ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವರಲ್ಲೇ ಗೊಂದಲ; ಅನಿವಾರ್ಯ ಎಂದ ಪರಮೇಶ್ವರ, ವಿದ್ಯುತ್ ಕೊರತೆ ಇಲ್ಲವೆಂದ ರಾಜಣ್ಣ

| Updated By: ಗಣಪತಿ ಶರ್ಮ

Updated on: Aug 16, 2023 | 2:56 PM

Karnataka Load Shedding; ತುಮಕೂರಿನಲ್ಲಿ ಮಾತನಾಡಿರುವ ಸಹಕಾರ ಸಚಿವ ರಾಜಣ್ಣ, ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​ ಮಾಡುವಷ್ಟು ವಿದ್ಯುತ್ ಕೊರತೆ ಇಲ್ಲ. ಒಂದು ವೇಳೆ ಮಾಡುವುದಿದ್ದರೆ ಮುಂಚಿತವಾಗಿ ಜನರಿಗೆ ಮಾಹಿತಿ ನೀಡಬೇಕು. ಲೋಡ್ ಶೆಡ್ಡಿಂಗ್ ಎಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ. ಆದರೆ, ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಮಂಗಳವಾರ ಸಚಿವ ಪರಮೇಶ್ವರ ಹೇಳಿದ್ದರು.

ಲೋಡ್ ಶೆಡ್ಡಿಂಗ್ ಬಗ್ಗೆ ಸಚಿವರಲ್ಲೇ ಗೊಂದಲ; ಅನಿವಾರ್ಯ ಎಂದ ಪರಮೇಶ್ವರ, ವಿದ್ಯುತ್ ಕೊರತೆ ಇಲ್ಲವೆಂದ ರಾಜಣ್ಣ
ಕೆಎನ್ ರಾಜಣ್ಣ
Follow us on

ತುಮಕೂರು, ಆಗಸ್ಟ್ 16: ಗೃಹಜ್ಯೋತಿ ಯೋಜನೆ ಅನುಷ್ಠಾನಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಹೇಳಿಕೊಂಡಿರುವ ಕರ್ನಾಟಕ ಕಾಂಗ್ರೆಸ್ ಸರ್ಕಾರದ (Karnataka Congress Government) ಸಚಿವರಲ್ಲೇ ಇದೀಗ ಲೋಡ್​ ಶೆಡ್ಡಿಂಗ್ (Load Shedding) ಮಾಡುವ ವಿಚಾರವಾಗಿ ಗೊಂದಲ ಮೂಡಿದಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದು ಗೃಹ ಸಚಿವ ಜಿ ಪರಮೇಶ್ವರ ಈಗಾಗಲೇ ಹೇಳಿದ್ದಾರೆ. ಇದೀಗ ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​ ಮಾಡುವಷ್ಟು ವಿದ್ಯುತ್ ಕೊರತೆ ಇಲ್ಲ ಎಂದು ಸಹಕಾರ ಇಲಾಖೆ ಸಚಿವ ಕೆಎನ್ ರಾಜಣ್ಣ (KN Rajanna) ಹೇಳಿದ್ದಾರೆ. ಆದರೆ, ಈ ವಿಚಾರವಾಗಿ ಇಂಧನ ಸಚಿವ ಕೆಜೆ ಜಾರ್ಜ್ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

ತುಮಕೂರಿನಲ್ಲಿ ಮಾತನಾಡಿರುವ ಸಹಕಾರ ಸಚಿವ ರಾಜಣ್ಣ, ರಾಜ್ಯದಲ್ಲಿ ಲೋಡ್​ ಶೆಡ್ಡಿಂಗ್​ ಮಾಡುವಷ್ಟು ವಿದ್ಯುತ್ ಕೊರತೆ ಇಲ್ಲ. ಒಂದು ವೇಳೆ ಮಾಡುವುದಿದ್ದರೆ ಮುಂಚಿತವಾಗಿ ಜನರಿಗೆ ಮಾಹಿತಿ ನೀಡಬೇಕು. ಲೋಡ್ ಶೆಡ್ಡಿಂಗ್ ಎಲ್ಲಿಯೂ ಇಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಈ ಬಾರಿ ವಾಡಿಕೆಯಷ್ಟು ಮಳೆಯಾಗದಿರುವ ಕಾರಣ ಮತ್ತು ಕೆಲವು ಜಿಲ್ಲೆಗಳಲ್ಲಿ ಬರ ಪರಿಸ್ಥಿತಿ ಇರುವುದರಿಂದ ಜಲವಿದ್ಯುತ್ ಉತ್ಪಾದನೆಗೆ ತೊಡಕಾಗಿದೆ. ರಾಜ್ಯದ ಸುಮಾರು ಹನ್ನೊಂದು ಜಿಲ್ಲೆಗಳಲ್ಲಿ ಈ ವರ್ಷ ಸರಾಸರಿಗಿಂತ ಕಡಿಮೆ ಮಳೆಯಾಗಿದೆ. ಇದು ವಿದ್ಯುತ್ ಪೂರೈಕೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಸರ್ಕಾರವು ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಜಾರಿಮಾಡುವ ಸಾಧ್ಯತೆ ಇದೆ ಎಂದು ಇತ್ತೀಚೆಗೆ ಮಾಧ್ಯಮಗಳು ವರದಿ ಮಾಡಿದ್ದವು.

