ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಚಿತ್ರದುರ್ಗ; ದಶಕಗಳ ಬಳಿಕ ವಾಣಿವಿಲಾಸ ಸಾಗರ ಜಲಾಶಯ ಭರ್ತಿ, ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ

8 ದಶಕದ ಬಳಿಕ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಸಿಎಂ ಬೊಮ್ಮಾಯಿ, ಬಿಜೆಪಿ ನಾಯಕ ಬಿ.ಎಸ್​ ಯಡಿಯೂರಪ್ಪ ಬಾಗಿನ ಅರ್ಪಿಸಿದರು.

ಐತಿಹಾಸಿಕ ಕ್ಷಣಕ್ಕೆ ಕಾರಣವಾದ ಚಿತ್ರದುರ್ಗ; ದಶಕಗಳ ಬಳಿಕ ವಾಣಿವಿಲಾಸ ಸಾಗರ ಜಲಾಶಯ ಭರ್ತಿ, ಸಿಎಂ ಬೊಮ್ಮಾಯಿ ಬಾಗಿನ ಅರ್ಪಣೆ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಸಿಎಂ ಬೊಮ್ಮಾಯಿ ಬಾಗಿನ ಅರ್ಪಿಸಿದರು.
Edited By:

Updated on: Nov 22, 2022 | 3:22 PM

ಚಿತ್ರದುರ್ಗ: ವಾಣಿವಿಲಾಸ ಜಲಾಶಯಕ್ಕೆ ಕಾಯಕಲ್ಪ ನೀಡುತ್ತೇವೆ. ಅದಕ್ಕಾಗಿ 738 ಕೋಟಿ ರೂ. ಅನುದಾನ ಮೀಸಲಿಟ್ಟಿದ್ದೇವೆ. ಜಲಾಶಯದ ಕಾಲುವೆಗಳ ಅಭಿವೃದ್ಧಿ ಮಾಡುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಜಿಲ್ಲೆಯ ಹಿರಿಯೂರಿನಲ್ಲಿ ನಡೆದ ಜನಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. 2007-08ರಲ್ಲಿ ನೀರಾವರಿ ಯೋಜನೆಗಾಗಿ ಹೋರಾಟ ನಡೆದಿತ್ತು. ಚಿತ್ರದುರ್ಗದಲ್ಲಿ 580 ದಿನ ರೈತರು ನಿರಂತರ ಧರಣಿ‌ ನಡೆಸಿದ್ದರು. ಆದರೆ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದವು. ನೀರಾವರಿ ಸಚಿವನಾಗಿದ್ದಾಗ ಧರಣಿ ಸ್ಥಳಕ್ಕೆ ಭೇಟಿ ನೀಡಿದ್ದೆ. ಆಗಿನ ಸಿಎಂ ಆಗಿದ್ದ ಬಿ.ಎಸ್​ ಯಡಿಯೂರಪ್ಪ ಜೊತೆ ಚರ್ಚಿಸಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿತ್ತು. ಹಿರಿಯೂರಿಗೆ ಬಂದು ಹೋದ 15 ದಿನದಲ್ಲೇ ಆದೇಶ ಹೊರಡಿಸಿದ್ದೆ ಎಂದು
ಸಿಎಂ ಬೊಮ್ಮಾಯಿ ಹೇಳಿದರು.

