ಚಿತ್ರದುರ್ಗದಲ್ಲಿ ತುಂತುರು ಮಳೆಗೆ ಬೆಳೆ ನಾಶ; ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲು

| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 01, 2023 | 7:11 AM

ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ಹದಿನೈದು ದಿನಗಳಿಂದ ಸೋನೆ ಮಳೆ ಸುರಿಯುತ್ತಿದೆ. ಪರಿಣಾಮ ಮೆಣಸಿಕಾಯಿ ಬೆಳೆ ಕೈಗೆ ಬಂದಿದ್ದು ಬಾಯಿಗೆ ಬರದಂತಾಗಿದೆ. ಎಷ್ಟೇ ರಾಸಾಯನಿಕ ಸಿಂಪಡಿಸಿದರೂ ಪ್ರಯೋಜನವಾಗಿಲ್ಲ. ಬದಲಾಗಿ ರೈತನ ಜೇಬಿಗೆ ಕತ್ತರಿ ಬಿದ್ದಿದ್ದು, ನೇಗಿಲಯೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ.

ಚಿತ್ರದುರ್ಗದಲ್ಲಿ ತುಂತುರು ಮಳೆಗೆ ಬೆಳೆ ನಾಶ; ಕೈಗೆ ಬಂದ ತುತ್ತು ಬಾಯಿಗೆ ಬಾರದೆ ರೈತ ಕಂಗಾಲು
ಚಿತ್ರದುರ್ಗದಲ್ಲಿ ಮಳೆಗೆ ಬೆಳೆ ಹಾನಿ
Follow us on

ಚಿತ್ರದುರ್ಗ, ಆ.01: ಜಿಲ್ಲೆಯಲ್ಲಿ ಹದಿನೈದು ದಿನದಿಂದ ತುಂತುರು ಮಳೆಯ ಪರಿಣಾಮ ಬೆಳೆ ಹಾಳಾಗಿದೆ. ಕೈಗೆ ಬಂದ ತುತ್ತು ಬಾಯಿಗೆ ಬಾರದ ಸ್ಥಿತಿಯಿಂದ ರೈತರು(Farmers) ಕಂಗಾಲಾಗಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ರೈತರು ಆಗ್ರಹಿಸಿದ್ದಾರೆ. ಹೌದು ಚಿತ್ರದುರ್ಗ(Chitradurga) ತಾಲೂಕಿನ ಹುಣಸೇಕಟ್ಟೆ ಭಾಗದಲ್ಲಿ ಅನೇಕ ರೈತರು ಹತ್ತಾರು ಎಕರೆಯಲ್ಲಿ ಮೆಣಸಿಕಾಯಿ ಬೆಳೆ ಬೆಳೆದಿದ್ದಾರೆ. ಉತ್ತಮ ಬೆಳೆಯೂ ಬಂದಿದ್ದು, ಇನ್ನೇನು ಕೈಗೆ ಬರುವ ಸಂದರ್ಭದಲ್ಲಿ ಸೋನೆ ಮಳೆ ಶುರುವಾಗಿದೆ. ಪರಿಣಾಮ ಮೆಣಸಿಕಾಯಿ ಬೆಳೆ ಬಹುತೇಕ ನಾಶವಾಗಿದೆ. ಈ ಭಾಗದಲ್ಲಿ ನೂರಾರು ಎಕರೆಯಲ್ಲಿ ಬೆಳೆದಿದ್ದ ಮೆಣಸಿನಕಾಯಿ ಬೆಳೆ ಹಾನಿ ಆಗಿದೆ. ಸಾಲ ಸೋಲ ಮಾಡಿ ಎಕರೆಗೆ 50ಸಾವಿರದಿಂದ ಲಕ್ಷದವರೆಗೆ ಖರ್ಚು ಮಾಡಿದ್ದೇವೆ. ಆದ್ರೆ, ಬೆಳೆ ಹಾನಿಯಿಂದ ವಿಷ ಕುಡಿಯುವ ಸ್ಥಿತಿ ಎದುರಾಗಿದೆ ಎಂದು ರೈತರು ಸಂಕಟ ತೋಡಿಕೊಳ್ಳುತ್ತಿದ್ದಾರೆ.

ಇನ್ನು ಕೈಗೆ ಬಂದ ಬೆಳೆ ಕಣ್ಮುಂದೆ ಹಾಳಾಗುವುದನ್ನು ನೋಡಲಾಗದೆ, ವಿವಿಧ ರಾಸಾಯನಿಕಗಳನ್ನು ತಂದು ಸಿಂಪಡಣೆ ಮಾಡಿದ್ದೇವೆ. ರಾಸಾಯನಿಕ ಸಿಂಪಡಣೆಗಾಗಿಯೇ ಲೆಕ್ಕವಿಲ್ಲದಷ್ಟು ಹಣವನ್ನೂ ಖರ್ಚು ಮಾಡಿದ್ದೇವೆ. ಆದ್ರೆ, ರಾಸಾಯನಿಕ ಸಿಂಪಡಣೆ ಬಳಿಕ ಮತ್ತಷ್ಟು ಹೆಚ್ಚಿನ ಬೆಳೆ ನಾಶವಾಗಿದೆ. ಹೀಗಾಗಿ, ಸರ್ಕಾರ ಈ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಪರಿಹಾರ ನೀಡಬೇಕೆಂದು ರೈತರು ಆಗ್ರಹಿಸಿದ್ದಾರೆ.

ಇದನ್ನೂ ಓದಿ:ರೇಷ್ಮೆ ಗೂಡಿನ ಬಾಕಿ ಹಣ ಕೊಡದೆ ಪ್ರಾಣ ಬೆದರಿಕೆ ಹಾಕಿದ ವ್ಯಾಪಾರಿ: ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಿಲೇರಿದ ರೈತರು

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಕಳೆದ ಹದಿನೈದು ದಿನದಿಂದ ಜಡಿ ಮಳೆ ಸುರಿಯುತ್ತಿದೆ. ಪರಿಣಾಮ ಮೆಣಸಿನಕಾಯಿ ಬೆಳೆ ಬಹುತೇಕ ಹಾನಿಗೊಳಗಾಗಿದೆ. ಅಲ್ಲದೆ ಫರ್ಟಿಲೈಸರ್ಸ್​ನಲ್ಲಿ ಕೊಂಡು ಸಿಂಪಡಿಸಿದ ವಿವಿಧ ರಾಸಾಯನಿಕದಿಂದಲೂ ಬೆಳೆ ಹಾನಿಗೊಳಗಾಗಿದೆ ಎಂದು ರೈತರು ಆರೋಪಿಸಿದ್ದಾರೆ. ಹೀಗಾಗಿ, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಈ ಬಗ್ಗೆ ಗಮನಹರಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