ಬುದ್ದಿವಂತ ಸಿನಿಮಾದಂತೆ ಮಹಿಳೆಯರಿಗೆ ವಂಚನೆ; ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 18, 2024 | 7:48 PM

ಉಪೇಂದ್ರ ಅಭಿನಯಿಸಿರುವ ಬುದ್ದಿವಂತ ಸಿನಿಮಾದಲ್ಲಿ ವಿವಿಧ ಮಹಿಳೆಯರಿಗೆ ವಂಚನೆ ಮಾಡುವ ರೀತಿಗೆ ಚಿತ್ರರಸಿಕರು ಫಿದಾ ಆಗಿದ್ದರು. ಅದೇ ಮಾದರಿಯಲ್ಲಿ ಕರಾವಳಿಯ ಮಹಿಳೆಯರಿಗೆ ವಂಚಿಸಿದ ಖತರ್ನಾಕ್ ಕಳ್ಳನೊಬ್ಬ ಕೊನೆಗೂ ಅಂದರ್ ಆಗಿದ್ದಾನೆ. ನಾನವನಲ್ಲ.. ನಾನವನಲ್ಲ ಎಂದು ಹೇಳುವುದಕ್ಕೂ ಆಗದ ರೀತಿಯಲ್ಲಿ ಪೊಲೀಸರು ಲಾಕ್ ಮಾಡಿದ್ದಾರೆ.

ಬುದ್ದಿವಂತ ಸಿನಿಮಾದಂತೆ ಮಹಿಳೆಯರಿಗೆ ವಂಚನೆ; ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ
ಮಂಗಳೂರು ಎಸ್ಪಿ
Follow us on

ದಕ್ಷಿಣ ಕನ್ನಡ, ಸೆ.18: ಹಲವಾರು ಮಹಿಳೆಯರಿಗೆ ವಂಚನೆ ಮಾಡಿ ಕೋರ್ಟ್​ನಲ್ಲಿ ನಾನವನಲ್ಲ..ನಾನವನಲ್ಲ ಎಂದು ಪ್ರೇಕ್ಷಕರನ್ನು ರಂಜಿಸಿದ್ದ ಉಪೇಂದ್ರ ಅವರ ಬುದ್ದಿವಂತ ಸಿನಿಮಾದಂತೆ ಇಲ್ಲೊಬ್ಬ ರಿಯಲ್ ಲೈಫ್​ನಲ್ಲಿ ಇದೇ ರೀತಿ ಸಾಕಷ್ಟು ಮಹಿಳೆಯರಿಗೆ ವಂಚನೆ ಮಾಡಿ ಎಸ್ಕೇಫ್​ ಆಗುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಹೌದು, ಉಡುಪಿ ಜಿಲ್ಲೆಯ ಕಾರ್ಕಳ(Karkala)ದ ರೋಹಿತ್ ಮಥಾಯೀಸ್ ಎಂಬಾತ 2019 ರಲ್ಲಿ ಪಕ್ಕದ ಮನೆಯಲ್ಲಿ ವಾಸವಿದ್ದ ನಿವೃತ್ತ ಪಿಡಿಓ ಭರತಲಕ್ಷ್ಮಿ ಎಂಬವವರನ್ನು ಕೊಂದು ಅವರ ಮನೆಯಲ್ಲಿ ಚಿನ್ನಾಭರಣವನ್ನು ಲೂಟಿ ಮಾಡಿದ್ದ. ನಂತರ ಶವವನ್ನು ಬಾವಿಗೆ ಬಿಸಾಕಿದ್ದ. ಬಂಧನವಾಗಿ ಜಾಮೀನಿನ ಮೇಲೆ ಹೊರಬಂದು ಮುಂಬೈ ಸೇರಿಕೊಂಡಿದ್ದ.

