ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ: ಪ್ರಯೋಗಾಲಯ ವರದಿ ಬಹಿರಂಗ, ಕಾಲರಾ ಮಾದರಿ ಪತ್ತೆ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 03, 2023 | 3:26 PM

ಚಿತ್ರದುರ್ಗ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಜುಲೈ 31ರಂದು ಕಲುಷಿತ ನೀರು ಸೇವಿಸಿ ಮೂವರು ಸಾವಿಗೀಡಾಗಿದ್ದರೆ, ನೂರು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದರು. ಬಳಿಕ ವಾಂತಿ, ಭೇದಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದ್ದು, ಕಾಲರಾ ಮಾದರಿ ಪತ್ತೆಯಾಗಿದ್ದು, ನೀರು ಕುಡಿಯಲು ಯೋಗ್ಯವಲ್ಲವೆಂಬ ವರದಿ ನೀಡಲಾಗಿದೆ.

ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ: ಪ್ರಯೋಗಾಲಯ ವರದಿ ಬಹಿರಂಗ, ಕಾಲರಾ ಮಾದರಿ ಪತ್ತೆ
ಪ್ರಾತಿನಿಧಿಕ ಚಿತ್ರ
Follow us on

ಚಿತ್ರದುರ್ಗ, ಆಗಸ್ಟ್​ 03: ಕಲುಷಿತ ನೀರು (Contaminated water) ಸೇವಿಸಿ ಮೂವರು ಸಾವಿಗೀಡಾಗಿದ್ದರೆ, ನೂರು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿರುವಂತಹ ಘಟನೆ ನಗರದ ಕವಾಡಿಗರಹಟ್ಟಿ ಬಡಾವಣೆಯಲ್ಲಿ ಜುಲೈ 31ರಂದು ನಡೆದಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ವರದಿ ಬಂದಿದ್ದು, ಕಾಲರಾ ಮಾದರಿ ಅಂಶ ಪತ್ತೆಯಾಗಿದೆ. ವಾಂತಿ, ಭೇದಿ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಿದ್ದು, ನೀರು ಕುಡಿಯಲು ಯೋಗ್ಯವಲ್ಲವೆಂದು ಚಿತ್ರದುರ್ಗ ಜಿಲ್ಲಾ ಸರ್ವೇಕ್ಷಣಾ ಘಟಕ ವರದಿಯಲ್ಲಿ ಉಲ್ಲೇಖಿಸಿದೆ. ಪ್ರಕರಣ ಸಂಬಂಧ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಾಕಿ ಇದೆ.

ಶೋಕಾಸ್ ನೋಟಿಸ್​ ಜಾರಿ

ಪ್ರಕರಣ ವಿಚಾರವಾಗಿ ನಗರಸಭೆ ಪೌರಾಯುಕ್ತ ಶ್ರೀನಿವಾಸ್, ಎಇಇ ಮಂಜುನಾಥ್​, ಜೆಇ ಕಿರಣ್​ಗೆ ಕಾರಣ ಕೇಳಿ ಚಿತ್ರದುರ್ಗ ಜಿಲ್ಲಾಧಿಕಾರಿ ದಿವ್ಯಪ್ರಭುರಿಂದ ಶೋಕಾಸ್ ನೋಟಿಸ್​ ಜಾರಿ ಮಾಡಲಾಗಿದೆ.

