ತಿಂಗಳಿನಿಂದ ಪೊಲೀಸ್​ ಠಾಣೆಯಲ್ಲೇ ನಿಂತಿದ್ದ ಕಾರಲ್ಲಿತ್ತು ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ ಹಣ!

ಚಿಕ್ಕಮಗಳೂರಿನ ಕೊಪ್ಪ ಠಾಣೆ ಪೊಲೀಸರು ಸೀಜ್ ಮಾಡಿದ್ದ ಕಾರಿನಲ್ಲಿ ಕೋಟಿಗೂ ಹೆಚ್ಚು ಮೌಲ್ಯದ ಚಿನ್ನ, ಬೆಳ್ಳಿ, ನಗದು ಪತ್ತೆಯಾಗಿದೆ. ಮಾಜಿ ಸಚಿವರ ಮನೆಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ನೇಪಾಳಿ ಗ್ಯಾಂಗ್ ಬಳಸಿದ್ದ ಕಾರು ಇದಾಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಕಾರು ರಿಲೀಸ್​ ಮಾಡುವಾಗ ಪರಿಶೀಲನೆ ವೇಳೆ ಇವು ಪತ್ತೆಯಾಗಿವೆ.

ತಿಂಗಳಿನಿಂದ ಪೊಲೀಸ್​ ಠಾಣೆಯಲ್ಲೇ ನಿಂತಿದ್ದ ಕಾರಲ್ಲಿತ್ತು ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ ಹಣ!
ಕಾರ್​ನ ಸೀಟ್​ನಡಿ ಪತ್ತೆಯಾದ ಕಂತೆ ಕಂತೆ ಹಣ
Updated By: ಪ್ರಸನ್ನ ಹೆಗಡೆ

Updated on: Nov 06, 2025 | 10:26 AM

ಚಿಕ್ಕಮಗಳೂರು, ನವೆಂಬರ್​ 06: ಪೊಲೀಸರು ಸೀಜ್​ ಮಾಡಿದ್ದ ಕಾರಣ​ ಒಂದು ತಿಂಗಳಿನಿಂದ ಪೊಲೀಸ್​ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ. ಮಾಜಿ ಶಿಕ್ಷಣ ‌ಸಚಿವ ದಿ .ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್​ನ ಸಾಂಗ್ಲಿ ಪೊಲೀಸರ ನೆರವು ಪಡೆದು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳು ಎಸ್ಕೇಪ್​ ಆಗಲು ಬಳಸಿದ್ದ ಕಾರನ್ನು ಸೀಜ್​ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯ ಕಾರನ್ನ ರಿಲೀಸ್​ ಮಾಡುವಂತೆ ಆದೇಶಿಸಿದೆ. ಈ ಹಿನ್ನಲೆ ಕಾರನ್ನು ಪರಿಶೀಲಿಸುವಾಗ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿದೆ.

ಕಾರಿನ ಸೀಟ್​ನಡಿ ಚಿನ್ನ, ಬೆಳ್ಳಿ ಪತ್ತೆ

ಪರಿಶೀಲನೆ ವೇಳೆ ಕಾರಿನ ‌ ಸೀಟ್ ಅಡಿಯಲ್ಲಿ 595 ಗ್ರಾಂ ಚಿನ್ನ, 589 ಗ್ರಾಂ ಬೆಳ್ಳಿ, 3,41,150 ರೂ. ಹಣ ಪತ್ತೆಯಾಗಿದೆ. ವಶಕ್ಕೆ ಪಡೆಯಲಾದ ಹಣ ಮತ್ತು ವಸ್ತುಗಳ ಮೌಲ್ಯ ಕೋಟಿಗೂ ಅಧಿಕ ಎನ್ನಲಾಗಿದ್ದು, ಕಳ್ಳತನವಾಗಿದ್ದ ಮೌಲ್ಯಕ್ಕಿಂದ ಅಧಿಕ ಚಿನ್ನ ಮತ್ತು ಬೆಳ್ಳಿ ಈ ವೇಳೆ ಪತ್ತೆಯಾಗಿದೆ. ಹೀಗಾಗಿ ಗ್ಯಾಂಗ್​ ಇನ್ನೂ ಹಲವೆಡೆ ಕೈಚಳಕ ತೋರಿರುವ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ.

ಇದನ್ನೂ ಓದಿ: ಆಹ್ವಾನ ಪತ್ರಿಕೆ ನೀಡುವ ನೆಪದದಲ್ಲಿ ಬಂದು ಚಿನ್ನ ಕದ್ದ ಖತರ್ನಾಕ್​ ಜೋಡಿ

ಆಗಸ್ಟ್​ನಲ್ಲಿ ನಡೆದಿದ್ದ ಕಳ್ಳತನ

ಆ.21ರಂದು ಬೆಳಗಿನ ಜಾವ ಕೊಪ್ಪ ಪೊಲೀಸ್​​​​​ ಠಾಣಾ ವ್ಯಾಪ್ತಿಯ ಹರಂದೂರು ಗ್ರಾಮದ ಮಣಿಪುರ ಎಸ್ಟೇಟ್​ನ, ಮಾಜಿ ಸಚಿವ ಗೋವಿಂದೇಗೌಡ ಅವರ ಪುತ್ರ ಹಾಗೂ ಎಸ್ಟೇಟ್ ಮಾಲೀಕ ಹೆಚ್​.ಜಿ. ವೆಂಕಟೇಶ್ ಮನೆಯಲ್ಲಿ ಕಳ್ಳತನ ನಡೆದಿತ್ತು. 6 ಲಕ್ಷ ನಗದು ಮತ್ತು 37,50,000 ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಆರೋಪಿಗಳು ಪರಾರಿಯಾಗಿದ್ದರು. ಪ್ರಕರಣ ಸಂಬಂಧ ಆರೋಪಿಗಳಿಗೆ ಬಲೆ ಬೀಸಿದ್ದ ಪೊಲೀಸರು, ಸಾಂಗ್ಲಿಯಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದರು. ನೇಪಾಳದ ರಾಜೇಂದ್ರ, ಏಕೇಂದ್ರ ಕುಟಲ್ ಬದ್ವಾಲ್​, ಕರಂ ಸಿಂಗ್​ ಬಹಾದ್ದೂರ್​ ಎಂಬುವರನ್ನು ಅರೆಸ್ಟ್​ ಮಾಡಿ ಒಂದೂವರೆ ಕೋಟಿ ಮೌಲ್ಯದ ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಕೃತ್ಯಕ್ಕೆ ಬಳಸಿದ ಎರಡು ಕಾರುಗಳನ್ನ ಜಪ್ತಿ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 10:21 am, Thu, 6 November 25