ಆ ಪ್ರಕರಣದ ವಿಚಾರಣೆಗೆ ಕೋರ್ಟ್​ಗೂ ಕೂಡ ಹಾಜರಾಗುತ್ತಿರಲಿಲ್ಲ. ಇನ್ನು ಈತನ ಚಾಳಿ ಮುಂದುವರೆದಿತ್ತು. ಮುಂಬೈನಲ್ಲಿ ಕುಳಿತುಕೊಂಡು ಫೇಸ್ ಬುಕ್​ನಲ್ಲಿ ಕರಾವಳಿ ಭಾಗದ ಅದರಲ್ಲೂ ಕ್ರಿಶ್ಚಿಯನ್ ಧರ್ಮದ ಮಹಿಳೆಯರನ್ನು ಸಂಪರ್ಕ ಮಾಡುತ್ತಿದ್ದ. ಅಂದ ಚೆಂದದ ಶ್ರೀಮಂತ ಮಹಿಳೆಯರನ್ನು ತನ್ನ ಬಲೆಗೆ ಕೆಡವಿಕೊಳ್ಳುತ್ತಿದ್ದ. ವಿಧವೆಯರು, ಡಿವೋರ್ಸ್​ಗಳಂತಹ ಒಂಟಿ ಮಹಿಳೆಯರನ್ನು ಗುರುತಿಸಿ ಅವರ ಸಂಪರ್ಕ ಸಾಧಿಸುತ್ತಿದ್ದ. ಬಳಿಕ ಪ್ರೀತಿ ನಾಟಕವಾಡಿ ಅವರ ಮನೆ ಸೇರಿಕೊಂಡು ದೈಹಿಕ ಸಂಪರ್ಕ ಬೆಳಸುತ್ತಿದ್ದ. ಇದೆಲ್ಲಾ ಆದ ನಂತರ ಒಂದು ದಿನ ಅವರ ಮನೆಯಲ್ಲಿದ್ದ ಚಿನ್ನಾಭರಣಗಳನ್ನು ಲೂಟಿ ಮಾಡಿ ಪರಾರಿಯಾಗುತ್ತಿದ್ದ.

ಇದನ್ನೂ ಓದಿ:ಕಳ್ಳತನದ ಆರೋಪ ಹೊರಿಸಿ ಭಿಕ್ಷುಕನನ್ನು ಥಳಿಸಿ ಹತ್ಯೆ

ಮಾನದ ಜೊತೆ ಚಿನ್ನವನ್ನು ಕಳೆದುಕೊಂಡ ಮಹಿಳೆಯರು ಪೊಲೀಸ್​ಗೆ ದೂರು ಕೊಡುತ್ತಿರಲಿಲ್ಲ. ಮಹಿಳೆಯರ ದೌರ್ಬಲ್ಯವೇ ಇವನ ಬಂಡವಾಳವಾಗಿತ್ತು. ಮಂಗಳೂರು ಮತ್ತು ಉಡುಪಿಯ ನೂರಾರು ಮಹಿಳೆಯರಿಗೆ ಈತ ಇದೇ ರೀತಿ ವಂಚಿಸಿದ್ದ. ಮಂಗಳೂರಿನ ಕುಲಶೇಖರ ನಿವಾಸಿ ಮಹಿಳೆಗೆ 2021 ರಲ್ಲಿ ಇದೇ ರೀತಿ ವಂಚನೆ ಮಾಡಿದ್ದ. ಈ ಬಗ್ಗೆ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರಿಗೆ ಇತನನ್ನು ಹಿಡಿಯಲು ಸಾದ್ಯವಾಗಿರಲಿಲ್ಲ. ಅದರಂತೆ ಮಂಗಳೂರಿನ ಅನಿತಾ ಎಂಬ ಶ್ರೀಮಂತ ಮಹಿಳೆ ಇಸ್ರೇಲ್​ನಲ್ಲಿ ವಾಸವಾಗಿದ್ದರು. ಈಕೆಯನ್ನು ಬಲೆಗೆ ಬೀಳಿಸಿಕೊಂಡಿದ್ದ ರೋಹಿತ್ ಮಥಾಯೀಸ್, ಪ್ರೀತಿಯ ನಾಟಕವಾಡಿದ್ದ. ಬುದ್ಧಿವಂತನ ನಾಟಕಕ್ಕೆ ಫಿದಾ ಆಗಿದ್ದ ಅನಿತಾ ಇಸ್ರೇಲ್ ನಿಂದ ಮಂಗಳೂರಿಗೆ ಹಾರಿದ್ದರು.