ಇನ್ನು 8 ದಶಕದ ಬಳಿಕ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿದೆ. ಇದೊಂದು ಐತಿಹಾಸಿಕ ಕ್ಷಣವಾಗಿದ್ದು, ಸಿಎಂ ಬೊಮ್ಮಾಯಿ, ಬಿಜೆಪಿ ನಾಯಕ ಬಿ.ಎಸ್​ ಯಡಿಯೂರಪ್ಪ, ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಬಾಗಿನ ಅರ್ಪಿಸಿದರು. ಈ ಕುರಿತಾಗಿ ಸಿಎಂ ಬೊಮ್ಮಾಯಿ ತಮ್ಮ ಟ್ವೀಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ‘ಇದೊಂದು ಐತಿಹಾಸಿಕ ಕ್ಷಣ. ಮಹಾರಾಜರ ಕಾಲದಲ್ಲಿ ಕಟ್ಟಿಸಿದ ವಾಣಿವಿಲಾಸ 88 ವರ್ಷಗಳ ಹಿಂದೆ ತುಂಬಿತ್ತು. 75 ವರ್ಷಗಳ ನಂತರ ಸ್ವಾತಂತ್ರ್ಯದ ಬಳಿಕ ಪ್ರಪ್ರಥಮ ಬಾರಿಗೆ ಬಾಗಿನ ಅರ್ಪಿಸುವ ಸೌಭಾಗ್ಯ ಇಂದು ನಮಗೆ ಪ್ರಾಪ್ತವಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಜನಸಂಕಲ್ಪ ಯಾತ್ರೆ ವಿಜಯ ಸಂಕಲ್ಪ ಯಾತ್ರೆ ಆಗಲಿದೆ. ಇದೇ ಉತ್ಸಾಹ ಇದ್ದರೆ ಶಾಸಕಿ ಪೂರ್ಣಿಮಾ ಮತ್ತೊಮ್ಮೆ ಗೆಲ್ಲುತ್ತಾರೆ. ತುಂಗಭದ್ರಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯಾಗಿದೆ. ಕೇಂದ್ರ ಸರ್ಕಾರದಿಂದ 16 ಸಾವಿರ ಕೋಟಿ ಅನುದಾನ ಬರಲಿದೆ. ಪ್ರಧಾನಿ ಮೋದಿ ಆಶೀರ್ವಾದದಿಂದ ಅಭಿವೃದ್ಧಿ ಯೋಜನೆಗಳು ಜಾರಿ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ನೀರಾವರಿ ಸವಲತ್ತು ಯೋಜನೆ ಜಾರಿ ಮಾಡಲಾಗಿದೆ. ನೀರಾವರಿಯಿಂದ ಜನ‌ಜೀವನ ಸಮೃದ್ಧಿ ಆಗಲಿದೆ. ರೈತನ ಬೆವರಿಗೆ ಬೆಲೆ ಸಿಗುವ ಕೆಲಸ ಆಗುತ್ತದೆ. ಬಂಗಾರ ಬೆಳೆಯ ನಾಡು ಆಗಬೇಕೆಂಬುದು ನಮ್ಮ ಸಂಕಲ್ಪ. ಚಳ್ಳಕೆರೆಯಲ್ಲಿರುವ ಐಐಎಸ್ಸಿ, ಇಸ್ರೋ ಸಂಸ್ಥೆಯಿಂದ ದೊಡ್ಡ ಬೆಳವಣಿಗೆ. ಚಿತ್ರದುರ್ಗದಲ್ಲಿ 1ಸಾವಿರ ಎಕರೆಯಲ್ಲಿ ಇಂಡಸ್ಟ್ರಿಯಲ್ ಟೌನ್ ಶಿಪ್​ನ್ನು​ ಬರುವ ಜನವರಿ ಸರ್ಕಾರದಿಂದ ಚಾಲನೆ ನೀಡಲಿದ್ದೇವೆ ಎಂದರು.

ದುಡಿಯುವ ವರ್ಗಕ್ಕೆ ಶಕ್ತಿ ತುಂಬು ಚಿಂತನೆ ಸರ್ಕಾರದ್ದಾಗಿದೆ. ಜನ ವಿರೋಧಿ, ಅಭಿವೃದ್ಧಿ ವಿರೋಧಿ, ಎಸ್ಸಿ-ಎಸ್ಟಿ ವಿರೋಧಿ ಕಾಂಗ್ರೆಸ್​ ಪಕ್ಷವನ್ನು ಬೇರು ಸಮೇತ‌ ಕಿತ್ತು ಹಾಕಬೇಕೆಂದು ಕರೆ ನೀಡಿದರು. ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಏಕೆ ಮಾಡಲಿಲ್ಲ. ರಾಜಕೀಯ ಇಚ್ಛಾಶಕ್ತಿಯಿಂದ‌ ಬದಲಾವಣೆ ಸಾಧ್ಯ. ಯಡಿಯೂರಪ್ಪ ಆಶೀರ್ವಾದಿಂದ ರಾಜ್ಯ ಸರ್ಕಾರದಿಂದ ಸಮಗ್ರ ಅಭಿವೃದ್ಧಿ ಆಗುತ್ತಿದೆ. ಜನರ ಸಂಕಲ್ಪವೇ ನಮ್ಮ ಸಂಕಲ್ಪ ಆಗಿದೆ. ಹಿರಿಯೂರಿನ ವಾಣಿ‌ ಸಕ್ಕರೆ ಕಾರ್ಖಾನೆ ಬಂದಾಗಿದೆ. ಪುನಶ್ಚೇತನ ಮಾಡುವುದು ರೈತರ ಒತ್ತಾಸೆಯಾಗಿದ್ದು, ತಜ್ಞರ ಸಮಿತಿ ಕಳಿಸಿ ಅಧ್ಯಯನ ನಡೆಸಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:16 pm, Tue, 22 November 22

Follow Us