ಎಲ್ಲದಕ್ಕೂ ಸಿದ್ಧ: ಸ್ವಪಕ್ಷದ ವಿರುದ್ಧವೇ ಸೆಡ್ಡು ಹೊಡೆದ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ, ಟಿಕೆಟ್​ ಕೈತಪ್ಪಿದ ಕೆಲ ನಾಯಕರುಗಳು ಸ್ವ-ಪಕ್ಷದ ವಿರುದ್ದವೇ ಸಿಡಿದೆದ್ದಿದ್ದಾರೆ. ಅದರಂತೆ ಇದೀಗ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಅವರ ಪುತ್ರ ರಘುಚಂದನ್ ಬಂಡಾಯವೆದ್ದಿದ್ದು, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ.

ಎಲ್ಲದಕ್ಕೂ ಸಿದ್ಧ: ಸ್ವಪಕ್ಷದ ವಿರುದ್ಧವೇ ಸೆಡ್ಡು ಹೊಡೆದ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ
ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ
Edited By: ಕಿರಣ್ ಹನುಮಂತ್​ ಮಾದಾರ್

Updated on: Mar 29, 2024 | 4:33 PM

ಚಿತ್ರದುರ್ಗ, ಮಾರ್ಚ್ 29: ಲೋಕಸಭೆ ಚುನಾವಣೆ ಕಾವು ರಂಗೇರಿದೆ. ಈ ಮಧ್ಯೆ ಚಿತ್ರದುರ್ಗ(Chitradurga) ಕ್ಷೇತ್ರದಲ್ಲಿ ಪುತ್ರ ರಘುಚಂದನ್‌ಗೆ ಟಿಕೆಟ್ ಕೈತಪ್ಪಿದ ಹಿನ್ನೆಲೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ(M. Chandrappa) ಬಿಜೆಪಿ ವಿರುದ್ಧವೇ ಸೆಡ್ಡು ಹೊಡೆದಿದ್ದು, ಬಿಜೆಪಿ ಟಿಕೆಟ್ ಬದಲಿಸದಿದ್ದರೆ ಪುತ್ರ ರಘುಚಂದನ್​ ಪಕ್ಷೇತರವಾಗಿ ಸ್ಪರ್ಧಿಸಲಿದ್ದಾರೆ ಎಂದು ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಬೆಂಬಲಿಗರ ಸಭೆ ಬಳಿಕ ಮಾತನಾಡಿದ ಅವರು, ‘ಏಪ್ರಿಲ್‌ 3ರಂದು ರಘುಚಂದನ್ ನಾಮಪತ್ರ ಸಲ್ಲಿಕೆಗೆ ಚಿಂತನೆ ಮಾಡಲಾಗಿದೆ. 8 ಕ್ಷೇತ್ರದಲ್ಲಿರುವ ಬೆಂಬಲಿಗರು ನನ್ನ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ. ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.

ಎಲ್ಲದಕ್ಕೂ ಸಿದ್ಧ ಎಂದ ಶಾಸಕ ಎಂ.ಚಂದ್ರಪ್ಪ

‘ಇನ್ನೂ ಕಾಲ‌ ಮಿಂಚಿಲ್ಲ, ಬಿಜೆಪಿ ಟಿಕೆಟ್ ಕೇಳುತ್ತಿದ್ದೇವೆ. ನಮ್ಮ ನೋವು ಪಕ್ಷದ ವರಿಷ್ಠರಿಗೆ ಅರ್ಥ ಆಗಿದೆ ಎಂದು ಭಾವಿಸಿದ್ದೇವೆ.
ಪುತ್ರನನ್ನು ಚುನಾವಣೆಗೆ ನಿಲ್ಲಿಸುವಂತೆ ಈ ಹಿಂದೆ ಕಾರಜೋಳ ಕೂಡ ಹೇಳಿದ್ದರು. ಈಗ ಗೋವಿಂದ ಕಾರಜೋಳ ಬಂದಿರುವುದು ಸರಿಯೇ ಎಂದು ಕೇಳಿದ್ದೇನೆ. ‌ಪಕ್ಷ ನನ್ನ ವಿರುದ್ಧ ಕ್ರಮ ಕೈಗೊಂಡರೆ ಕೈಗೊಳ್ಳಲಿ, ಎಲ್ಲದಕ್ಕೂ ಸಿದ್ಧನಿದ್ದೇನೆ ಎಂದು ಸ್ವ-ಪಕ್ಷದ ವಿರುದ್ದವೇ ಕಿಡಿಕಾರಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗ ಬಿಜೆಪಿ ಟಿಕೆಟ್ ಮಿಸ್: ಯಡಿಯೂರಪ್ಪ-ವಿಜಯೇಂದ್ರ ವಿರುದ್ಧ ಬಂಡಾಯವೆದ್ದ ತಂದೆ-ಮಗ

