ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಬಿಡದ ವಂಚಕರು; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ

| Updated By: ಕಿರಣ್ ಹನುಮಂತ್​ ಮಾದಾರ್

Updated on: Jun 15, 2024 | 5:30 PM

ಕರಾವಳಿಯ ಕಾರಣಿಕ‌ ದೈವ ಕೊರಗಜ್ಜನ ಹೆಸರಿನಲ್ಲಿ ಭಕ್ತರಿಗೆ ವಂಚಿಸಲಾಗುತ್ತಿದೆ. ಪ್ರಸಿದ್ಧ ದೈವಸ್ಥಾನದ ಹೆಸರಿನಲ್ಲಿ ನಕಲಿ‌ ಖಾತೆ ತೆರೆದು ವಂಚಕರು ದೇಣಿಗೆ ಸಂಗ್ರಹಿಸುತ್ತಿದ್ದಾರೆ. ಕೊರಗಜ್ಜ ದೈವದ ಮೇಲೆ ಭಕ್ತರಿಗೆ ಇರುವ ಭಕ್ತಿಯನ್ನೇ ಗುರಿಯಾಗಿರಿಸಿ ನಡೆಯುತ್ತಿರುವ ಈ ವಂಚನೆ ವಿರುದ್ಧ ದೈವಸ್ಥಾನದ ಆಡಳಿತ ಮಂಡಳಿ ಸೈಬರ್ ಕ್ರೈಮ್ ಪೊಲೀಸರ ಮೊರೆ ಹೋಗಿದ್ದಾರೆ.

ಕರಾವಳಿ ಜನರ ಆರಾಧ್ಯ ದೈವ ಕೊರಗಜ್ಜನನ್ನು ಬಿಡದ ವಂಚಕರು; ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹ
ಕೊರಗಜ್ಜನ ಹೆಸರಿನಲ್ಲಿ ನಕಲಿ‌ ಖಾತೆ ಸೃಷ್ಟಿಸಿ ದೇಣಿಗೆ ಸಂಗ್ರಹಿಸಿದ ವಂಚಕರು
Follow us on

ದಕ್ಷಿಣ ಕನ್ನಡ, ಜೂ.15: ತುಳುನಾಡಿನಾದ್ಯಂತ ಹೆಚ್ಚು ಆರಾಧನೆಗೆ ಒಳಪಡುವ ದೈವವೆಂದರೆ ಅದು ಕೊರಗಜ್ಜ(Koragajja). ಕಳೆದು ಹೋದ ಯಾವುದನ್ನಾದರೂ ಮರಳಿ ಪಡೆಯಲು, ಮಾಡಬೇಕಾದ ಯಾವುದೇ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳಲು ಅಥವಾ ಯಾವುದೇ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಮೊದಲ ಮತ್ತು ಅಗ್ರಗಣ್ಯವಾಗಿ ಜನರು ನೆನಪಿಸಿಕೊಳ್ಳುವ ದೈವ ಈ ಕೊರಗಜ್ಜ. ಆದ್ರೆ, ಇದೀಗ ಕೆಲ ವಂಚಕರು ಇದೇ ಕೊರಗಜ್ಜನ ಹೆಸರಿನಲ್ಲಿ ಭಕ್ತರನ್ನು ವಂಚನೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ‘ಡಿವೊಟೀಸ್ ಆಫ್ ಕುತ್ತಾರು ಕೊರಗಜ್ಜ’ ಎಂಬ ಖಾತೆ ತೆರದು ಅದರಲ್ಲಿ ಅನ್ನದಾನ ಹೆಸರಿನಲ್ಲಿ ದೇಣಿಗೆ ಸಂಗ್ರಹಿಸುತ್ತಿದ್ದಾರೆ.

ತುಳುನಾಡಿನ ಕೊರಗಜ್ಜನ ಸನ್ನಿಧಾನಗಳಲ್ಲಿ‌ ಅತೀ ಹೆಚ್ಚು ಕಾರಣಿಕ ಹೊಂದಿರುವ, ಅತೀ ