ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್​ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 24, 2023 | 11:08 PM

ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದೆ. ಪರಿಣಾಮ ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು ಆಗ್ರಹಿಸಿದ್ದಾರೆ.

ಸುಗಮ ಸಂಚಾರಕ್ಕೆ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್​ ಅಡ್ಡಿ: ವಾಹನ ಸವಾರರಿಗೆ ಕಿರಿಕಿರಿ
ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ಸ್
Follow us on

ಚಿತ್ರದುರ್ಗ, ಆಗಸ್ಟ್​ 24: ಸುಗಮ ಸಂಚಾರಕ್ಕಾಗಿ ನಗರ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ಸ್ (traffic signals) ಅಳವಡಿಸಲಾಗುತ್ತದೆ. ಅಂತೆಯೇ ವಾಹನ ಸವಾರರಿಗೆ ಟ್ರಾಫಿಕ್ ಸಿಗ್ನಲ್ಸ್ ಸಹಕಾರಿ ಆಗಿರುತ್ತದೆ. ಆದರೆ ಅದೊಂದು ನಗರದಲ್ಲಿ ಅವೈಜ್ಞಾನಿಕ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ವಾಹನ ಸವಾರರಿಗೆ ಕಿರಿಕಿರಿ ಉಂಟು ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ವರದಿ ಇಲ್ಲಿದೆ. ಕೋಟೆನಾಡು ಚಿತ್ರದುರ್ಗ ನಗರದಲ್ಲಿ ವಾರದ ಹಿಂದಷ್ಟೇ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಗಾಂಧಿವೃತ್ತದಲ್ಲಿ ಸಿಗ್ನಲ್ ಅಳವಡಿಸಲಾಗಿದೆ. ಅರ್ಧ ಕಿ.ಮೀಟರ್ ಗೂ ಕಡಿಮೆ ಅಂತರದಲ್ಲೇ ಇರುವ ಎಸ್ ಬಿಎಮ್ ಸರ್ಕಲ್ ಬಳಿ ಮತ್ತೆ ಸಿಗ್ನಲ್ ಅಳವಡಿಸಲಾಗಿದೆ.

ಅಂತೆಯೇ ಒನಕೆ ಓಬವ್ವ ಸ್ಟೇಡಿಯಂ ಕ್ರಾಸ್ ಮತ್ತು ಚಳ್ಳಕೆರೆ ಗೇಟ್ ಬಳಿಯೂ ಕಡಿಮೆ ಅಂತರದಲ್ಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಹೀಗಾಗಿ, ಒಂದು ವೃತ್ತದ ಸಿಗ್ನಲ್ ಪಾಸ್ ಆಗಿರುವ ವಾಹನ್ ಪಿಕ್ ಅಪ್ ತೆಗೆದುಕೊಳ್ಳುವ ಮುನ್ನವೇ ಮತ್ತೆ ಸಿಗ್ನಲ್ ಗಾಗಿ ಕಾಯುವಂತಾಗಿದೆ. ಇಡೀ ದುರ್ಗದ ಮುಖ್ಯ ರಸ್ತೆ ಸದಾ ವಾಹನಗಳಿಂದ ತುಂಬಿರುವ ಸ್ಥಿತಿ ನಿರ್ಮಾಣ ಆಗಿದೆ.