ಇನ್ನು ಚಿತ್ರದುರ್ಗದಲ್ಲಿ ಬಿಜೆಪಿ ಸ್ವಾಭಿಮಾನಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪುತ್ರ ರಘುಚಂದನ್, ‘ 2019ರಲ್ಲಿ ನಾನು ಚಿತ್ರದುರ್ಗ ಬಿಜೆಪಿ ಟಿಕೆಟ್ ಕೇಳಿದ್ದೆ. 2024ರ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್​ ನೀಡುವುದಾಗಿ ಬಿಎಸ್ ವೈ , ಬಿ ಎಲ್ ಸಂತೋಷ್ ಭರವಸೆ ನೀಡಿದ್ದರು. ಈಗ ನನಗೆ ಟಿಕೆಟ್ ತಪ್ಪಿಸಿ ಗೋವಿಂದ ಕಾರಜೋಳ್​ಗೆ ಟಿಕೆಟ್ ನೀಡಿದ್ದಾರೆ. ಲೋಕಸಭೆ ಕ್ಷೇತ್ರದಲ್ಲಿ ಹೊಳಲ್ಕೆರೆ ಹೊರತುಪಡಿಸಿ ಬೇರೆ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ, ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ಆದಾಗ ಯಾರ ಬಳಿ ಹೋಗಬೇಕು. ನಮ್ಮ ಜಿಲ್ಲೆಯ ಕೆಲವರು ಕಳ್ಳಿ ನರಸಪ್ಪನ ಕೆಲಸ ಮಾಡಿದ್ದಾರೆ. ಬೇರೊಬ್ಬರ ಮಕ್ಕಳ ಜೀವನ ನೀವು ಹಾಳು ಮಾಡಿರಬಹುದು, ನಾಳೆ ನಿಮ್ಮ ಮಕ್ಕಳಿಗೂ ಇಂಥಹ ಪರಿಸ್ಥಿತಿ ಬರಬಹುದು ಎಂದು ಬಿಎಸ್​ವೈ ವಿರುದ್ದ ಕಿಡಿಕಾರಿದರು.

ಬಿಎಸ್ ಯಡಿಯೂರಪ್ಪನವರು ಈ ಹಿಂದೆ ಕೆಜೆಪಿ ಪಕ್ಷ ಕಟ್ಟಿದಾಗ ನನ್ನ ತಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಿಎಸ್ ವೈ ಪುತ್ರ ರಾಘವೇಂದ್ರ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿರಲಿಲ್ಲ. ಇದೀಗ ಮುದೋಳದಿಂದ ಕರೆತಂದು ಕಾರಜೋಳ್​ಗೆ ಟಿಕೆಟ್ ನೀಡಿದ್ದಾರೆ. ಚಿತ್ರದುರ್ಗ ಕ್ಷೇತ್ರದಲ್ಲಿ ಯಾರೂ ಗಂಡಸರು ಇರಲಿಲ್ಲವೇ ಎಂದು ಕಿಡಿಕಾರಿದರು. ಇದೀಗ ನನ್ನ ತಂದೆ ಹಾಗೂ ಬೆಂಬಲಿಗರು ಕೈಗೊಂಡ ನಿರ್ಧಾರಕ್ಕೆ ನಾನು ಬದ್ಧ. ಇನ್ನೂ ಮುಂದಿನ 30ವರ್ಷ ನಾನು ರಾಜಕಾರಣ ಮಾಡುತ್ತೇನೆ. ನನ್ನನ್ನು ಯಾರೂ ಸಹ ತಡೆಯಲು ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:29 pm, Fri, 29 March 24

Loading...
Unable to load recommendations.
Follow Us