ಈ ವಿಚಾರವಾಗಿ ಸೋಮವಾರ ಮಾತನಾಡಿದ್ದ ಜಿ ಪರಮೇಶ್ವರ, ಲೋಡ್ ಶೆಡ್ಡಿಂಗ್ ಮಾಡುವ ಮೂಲಕ ನಾವು ವಿದ್ಯುತ್ ಬೇಡಿಕೆಯನ್ನು ನಿರ್ವಹಿಸಬೇಕಾಗಿದೆ ಎಂದು ಹೇಳಿದ್ದರು.

ಸಿಟಿ ರವಿಯನ್ನು ಹುಚ್ಚನಿಗೆ ಹೋಲಿಸಿದ ಸಚಿವ ರಾಜಣ್ಣ

ಕಾಂಗ್ರೆಸ್ ಸರ್ಕಾರ 6 ತಿಂಗಳಲ್ಲಿ ಪತನವಾಗಲಿದೆ ಎಂಬ ಬಿಜೆಪಿ ನಾಯಕ ಸಿಟಿರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ರವಿಯನ್ನು ಹುಚ್ಚನಿಗೆ ಹೋಲಿಸಿದರು. ಅವೆಲ್ಲಾ ಹುಚ್ಚರ ಹೇಳಿಕೆಗಳು, ಅವುಗಳಿಗೆಲ್ಲ ಉತ್ತರ ಹೇಳೋಕಾಗಲ್ಲ. ಆರು ತಿಂಗಳಿಗೆ ಬಿದ್ದೋಗುತ್ತೆ, ಮೂರು ತಿಂಗಳಿಗೆ ಬಿದ್ದೋಗುತ್ತೆ ಎಂಬುದು ಅವರ ಅಭಿಪ್ರಾಯ ಇರಬಹುದು ಅಷ್ಟೇ. ಆ ಹೇಳಿಕೆಗೆ ಕಿಮ್ಮತ್ತು ಕೊಡೋ ಅವಶ್ಯಕತೆ ಇಲ್ಲ ಎಂದು ರಾಜಣ್ಣ ಹೇಳಿದರು.

ಇದನ್ನೂ ಓದಿ: Load shedding in Karnataka; ಲೋಡ್ ಶೆಡ್ಡಿಂಗ್ ಅನಿವಾರ್ಯ ಎಂದ ಸಚಿವ ಪರಮೇಶ್ವರ, ಅದಕ್ಕೆ ಕೊಟ್ಟ ಕಾರಣಗಳು ಇಲ್ಲಿವೆ ನೋಡಿ

ನನ್ನತ್ರ ಇರೋದು ಖಾಲಿ ಪೆನ್ ಡ್ರೈವ್ ಅಲ್ಲ ಅನ್ನೋ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿಯನ್ನು ಹಾವಾಡಿಗನಿಗೆ ಹೋಲಿಸಿದರು. ಹಾವಾಡಿಗರನ್ನ ನೋಡಿದ್ದೀವಿ ನಾವು. ಒಂದು ಬುಟ್ಟಿಯನ್ನ ತಂದಿಟ್ಟು, ಇದರಲ್ಲಿ ಆ ಹಾವಿದೆ, ಈ ಹಾವಿದೆ, ಇದನ್ನ ಬಿಡ್ತೀನಿ, ಅದನ್ನ ಬಿಡ್ತೀನಿ ಅಂತಾ ತೋರಿಸಿದ್ದನ್ನ ಮತ್ತು ಹಾವಾಡಿಗರ ಆಟವನ್ನ ನೋಡಿದ್ದೀವಿ. ಅದಕ್ಕೂ ಇದಕ್ಕೂ ಸಾಮ್ಯತೆಯಿದೆ ಅಂತಾ ಯಾಕೆ ಭಾವಿಸಬಾರದು? ಏನಿದ್ರೆ ಬಿಡ್ಲಿ, ಬಿಡೋ ತಾಕತ್ತಿದ್ರೆ ಬಿಡ್ಲಿ ಅಂತಾ ಎಷ್ಟು ಜನ ಸಚಿವರು ಹೇಳಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅಂತಾ ಅದ್ರಲ್ಲಿ ಇದೆ ಅವರಿಗೆ ಸಾರ್ವಜನಿಕವಾಗಿ ಶಿಕ್ಷೆ ಆಗಲಿ. ಸುಮ್ನೆ ಪೆನ್ ಡ್ರೈವ್ ಇಟ್ಕೊಂಡು, ಇದೊಂತರ ಬ್ಲಾಕ್ ಮೇಲ್. ಬ್ಲಾಕ್ ಮೇಲ್ ಅಲ್ಲದೆ ಬೇರೇನಲ್ಲ ಇದು. ತೆಗೆಯೋದು, ಇಟ್ಕೋಳೋದು, ತಾಕತ್ತಿದ್ರೆ ರಿಲೀಸ್ ಮಾಡ್ಲಿ ಎಂದು ಕುಮಾರಸ್ವಾಮಿಗೆ ರಾಜಣ್ಣ ಸವಾಲು ಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