ಡ್ರೋನ್ ಮೂಲಕ ಭೂಮಾಪನ, ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ: ಡಾ ವೀರೇಂದ್ರ ಹೆಗ್ಗಡೆ

|

Updated on: Jun 03, 2023 | 1:37 PM

ಡ್ರೋನ್ ಮೂಲಕ ಭೂಮಾಪನ ಮತ್ತು ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಯೋಜಿಸುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ ಹೇಳಿದರು.

ಡ್ರೋನ್ ಮೂಲಕ ಭೂಮಾಪನ, ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ ಚಿಂತನೆ: ಡಾ ವೀರೇಂದ್ರ ಹೆಗ್ಗಡೆ
ಡಾ. ವಿರೇಂದ್ರ ಹೆಗ್ಗಡೆ
Follow us on

ಮಂಗಳೂರು: ಡ್ರೋನ್ (Drone) ಮೂಲಕ ಭೂಮಾಪನ ಮತ್ತು ಇತರ ವಿನೂತನ ವಿಧಾನಗಳನ್ನು ಪರಿಚಯಿಸಲು ಕೇಂದ್ರ ಸರ್ಕಾರ (Central Government) ಯೋಜಿಸುತ್ತಿದೆ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ.ವೀರೇಂದ್ರ ಹೆಗ್ಗಡೆ (Dr. Veerendra Heggade) ಹೇಳಿದರು. ಡ್ರೋನ್‌ ಮೂಲಕ ಜಾಗದ ಅಳತೆ ಮಾಡಿ, ಹಕ್ಕುಪತ್ರ ನೀಡುವ ಕ್ರಮ ಮೊದಲಾದ ಅನೇಕ ಹೊಸ ಪದ್ಧತಿಗಳು ಸದ್ಯದಲ್ಲೆ ಬಳಕೆಗೆ ಬರಲಿವೆ. ದೇಶದ ಭವ್ಯ ಇತಿಹಾಸ, ಪರಂಪರೆ, ಸಂಸ್ಕೃತಿ ಹಿನ್ನೆಲೆಯಲ್ಲಿ ವರ್ತಮಾನದ ಸ್ಥಿತಿಯನ್ನು ಗಮನಿಸಿ ರಾಷ್ಟ್ರದ ಉಜ್ವಲ ಭವಿಷ್ಯ ರೂಪಿಸಬೇಕಾಗಿದೆ ಎಂದರು.

ಧರ್ಮಸ್ಥಳದ ಬೀಡಿನಲ್ಲಿ ಶುಕ್ರವಾರ ‘ರಾಜ್ಯಸಭೆಯಲ್ಲಿ ರಾಜರ್ಷಿ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದ ಅವರು ರಾಜ್ಯಸಭೆ ಸದಸ್ಯನಾಗಿ ಸಂಸತ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿ, ಪ್ರಶ್ನೆ ಕೇಳಿ ಮಾಹಿತಿ ಕಲೆ ಹಾಕಿದ್ದೇನೆ. ನನ್ನನ್ನು ಈಗಾಗಲೇ ಮೂರು ಪ್ರಮುಖ ಸಮಿತಿಗಳ ಸದಸ್ಯನಾಗಿ ನೇಮಕ ಮಾಡಿದ್ದಾರೆ. ಎಲ್ಲ ಸಂದರ್ಭಗಳನ್ನು ಸಚಿತ್ರವಾಗಿ ಬಿಡುಗಡೆಯಾದ ಪುಸ್ತಕದಲ್ಲಿ ವಿವರಿಸಲಾಗಿದೆ ಎಂದು ತಿಳಿಸಿದರು.

ಪುಸ್ತಕವು ಎಲ್ಲಾ ಚಟುವಟಿಕೆಗಳ ವಿವರವಾದ ಮಾಹಿತಿಯನ್ನು ಹೊಂದಿದೆ. ಮುಂಬರುವ ದಿನಗಳಲ್ಲಿ ನೂತನ ಸಂಸತ್ ಭವನದಲ್ಲಿ ನಡೆಯುವ ಕಲಾಪದಲ್ಲಿ ಸಕ್ರಿಯವಾಗಿ ಭಾಗವಹಿಸಿ ರಾಷ್ಟ್ರಕ್ಕೆ ಸೇವೆ ಸಲ್ಲಿಸುತ್ತೇನೆ. ಧರ್ಮಾಧಿಕಾರಿಯಾಗಿ ಮಂಜುನಾಥನ ಸೇವೆಯ ಜೊತೆಗೆ ರಾಷ್ಟ್ರ ಸೇವೆ ಮಾಡುವ ಸೌಭಾಗ್ಯ ಸಿಕ್ಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಸಂಸದರಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನೀಡಿದ್ದಾರೆ. ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸಲು ಸಕ್ರಿಯವಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಬಸವಣ್ಣನವರ ಕಾಯಕವೇ ಕೈಲಾಸದಡಿ ಕೇಂದ್ರ ಸರ್ಕಾರದ ಅಭಿವೃದ್ಧಿ ಕಾರ್ಯ: ಡಾ.ವೀರೇಂದ್ರ ಹೆಗ್ಗಡೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ 9,500 ಸೇವಾ ಕೇಂದ್ರಗಳಲ್ಲಿ ರಾಜ್ಯದಾದ್ಯಂತ ಸರ್ಕಾರಿ ಸೇವೆಗಳನ್ನು ಒದಗಿಸುವ ಮೂಲಕ 10,000 ಕ್ಕೂ ಹೆಚ್ಚು ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶಗಳನ್ನು ನೀಡಲಾಗಿದೆ. ಈ ಕೇಂದ್ರಗಳ ಮೂಲಕ ರಾಜ್ಯದ 1 ಕೋಟಿಗೂ ಹೆಚ್ಚು ಜನರಿಗೆ ಸರ್ಕಾರಿ ಸೇವೆಗಳನ್ನು ಒದಗಿಸಲಾಗಿದೆ. ಬೀದರ್ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನು ಸುಧಾರಿಸಲು ಅವರ 2.5 ಕೋಟಿ ರೂ. ಎಮ್​ಪಿಎಲ್​ಎಡಿ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ಸಂಸದರು ಹೇಳಿದರು.

ಹೇಮಾವತಿ ವೀ. ಹೆಗ್ಗಡೆ ಉಪಸ್ಥಿತರಿದ್ದರು. ರಾಜ್ಯಸಭೆ ಸದಸ್ಯರ ಆಪ್ತ ಕಾರ್ಯದರ್ಶಿ ಕೆ.ಎನ್‌. ಜನಾರ್ದನ್‌ ಸ್ವಾಗತಿಸಿದರು. ರುಡ್‌ಸೆಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ಗಿರಿಧರ್‌ ಕಲ್ಲಾಪುರ್‌, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸಿರಿ ಗ್ರಾಮೋದ್ಯೋಗ ಸಂಸ್ಥೆ, ಮಂಜುಶ್ರೀ ಪ್ರಿಂಟರ್ಸ್‌ ಹಾಗೂ ನಾನಾ ಶಾಲಾ-ಕಾಲೇಜುಗಳ ಮುಖ್ಯಸ್ಥರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:00 pm, Sat, 3 June 23