ಇದನ್ನೂ ಓದಿ: ಚಿತ್ರದುರ್ಗ: ಪರೀಕ್ಷಾರ್ಥ ಹಾರಾಟ ನಡೆಸುತ್ತಿದ್ದ ಪೈಲಟ್​ ರಹಿತ ತಪಸ್ ವಿಮಾನ ಪತನ

ಪಾದಾಚಾರಿಗಳು ರಸ್ತೆ ದಾಟಲಾಗದ ಸ್ಥಿತಿ ಉಂಟಾಗಿದೆ. ಅಲ್ಲದೆ, ಸಿಗ್ನಲ್ ಗಳಲ್ಲಿ ಅವೈಜ್ಞಾನಿಕವಾಗಿ ಸಮಯ (ಸೆಕೆಂಡ್ಸ್ -ಪಲ್ಸ್) ಅಳವಡಿಸಿದ್ದರಿಂದ ಒಂದೇ ವೃತ್ತದಲ್ಲಿ ಸಿಗ್ನಲ್ ಪಾಸ್​ ಆಗಲೂ ಮೂರು ಮೂರು ಸಲ ಸಿಗ್ನಲ್ ಗಾಗಿ ಕಾಯುವಂತಾಗಿದೆ. ಕೆಲವೆಡೆ ಕೇವಲ 20ಸೆಕೆಂಡ್ಸ್ ಗೆ ಸಿಗ್ನಲ್ ನಿಗದಿಗೊಳಿಸಲಾಗಿದ್ದು
ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೆ ಸದಾಕಾಲ ವಾಹನ ದಟ್ಟಣೆ ಪರಿಣಾಮ ಜನರಿಗೆ ತೊಂದರೆ ಆಗುತ್ತಿದೆ ಎಂಬುದು ಇವರ ಆರೋಪ.

ಈ ಹಿಂದೆ ಯಾವುದೇ ಅಡಚಣೆ ಇಲ್ಲದೆ ಹೊಳಲ್ಕೆರೆ ರಸ್ತೆಯಿಂದ ಕೋರ್ಟ್ ಗೆ ಐದು ನಿಮಿಷದಲ್ಲಿ ಬರುತ್ತಿದ್ದೆವು. ಈಗ ಟ್ರಾಫಿಕ್ ಸಿಗ್ನಲ್ ಅಳವಡಿಸಿದ್ದು ಸಮಯ ವ್ಯರ್ಥಮಾಡಿದಂತಾಗುತ್ತಿದೆ. ಕನಿಷ್ಠ 15ನಿಮಿಷ ಕಾಲ ಟ್ರಾಫಿಕ್ ನಲ್ಲೇ ಕಳೆಯುವಂತಾಗಿದೆ. ಹೀಗಾಗಿ, ಶಾಲೆಗೆ ಹೋಗುವವರು, ಇತರೆ ಕಚೇರಿಗಳಿಗೆ ತೆರಳುವವರಿಗೆ ತೊಂದರೆ ಆಗುತ್ತಿದೆ. ಅವೈಗ್ನಾನಿಕ ಸಿಗ್ನಲ್ ಅಳವಡಿಕೆ ತೆರವು ಮಾಡಿ ಸುಗಮ ಸಂಚಾರಕ್ಕೆ ಅನುಕೂಲ ಆಗುವಂತೆ ಸಿಗ್ನಲ್ ಅಳವಡಿಸಬೇಕೆಂಬುದು ಆಗ್ರಹಿಸಲಾಗಿದೆ.

ಇದನ್ನೂ ಓದಿ: ದುರ್ಗದ ಕಾವಾಡಿಗರ ಹಟ್ಟಿಯಲ್ಲಿ ಸರಣಿ ಸಾವಿಗೆ ದಾವಣಗೆರೆಯ ಸೂಳೆಕೆರೆ ನೀರು ಕಾರಣವಾ? ಲ್ಯಾಬ್ ವರದಿ ಫಲಿತಾಂಶ ಇಲ್ಲಿದೆ

ಕೋಟೆನಾಡು ಚಿತ್ರದುರ್ಗದಲ್ಲಿ ಪೊಲೀಸ್ ಇಲಾಖೆ ಅವೈಜ್ಞಾನಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಿದೆ. ಪರಿಣಾಮ ವಾಹನ ಸವಾರರು, ಪಾದಾಚಾರಿಗಳು ಸಮಸ್ಯೆ ಎದುರಿಸುವಂತಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಇನ್ನಾದ್ದರೂ ಜಿಲ್ಲಾಡಳಿತ, ಪೊಲೀಸ್​ ಇಲಾಖೆ ಮತ್ತು ನಗರಸಭೆ ಈ ಬಗ್ಗೆ ಗಮನಹರಿಸಿ ಜನರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವಾಹನ ಸವಾರರು
ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.