ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತವರು ಜಿಲ್ಲೆ ಶಿವಮೊಗ್ಗದಲ್ಲಿ ಇಂದು ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲಿದೆ. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ವಿರುದ್ಧ ವಿನಾಕಾರಣ FIR ಹಾಕಲಾಗಿದೆ ಎಂದು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್ ಇಂದು ಬಿಜೆಪಿ ಭದ್ರಕೋಟೆಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಪ್ರತಿಭಟನಾ ಱಲಿ ನಡೆಯಲಿದ್ದು, ಱಲಿ ಬಳಿಕ ಸೈನ್ಸ್ ಮೈದಾನದಲ್ಲಿ ಕಾಂಗ್ರೆಸ್ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದ KSRTC ಬಸ್ ನಿಲ್ದಾಣದಿಂದ ಱಲಿ ಆರಂಭಿಸಲು ತೀರ್ಮಾನಿಸಿರುವ ಕಾಂಗ್ರೆಸ್ ನಾಯಕರು, ಪ್ರತಿಭಟನಾ ಮೆರವಣಿಗೆ ಬಳಿಕ ಸೈನ್ಸ್ ಮೈದಾನದಲ್ಲಿ ಬಹಿರಂಗ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಡಾ.ಜಿ.ಪರಮೇಶ್ವರ್ ಸೇರಿದಂತೆ ಹಲವು ಕೈ ನಾಯಕರು ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಶಾಸಕರ ಕುಟುಂಬದ ಮೇಲಿನ ದೌರ್ಜನ್ಯ ಹಾಗೂ ರಾಜ್ಯ, ಕೇಂದ್ರ ಸರ್ಕಾರದ ವೈಫಲ್ಯಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.
ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ತಮಗೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಸದನದಲ್ಲಿ ಅಂಗಿ ಬಿಚ್ಚಿದ್ದಕ್ಕೆ ಸಭಾಪತಿಗಳು ಗರಂ ಆಗಿ ಸದನದಿಂದ ತಾತ್ಕಾಲಿಕವಾಗಿ ಅವರಿಗೆ ನಿಷೇಧ ಹೇರಿದ್ದರು. ಸಂಗಮೇಶ್ ನಡೆಯನ್ನು ಆಡಳಿತ ಪಕ್ಷ ಬಿಜೆಪಿಯೂ ಕಟುವಾಗಿ ಟೀಕಿಸಿತ್ತು. ಅದಾದ ನಂತರ ಭದ್ರಾವತಿ ಶಾಸಕರ ಪರ ನಿಂತ ವಿಪಕ್ಷ ನಾಯಕ ಸಿದ್ದರಾಮಯ್ಯ, ಗೂಳಿಹಟ್ಟಿ ಶೇಖರ್ ಪ್ರಕರಣವನ್ನು ಮೆಲುಕು ಹಾಕುವ ಮೂಲಕ ಬಿಜೆಪಿಯನ್ನು ಪ್ರಶ್ನಿಸಿದ್ದರು. ಅಲ್ಲದೇ, ಸದನಕ್ಕೆ ಸಂಗಮೇಶ್ ಅವರನ್ನು ಸೇರಿಸಿಕೊಳ್ಳಬೇಕೆಂದು ಪಟ್ಟುಹಿಡಿದಿದ್ದರು.
ಅಂಗಿ ಬಿಚ್ಚಿದ ಬಿ.ಕೆ.ಸಂಗಮೇಶ್, ಸಭಾಪತಿಗಳ ಸ್ಥಾನಕ್ಕೆ ಅಗೌರವ ತಂದಿದ್ದಾರೆ ಎಂದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಕ್ಕುಚ್ಯುತಿ ಮಂಡಿಸುವಾಗಲೂ ಕಾಂಗ್ರೆಸ್ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸಂಗಮೇಶ್ ಪರ ವಾದಿಸಿದ್ದರು. ಇದೀಗ ಈ ಎಲ್ಲಾ ಬೆಳವಣಿಗೆಗಳ ಮುಂದುವರೆದ ಭಾಗವೆಂಬಂತೆ ಕಾಂಗ್ರೆಸ್ ನಾಯಕರು ನೇರವಾಗಿ ಮುಖ್ಯಮಂತ್ರಿಗಳ ತವರು ನೆಲ ಶಿವಮೊಗ್ಗಕ್ಕೆ ಲಗ್ಗೆ ಇಟ್ಟಿದ್ದು, ಪ್ರತಿಭಟನೆ ನಡೆಸಲಿದ್ದಾರೆ.
ಇದನ್ನೂ ಓದಿ:
ಸದನದಲ್ಲಿ ಅಂಗಿ ಬಿಚ್ಚಿದ ಸಂಗಮೇಶ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಶಾಸಕ ಆರಗ ಜ್ಞಾನೇಂದ್ರ
13ಕ್ಕೆ ‘ಶಿವಮೊಗ್ಗ ಚಲೋ’ ಎಂದ ಡಿ.ಕೆ ಶಿವಕುಮಾರ್: ಸಂಗಮೇಶ್ ಬೆಂಬಲಕ್ಕೆ ಕೆಪಿಸಿಸಿ