ಚಿಕ್ಕಮಗಳೂರು: ಅರಣ್ಯ ಭೂಮಿ ಒತ್ತುವರಿ ತೆರವು ಆತಂಕದಿಂದ ಒಂದೇ ವಾರದಲ್ಲಿ ಇಬ್ಬರು ರೈತರು ಆತ್ಮಹತ್ಯೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 08, 2024 | 6:26 PM

ಒತ್ತುವರಿ ತೆರವು ಸದ್ಯ ಕಾಫಿನಾಡು ಚಿಕ್ಕಮಗಳೂರಿನ ರೈತರನ್ನ ನಿದ್ದೆಗೆಡಿಸಿದೆ. ಒಂದು ಕಡೆ ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯ ನಡೆಯುತ್ತಿದ್ದರೆ, ಮತ್ತೊಂದು ಕಡೆ ಕಂದಾಯ ಭೂಮಿ ತೆರವು ಕಾರ್ಯ ನಡೆಯುತ್ತಿದೆ. ಈ ನಡುವೆ ಕೆರೆ ಒತ್ತುವರಿ ತೆರವಿಗೂ ಸರ್ಕಾರ ಸೂಚನೆ ನೀಡಿದ್ದು, ರೈತರನ್ನ ಕಂಗಾಲಾಗಿಸಿದೆ. ಈ ಹಿನ್ನಲೆ ಒಂದೇ ವಾರದಲ್ಲಿ ಅಕ್ರಮ ಒತ್ತುವರಿ ತೆರವು ಆತಂಕಕ್ಕೆ ಇಬ್ಬರು ಬಲಿಯಾಗಿದ್ದು, ಈ ಕುರಿತು ಒಂದು ಸ್ಟೋರಿ ಇಲ್ಲಿದೆ. 

ಚಿಕ್ಕಮಗಳೂರು: ಅರಣ್ಯ ಭೂಮಿ ಒತ್ತುವರಿ ತೆರವು ಆತಂಕದಿಂದ ಒಂದೇ ವಾರದಲ್ಲಿ ಇಬ್ಬರು ರೈತರು ಆತ್ಮಹತ್ಯೆ
ಅರಣ್ಯ ಭೂಮಿ ಒತ್ತುವರಿ ತೆರವು ಆತಂಕದಿಂದ ಆತ್ಮಹತ್ಯೆಗೆ ಶರಣಾದ  ಕರುಣಾಕರ್, ಮಲ್ಲೇಶ್
Follow us on

ಚಿಕ್ಕಮಗಳೂರು, ಅ.08: ಜಿಲ್ಲೆಯ ಕೊಪ್ಪ(Koppa) ತಾಲೂಕಿನ ಮೇಗುಂದಾ ಗ್ರಾಮದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ಆತಂಕದಿಂದ ರೈತನೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಮೂಲಕ ಒಂದೇ ವಾರದಲ್ಲಿ ಜಿಲ್ಲೆಯ ಇಬ್ಬರು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರೈತ ಕರುಣಾಕರ್ (58) ಮೃತ ರ್ದುದೈವಿ. ಮೂರು ಎಕರೆ ಅರಣ್ಯ ಭೂಮಿ ಒತ್ತುವರಿ ಮಾಡಿ ಕೃಷಿ ಮಾಡಿದ್ದ ಮೃತ ರೈತ, ಕೃಷಿ ನಂಬಿ ಸೊಸೈಟಿ, ಬ್ಯಾಂಕ್​ಗಳಲ್ಲಿ ಸಾಲ ಮಾಡಿಕೊಂಡಿದ್ದ. ಒತ್ತುವರಿ ತೆರವು ಆತಂಕದಿಂದ ಇಂದು ರೈತ ಕರುಣಾಕರ್​ ಆತ್ಮಹ್ಯತೆ ಮಾಡಿಕೊಂಡಿದ್ದಾನೆ.

ಎರಡು ದಿನದ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದ ರೈತ ಮಲ್ಲೇಶ್​

ಚಿಕ್ಕಮಗಳೂರು ತಾಲೂಕಿನ ಕಂಚೇನಹಳ್ಳಿ ಗ್ರಾಮದ ರೈತ ಮಲ್ಲೇಶ್​ ಎಂಬಾತ ಕೆರೆ ಪಕ್ಕದ ಜಾಗದಲ್ಲಿ ಕಾಫಿ ತೋಟ ಬೆಳೆದಿದ್ದ. ಅಧಿಕಾರಿಗಳು ಏಕಾಏಕಿ ಸ್ಥಳಕ್ಕೆ ಹೋಗಿ ಒಂದೂ ನೋಟಿಸ್ ನೀಡದೆ ತೆರವಿಗೆ ಮುಂದಾಗಿದ್ದರು. ಒಂದು ಕಡೆ ಸಾಲದ ಶೂಲ, ಮತ್ತೊಂದು ಕಡೆ ತೆರವಿನ ಆತಂಕಕ್ಕೆ ಒಳಗಾಗಿ ಅಧಿಕಾರಿಗಳ ಮುಂದೆಯೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಮಲ್ಲೇಶ್ ಚಿಕಿತ್ಸೆ ಫಲಿಸದೆ ಕಳೆದ ಎರಡು ದಿನಗಳ ಹಿಂದೆ ಸಾವನ್ನಪ್ಪಿದ್ದ. ಇದೀಗ ಮತ್ತೋರ್ವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಇದನ್ನೂ ಓದಿ:700 ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಆದೇಶ

ಒಟ್ಟಿನಲ್ಲಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒತ್ತುವರಿ ತೆರವು ಆತಂಕ ಮನೆ ಮಾಡಿದ್ದು, ಒತ್ತುವರಿ ತೆರವಿಗೆ ಹೆದರಿ ಒಂದೇ ವಾರದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೆರೆಗಳನ್ನ ಉಳಿಸುವ ನಿಟ್ಟಿನಲ್ಲಿ ಕೆರೆಗಳ ಒತ್ತುವರಿ ತೆರವಿಗೆ ಸರ್ಕಾರ ಸೂಚನೆ ನೀಡಿದೆ. ಆದ್ರೆ, ತೆರವಿಗೆ ಫಸಲು ಕಟಾವಿನವರೆಗೂ ಒಂದಷ್ಟು ಅವಕಾಶ ನೀಡಬೇಕು ಎಂದು ರೈತರು ಮನವಿ ಮಾಡುತ್ತಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