಕ್ಕಮಗಳೂರು–ಬೇಲೂರು ಗಡಿ ಭಾಗದಲ್ಲಿ ಹೆಚ್ಚಾಯ್ತು ಕಾಡಾನೆಗಳ ಆತಂಕ
ಒಟ್ಟಿನಲ್ಲಿ ಕಾಡು ಪ್ರಾಣಿಗಳ ಉಪಟಳ ಜಿಲ್ಲೆಯಲ್ಲಿ ದಿನೇ ದಿನೇ ಹೆಚ್ಚಾಗುತ್ತಿದ್ದು, ಕಾಡಾನೆಗಳ ಕಾಟದ ಒಂದೆಡೆಯಾದರೆ, ಮತ್ತೊಂದು ಕಡೆ ಕಾಡುಕೋಣಳೂ ದಾಳಿ ನಡೆಸುತ್ತಿರುವ ಕಾರಣ ರೈತರು, ಕಾರ್ಮಿಕರು ಜೀವ ಕೈಯಲ್ಲಿ ಹಿಡಿದು ಬದುಕಬೇಕಾದ ಸ್ಥಿತಿ ಉದ್ಭವಿಸಿದೆ. ಕಾಫಿ ತೋಟಗಳಿಗೆ ನುಗ್ಗುವ ಹಿಂಡು ಹಿಂಡು ಕಾಡುಕೋಣಗಳು ದಾಳಿ ನಡೆಸುವುದು ಮಾತ್ರವಲ್ಲದೆ ಬೆಳೆಯ ನಾಶವನ್ನೂ ಮಾಡ್ತಿರೋದು ಅನ್ನದಾತರ ನಿದ್ದೆಗೆಡಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.