ವಿಜಯಪುರ: ನಕಲಿ ದಾಖಲೆ ಸೃಷ್ಟಿ ಆರೋಪಿಸಿ ಇಂಡಿ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ವಿರುದ್ಧ ದೂರು ದಾಖಲಾಗಿದೆ. ಇಂಡಿ ಮಾಜಿ ಶಾಸಕ ಬಿಜೆಪಿಯ ಡಾ. ಸಾರ್ವಭೌಮ ಬಗಲಿ ಅವರ ಪುತ್ರ ಸಂಕೇತ ಬಗಲಿ ಎಂಬುವವರು ಇಂಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಯಶವಂತರಾಯಗೌಡ ಪಾಟೀಲ್ ಹಾಗೂ ಬೆಂಬಲಿಗರಾದ ಎಂ.ಆರ್.ಪಾಟೀಲ್, ಜೆಟ್ಟೆಪ್ಪ ರವಳಿ ವಿರುದ್ಧ ದೂರು ದಾಖಲಿಸಿದ್ದಾರೆ.
10 ತಿಂಗಳ ಹಿಂದೆ ನಡೆದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡುವಲ್ಲಿ ಅಕ್ರಮ ದಾಖಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. 2019 ಫೆಬ್ರುವರಿ 24 ಕ್ಕೆ ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾಗಿದ್ದ ಫೆಬ್ರುವರಿ 18 ರಂದು ಅವಿರೋಧ ಆಯ್ಕೆ ಘೋಷಿಸಬೇಕಿತ್ತು.
ಆದರೆ ಅದರ ಬದಲಾಗಿ ಫೆಬ್ರುವರಿ 19 ರಂದು ಅವಿರೋಧ ಆಯ್ಕೆ ಘೋಷಣೆ ಆಗಿತ್ತು. ಎದುರಾಳಿ ಗುಂಪಿನ ಸಂಕೇತ ಬಗಲಿ ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದರು. ವಾಪಸ್ ಪಡೆಯದ ಕಾರಣ ಸೂಚಕರ ಸಹಿ ಫೋರ್ಜರಿ ಮಾಡಿದ್ದಾರೆ ಎಂದು ಸಂಕೇತ ಬಗಲಿ ಆರೋಪಿಸಿದ್ದಾರೆ. ನಾಮಪತ್ರ ವಾಪಸ್ ತೆಗೆಯದೆ ಇದ್ದರೂ ಸಹ ಅವರ ಸೂಚಕ ಡಾ. ಸಂತೋಷ ಬಗಲಿ ಹೆಸರಲ್ಲಿ ಫೋರ್ಜರಿ ಸಹಿ ಮಾಡಿ ನಾಮಪತ್ರ ವಾಪಸ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಇಂಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.