ಕೊನೆಗೂ ಸಿಕ್ಕಿಬಿದ್ದ ಖತರ್ನಾಕ್​ ಕಳ್ಳ​

ಬಳಿಕ ಈತನನ್ನು ಮದುವೆಯಾಗುವ ನಿರ್ಧಾರ ಮಾಡಿ,ತನ್ನ ಸ್ನೇಹಿತೆಯೊಬ್ಬಳಿಗೆ ತಿಳಿಸಿದ್ದರು. ಆದ್ರೆ, ಆ ಸ್ನೇಹಿತೆ ಕೂಡ ಈತನಿಂದ ಮೋಸ ಹೋದವಳಾಗಿದ್ದಳು. ಈತನಿಗೆ ಬುದ್ಧಿ ಕಲಿಸಬೇಕು ಎಂದು ಕಂಕನಾಡಿ ಪೊಲೀಸರಿಗೆ ವಿಚಾರ ತಿಳಿಸಿದರು. ಇವರಿಬ್ಬರು ಮಹಿಳೆಯರ ಜೊತೆ ಸೇರಿದ ಕಂಕನಾಡಿ ಪೊಲೀಸರು, ಮಥಾಯೀಸ್​ಗೆ ನಮ್ಮ ಬಳಿ ಚಿನ್ನ ಇದೆ. ಮನೆಯಲ್ಲಿ ಸೇಫ್ ಆಗಿರಲ್ಲ. ಬ್ಯಾಂಕ್​ಗೆ ಇಡಬೇಕು ಎಂದು ಮಥಾಯೀಸ್​ಗೆ ಕೇಳಿದ್ದಾರೆ. ಮಥಾಯೀಸ್ ನಾನಿದ್ದೇನಲ್ಲ. ನನ್ನ ಬಳಿ ಕೊಡು ಸೇಫ್ ಆಗಿ ಇಟ್ಟುಕೊಂಡಿರುತ್ತೇನೆ ಎಂದು ಹೇಳಿದ್ದಾನೆ. ಅದಕ್ಕೆ ಅನಿತಾ ಅವರು ಒಕೆ ಅಂದ ಕೂಡಲೇ ಮುಂಬೈನಿಂದ ಮಂಗಳೂರಿಗೆ ಬಂದಿದಿಳಿದ್ದಾನೆ. ಬಂದ ಕೂಡಲೇ ಪೊಲೀಸರು ಬಂಧಿಸಿದ್ದಾರೆ.

ಇನ್ನು ಈತ ಭಾವನೆಗಳೇ ಇಲ್ಲದ ಮೃಗನಾಗಿದ್ದ. ಕಳೆದ 6 ತಿಂಗಳ ಹಿಂದೆ ತನ್ನ ತಾಯಿ ಮೃತಪಟ್ಟರು ಕೂಡ ಅವರ ಅಂತಿಮ ದರ್ಶನಕ್ಕೆ ಆಗಮಿಸಿರಲಿಲ್ಲ. ಸದ್ಯ ಏಳು ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಈತನಿಂದ ಯಾರಾದರೂ ಮೋಸ ಹೋಗಿದ್ದರೆ ಪೊಲೀಸರಿಗೆ ದೂರು ನೀಡಿ. ಇಲ್ಲವಾದರೇ ಈತನಿಂದ ಎಚ್ಚರವಾಗಿರಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