
ಚಿಕ್ಕಮಗಳೂರು, ಫೆಬ್ರವರಿ 5: ಕಾಂಗ್ರೆಸ್ (Congress) ಮುಖಂಡ ರಾಹುಲ್ ಷರೀಫ್ ರಾತ್ರಿ ವೇಳೆ ವಿವಾಹಿತ ಮಹಿಳೆಯ ಜೊತೆ ಸಿಕ್ಕಿಬಿದ್ದು ಅಕ್ಕಪಕ್ಕದ ಮನೆಯವರಿಂದ ಏಟು ತಿಂದ ಘಟನೆ ಚಿಕ್ಕಮಗಳೂರು (Chikkamagaluru) ನಗರದ ಗಾಂಧಿನಗರದಲ್ಲಿ ಬುಧವಾರ ನಡೆದಿತ್ತು. ‘ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ’ ಎಂದು ಪ್ರಶ್ನಿಸಿ ಕೆಲ ಯುವಕರು ಕಾಂಗ್ರೆಸ್ ಮುಖಂಡನನ್ನು ಥಳಿಸಿದ್ದರು. ಆದರೆ, ರಾಹಿಲ್ ಸ್ನೇಹಿತ ಎಂದಿದ್ದ ಮಹಿಳೆ, ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು ಎಂದಿದ್ದಳು. ಆದರೀಗ ಆಕೆಯ ಪತಿ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದು, ಕಾಂಗ್ರೆಸ್ ಮುಖಂಡನ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
‘ಕೈ’ ಮುಖಂಡನ ಜತೆಗಿದ್ದ ಮಹಿಳೆಯ ಗಂಡ ಕೀರ್ತಿ ವಿಡಿಯೋ ಮಾಡಿ ಸಾಮಾಜಿಕ ಜಾಲದಲ್ಲಿ ಸಂದೇಶ ಬಿಡುಗಡೆ ಮಾಡಿದ್ದು, ‘ಬುಧವಾರ ರಾತ್ರಿ 10.30ಕ್ಕೆ ಮನೆ ಓಪನ್ ಇತ್ತು. ನಾನು ಕತ್ತಲಲ್ಲಿ ನಿಂತು ನೋಡಿದೆ. ಬೈಕಿನಲ್ಲಿ ರಾಹಿಲ್ ಷರೀಫ್ ಬಂದು ಮನೆಯೊಳಗೆ ಹೋದ. ಬಳಿಕ ಬಾಗಿಲು ಹಾಕಿಕೊಂಡರು. ನಾನು ಆಕೆಯ ತಮ್ಮ, ತಾಯಿ, ಅಕ್ಕ ಸಂಬಂಧಿಕರಿಗೆ ಫೋನ್ ಮಾಡಿದೆ. ನಾನು ಹೇಳಿದರೆ ನೀವು ನಂಬಲ್ಲ, ಈಗ ಬನ್ನಿ ಎಂದು ಕರೆದೆ. ಒಳಗೆ ಹೋದಾಗ ಇಬ್ಬರೂ ಬೆಡ್ರೂಂನಲ್ಲಿ ಇದ್ದರು’ ಎಂದು ತಿಳಿಸಿದ್ದಾರೆ.
ನಾವು ಒಳಗಡೆ ಹೋದಾಗ ಆತ ನನ್ನ ನೋಡಿ, ‘ಬಾಂಬೆಯಿಂದ ಈಗ ಬಂದೆ’ ಅಂದ. ಬಾಂಬೆಯಿಂದ ಬಂದರೆ ನಿಮ್ಮ ಮನೆಗೆ ಹೋಗು, ನಮ್ಮ ಮನೆಗೆ ಏಕೆ ಬಂದೆ ಎಂದು ಕೇಳಿದೆ. ಆಗ ನನ್ನ ಮೇಲೆ ಹಲ್ಲೆ ಮಾಡಿದ, ಮಚ್ಚು ತಂದು ನನ್ನ ಮೇಲೆ ಬೀಸಿದ್ದಾನೆ. ಆಮೇಲೆ ಕಾರು ಬಂತು ಹತ್ತಿಕೊಂಡು ಹೋದ. ನಾನು ಲವ್ ಮ್ಯಾರೇಜ್ ಆದೆ ಅಂತ ಹೆತ್ತವರೇ ದೂರ ಇಟ್ಟಿದ್ದಾರೆ, ನಾನು ರೂಂ ಮಾಡಿಕೊಂಡು ಇದ್ದೇನೆ. ರಾಹಿಲ್ ಷರೀಫ್ ಕೊಲೆ ಬೆದರಿಕೆ ಹಾಕಿದ್ದಾನೆ. ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನನ್ನನ್ನು ನನ್ನ ಪಾಡಿಗೆ ಬಿಡಿ. ಅಪ್ಪ-ಅಮ್ಮನಿಗಾಗಿಯಾದರೂ ನಾನು ಬದುಕಬೇಕು’ ಎಂದು ಕೀರ್ತಿ ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ ವೇಳೆ ಮಹಿಳೆಯ ಮನೆಯಲ್ಲಿ ಸಿಕ್ಕಿಬಿದ್ದ ಕಾಂಗ್ರೆಸ್ ಮುಖಂಡ: ಹಿಗ್ಗಾಮುಗ್ಗಾ ಥಳಿಸಿದ ಯುವಕರು
ನಾವು ಗಂಡ-ಹೆಂಡ್ತಿ ದೂರವಾಗಿ 1 ವರ್ಷ ಆಯ್ತು, ಇಬ್ಬರು ಬೇರೆ ಇದ್ದೇವೆ. ಅದಕ್ಕೆ ಕಾರಣವೇ ರಾಹಿಲ್ ಷರೀಫ್. ಆತ ಹಾಗೂ ಆಕೆ ಇಬ್ಬರೂ ಸೇರಿ ನನಗೆ ಮೋಸ ಮಾಡಿದ್ದಾರೆ. ವರ್ಷದ ಹಿಂದೆಯೂ ಗಲಾಟೆಯಾಗಿತ್ತು, ನನ್ನ ಮೇಲೆ ಆಕೆ ಕಡೆಯಿಂದ ಸುಳ್ಳು ಅಟ್ರಾಸಿಟಿ ಕೇಸ್ ಹಾಕಿಸಿದ್ದರು ಎಂದು ಕೀರ್ತಿ ಅಳಲು ತೋಡಿಕೊಂಡಿದ್ದಾರೆ.