AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಸರದಿಂದ ದೇವಸ್ಥಾನ ಒಡೆಯಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

Basavaraj Bommai: ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ಅವಸರದಿಂದ ದೇವಸ್ಥಾನ ಒಡೆಯಬೇಡಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
ಸಿಎಂ ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
TV9 Web
| Updated By: ganapathi bhat|

Updated on: Sep 14, 2021 | 8:59 PM

Share

ಬೆಂಗಳೂರು: ದೇವಸ್ಥಾನ ತೆರವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶ ಮುಂದಿಟ್ಟುಕೊಂಡು ಅವಸರದಿಂದ ತುರ್ತು ಕ್ರಮ‌ ಜರುಗಿಸಿ ದೇವಸ್ಥಾನಗಳನ್ನು ಒಡೆಯಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳವಾರ ಬೆಂಗಳೂರಿನಲ್ಲಿ ಕೊವಿಡ್ ಲಸಿಕೆ ಅಭಿಯಾನದ ಹಿನ್ನೆಲೆಯಲ್ಲಿ ಸಭೆ ನಡೆಸಿದ ಬಳಿಕ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ ಈ ವಿಷಯ ತಿಳಿಸಿದರು.

ಮೈಸೂರಿನ ದೇವಾಲಯಗಳ ತೆರವಿನ ಕುರಿತಂತೆ ಎಲ್ಲ ವಿವರಗಳನ್ನು ಸದನದಲ್ಲಿ ನೀಡುತ್ತೇನೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಯಾಕೆ ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.

ಇಡೀ ಕರ್ನಾಟಕದಲ್ಲಿ ಅವಸರದ ತೀರ್ಮಾನ ತೆಗೆದುಕೊಂಡು ದೇವಸ್ಥಾನಗಳನ್ನು ಒಡೆಯುವ ಕೆಲಸ ಮಾಡಬಾರದು. ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಸಮಗ್ರವಾಗಿ ಅಧ್ಯಯನ ಮಾಡಿ, ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಿ ಎರಡು ದಿನಗಳಲ್ಲಿ ನಿರ್ದಿಷ್ಟ ಸೂಚನೆ ನೀಡಲಾಗುವುದು. ಸದನ ನಡೆಯುತ್ತಿರುವುದರಿಂದ ಎಲ್ಲ ವಿವರಗಳನ್ನು ಸದನಕ್ಕೆ ಒದಗಿಸಲಾಗುವುದು ಎಂದು ತಿಳಿಸಿದರು.

ನಂಜನಗೂಡಿನಲ್ಲಿ ದೇವಾಲಯ ತೆರವು ಮಾಡಿದ ವಿಚಾರವಾಗಿ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದರು. ನಾಳೆ, ನಾಡಿದ್ದು ಸಂಪುಟ ಸಭೆ ಕರೆದು ಸ್ಪಷ್ಟ ಆದೇಶ ನೀಡುವ ಬಗ್ಗೆ ತಿಳಿಸಿದರು. ದೇಗುಲ ತೆರವು ಬಗ್ಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಆತುರದಲ್ಲಿ ದೇವಸ್ಥಾನ ತೆರವು ಮಾಡದಂತೆ ಸೂಚಿಸಲಾಗಿದೆ. ಸಂಪುಟದಲ್ಲಿ ಚರ್ಚಿಸಿ ಈ ಬಗ್ಗೆ ಸ್ಪಷ್ಟ ಆದೇಶ ಹೊರಡಿಸ್ತೇವೆ ಎಂದು ಹೇಳಿದರು.

ಸೆಪ್ಟೆಂಬರ್ 17 ರಂದು ಲಸಿಕೆ ಅಭಿಯಾನ ಮಾಡಲು ನಿರ್ಧರಿಸಿದ್ದೇವೆ ಎಂದು ವ್ಯಾಕ್ಸಿನೇಷನ್ ಡ್ರೈವ್ ಕುರಿತಾಗಿ ಸಿಎಂ ಬೊಮ್ಮಾಯಿ ವಿವರಿಸಿದರು. ಬೆಂಗಳೂರು ಹಾಗೂ ಇತರ ಜಿಲ್ಲೆಗಳಲ್ಲಿ ಲಸಿಕೆ ಹಾಕಲು ಕಾರ್ಯಕ್ರಮ ಮಾಡಲಾಗುತ್ತದೆ. ಲಸಿಕೆ ಹಾಕಿಸಲು ಆಯಾ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಿದ್ದೇನೆ. ಬೇರೆ ಬೇರೆ ದಿನಾಂಕದಂದು ಲಸಿಕೆ ಕಾರ್ಯಕ್ರಮ ಮಾಡಲಾಗುತ್ತದೆ. ಸಚಿವರು ಎಲ್ಲೆಲ್ಲಿ ಇರ್ತಾರೆ ಅಲ್ಲಿ ಲಸಿಕೆ ಕಾರ್ಯಕ್ರಮ ನಡೆಸಲಾಗುತ್ತದೆ. ನಾನು ಕಲಬುರಗಿಯಲ್ಲಿರ್ತೇನೆ, ಅಲ್ಲೇ ಭಾಗಿಯಾಗುವೆ. ಸಾಧ್ಯವಾದಷ್ಟು ಹೆಚ್ಚು ಲಸಿಕೆ ನೀಡಬೇಕೆಂಬ ಉದ್ದೇಶವಿದೆ ಎಂದು ತಿಳಿಸಿದರು.

ಇದನ್ನೂ ಓದಿ: Karnataka News Live: ಅನಧಿಕೃತವಾಗಿ ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿದ ದೇಗುಲಗಳ ತೆರವು ಕಾರ್ಯಕ್ಕೆ ವ್ಯಾಪಕ ವಿರೋಧ

ಇದನ್ನೂ ಓದಿ: ತೆರವುಗೊಳಿಸಬೇಕಾದ ಅನಧಿಕೃತ ದೇಗುಲಗಳ ಪಟ್ಟಿಗೆ ಸೇರಿರುವ ಮೈಸೂರಿನ ಪ್ರಮುಖ ಧಾರ್ಮಿಕ ಕೇಂದ್ರಗಳು ಇವು