
ಬೆಂಗಳೂರು, ಫೆಬ್ರವರಿ 3: ಕರ್ನಾಟಕ ಕಾಂಗ್ರೆಸ್ (Congress) ಸರ್ಕಾರ ಹಾಗೂ ಸಚಿವರ ವಿರುದ್ಧ ಗುತ್ತಿಗೆದಾರರಿಂದ ಕಮಿಷನ್ ಆರೋಪ ಕೇಳಿಬಂದ ಬೆನ್ನಲ್ಲೇ, ಇದೀಗ ಅದೇ ಗುತ್ತಿಗೆದಾರರ ಸಂಘದೊಳಗೇ (Karnataka Contractors’ Association) ಭ್ರಷ್ಟಾಚಾರದ ಡೀಲ್ ನಡೆದಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಸರ್ಕಾರದ ವಿರುದ್ಧ ಧ್ವನಿ ಎತ್ತಿದ್ದ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳೇ ಬಡ ಗುತ್ತಿಗೆದಾರರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದಲ್ಲದೇ, ಅದಕ್ಕೆ ಸಂಬಂಧಿಸಿದ ಆಡಿಯೋ ಸಹ ವೈರಲ್ ಆಗಿದೆ. ಇದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿವೆ.
ರಾಜ್ಯ ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಹಾಗೂ ಅವರ ಸಂಗಡಿಗರು ವಿವಿಧ ಸರ್ಕಾರಿ ಇಲಾಖೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ನೇರವಾಗಿ ಭಾಗಿಯಾಗಿದ್ದು, ಬಡ ಗುತ್ತಿಗೆದಾರರಿಂದ ಕಮಿಷನ್ ವಸೂಲಿಗೆ ಇಳಿದಿದ್ದಾರೆ ಎನ್ನಲಾಗಿದೆ. ಲೋಕೋಪಯೋಗಿ ಇಲಾಖೆ, ಇಂಧನ ಇಲಾಖೆ, ನಗರಾಭಿವೃದ್ಧಿ, ನೀರಾವರಿ ಸೇರಿದಂತೆ ಬಹುತೇಕ ಎಲ್ಲಾ ಪ್ರಮುಖ ಇಲಾಖೆಗಳ ಟೆಂಡರ್ಗಳಲ್ಲಿ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಈ ಭ್ರಷ್ಟಾಚಾರದ ಡೀಲ್ನಲ್ಲಿ ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕ ಮಂಡಳಿ ಗೌರವಾಧ್ಯಕ್ಷ ಜಗನ್ನಾಥ್ ಜಿ., ಶಿವಾಜಿ ಹಾಗೂ ನಿರ್ದೇಶಕ ಹೆಚ್.ಆರ್. ಚಿಂಚಳಿ ಅವರ ಹೆಸರುಗಳು ಕೇಳಿಬರುತ್ತಿವೆ. ಟೆಂಡರ್ಗೆ ಬಿಡ್ ಹಾಕಿರುವ ಬಡ ಗುತ್ತಿಗೆದಾರರಿಗೆ ಬಿಡ್ ವಾಪಸ್ ಪಡೆಯುವಂತೆ ಒತ್ತಡ ಹಾಕಲಾಗುತ್ತಿದ್ದು, ಇದಕ್ಕೆ ಒಪ್ಪದಿದ್ದರೆ ಬೆದರಿಕೆ ಹಾಕಲಾಗುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬಂದಿವೆ.
ಅಲ್ಲದೆ, ತಾವು ಹಾಕಿದ್ದ ಬಿಡ್ ವಾಪಸ್ ಪಡೆಯಬೇಕಾದರೆ ಗುತ್ತಿಗೆ ಮೊತ್ತದಲ್ಲಿ ಮೊದಲಿಗೆ ಶೇ 3ರಷ್ಟು ಕಮಿಷನ್ ನೀಡಬೇಕು ಎಂಬ ಬೇಡಿಕೆ ಇಡಲಾಗಿತ್ತು. ನಂತರ ಮಾತುಕತೆ ನಡೆದು ಶೇ 2.5ರಷ್ಟು ಕಮಿಷನ್ಗೆ ಒಪ್ಪಿಗೆ ನೀಡಲಾಗಿದೆ ಎನ್ನಲಾಗಿದೆ. ಗುತ್ತಿಗೆ ಸಿಕ್ಕ ಕೂಡಲೇ ಡೀಲಿಂಗ್ ಹಣವನ್ನು ನೀಡುವಂತೆ ಗುತ್ತಿಗೆದಾರರಿಗೆ ತಾಕೀತು ಮಾಡಲಾಗುತ್ತಿದೆ ಎಂಬ ಆರೋಪಗಳು ವ್ಯಕ್ತವಾಗಿವೆ.
ಡೀಲಿಂಗ್ಗೆ ಸಂಬಂಧಿಸಿದ ಆಡಿಯೋ ವೈರಲ್ ಆಗಿದ್ದು, ಅದರಲ್ಲಿ ಸಂಘದ ಪದಾಧಿಕಾರಿಯೇ ಭ್ರಷ್ಟಾಚಾರದ ಡೀಲ್ ಬಗ್ಗೆ ಮಾತನಾಡಿರುವುದು ಕೇಳಿಸಿದೆ. ಸರ್ಕಾರ ಹಾಗೂ ಸಚಿವರ ವಿರುದ್ಧ ಕಮಿಷನ್ ಆರೋಪ ಮಾಡಿ ಹೋರಾಟ ನಡೆಸಿದ್ದ ಗುತ್ತಿಗೆದಾರರ ಸಂಘದೊಳಗೇ ಈ ರೀತಿ ಭ್ರಷ್ಟಾಚಾರ ನಡೆಯುತ್ತಿರುವ ಆರೋಪಗಳು ಈಗ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಸಂಘದ ವಿಶ್ವಾಸಾರ್ಹತೆ ಬಗ್ಗೆಯೇ ಸಂಶಯ ಮೂಡುವಂತಾಗಿದೆ.