ಕವಾಡಿಗರಹಟ್ಟಿ ನಿವಾಸಿಗಳಿಂದ ಟೈರ್​ಗೆ ಬೆಂಕಿ ಹಚ್ಚಿ ರಸ್ತೆ ತಡೆದು ಪ್ರತಿಭಟನೆ ಮಾಡಲಾಗಿದೆ. ಘಟನೆ ನಡೆದು 3 ದಿನ ಕಳೆದರೂ ಯಾವುದೇ ಕ್ರಮ ಜರುಗಿಸಿಲ್ಲ. ಶಾಸಕರು, ಸಂಸದರು ಈವರೆಗೂ ಭೇಟಿ ನೀಡಿಲ್ಲ. ಸೂಕ್ತ ಆಹಾರ, ಶುದ್ಧ ಕುಡಿಯುವ ನೀರು ಪೂರೈಸುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆ ಎಸಿ ಕಾರ್ತಿಕ್, ತಹಶೀಲ್ದಾರ್ ನಾಗವೇಣಿ ನೇತೃತ್ವದಲ್ಲಿ ಅಕ್ಕಿ, ಬೇಳೆ, ಗೋದಿ ಸೇರಿದಂತೆ ದಿನಬಳಕೆ ವಸ್ತುಗಳುಳ್ಳ ಕಿಟ್ ವಿತರಣೆ ಮಾಡಲಾಗಿದೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವನೆ; ಮೃತರ ಸಂಖ್ಯೆ 3ಕ್ಕೆ ಏರಿಕೆ, ಪ್ರಕರಣ ದಾಖಲು

ಘಟನೆ ಹಿನ್ನೆಲೆ

ಕವಾಡಿಗರಹಟ್ಟಿಯ ಸುಮಾರು ಒಂದು ನೂರು ಜನರು ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ. ಇಷ್ಟಕ್ಕೆಲ್ಲ ಕಾರಣ ನೀರಗಂಟಿ ಸುರೇಶ. ದಲಿತ ಯುವಕ ಸವರ್ಣಿಯ ಸಮುದಾಯದ ಬಾಲೆಯನ್ನು ಪ್ರೇಮಿಸಿದ್ದು ಫೋಕ್ಸೋ ಪ್ರಕರಣ ದಾಖಲಾಗಿತ್ತು. ಅದೇ ಕಾರಣಕ್ಕೆ ದ್ವೇಷದಿಂದ ನಿರಗಂಟಿ ಸುರೇಶನೇ ನೀರಿನ ಟ್ಯಾಂಕಿನಲ್ಲಿ ವಿಷ ಬೆರೆಸಿದ್ದಾನೆ. ಮೊದಲು ನೀರಗಂಟಿ ಸುರೇಶನ ಬಂಧಿಸಬೇಕೆಂದು ಮೃತ ಮಂಜುಳಾ ಅವರ ಮಾವ ರಾಮಣ್ಣ ಆಗ್ರಹಿಸಿದ್ದಾರೆ.

ಉಸ್ತುವಾರಿ ಸಚಿವ ಡಿ.ಸುಧಾಕರ್ ಈಗಾಗಲೇ ಮೃತರ ಕುಟಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ಎಲ್ಲಾ ಆಯಾಮದಲ್ಲೂ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಇಬ್ಬರು ಸಾವು ಪ್ರಕರಣ, ಪೋಕ್ಸೊ ಕೇಸ್ ದಾಖಲಿಸಿದ ದ್ವೇಷಕ್ಕೆ ನೀರಿಗೆ ವಿಷ ಹಾಕಿದ್ರಾ?

ಅನುಮಾನಸ್ಪದ ಪ್ರಕರಣ ದಾಖಲಿಸಿಕೊಂಡು ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೀರಗಂಟಿ ಸುರೇಶ ಬಗ್ಗೆ ವಿಷ ಬೆರೆಸಿದ ಆರೋಪಗಳಿವೆ. ಈಗಾಗಲೇ ಸುರೇಶ್ ವಿಚಾರಣೆ ನಡೆಸಿದ್ದೇವೆ. ಸದ್ಯ ಪುರಾವೆ ಇಲ್ಲದ ಕಾರಣ ಕರೆದಾಗ ಬರುವಂತೆ ಹೇಳಿ ಕಳಿಸಿದ್ದೇವೆ. ಎಫ್ಎಸ್​ಎಲ್ ವರದಿ ಬಂದ ಬಳಿಕ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:10 pm, Thu, 3 August 23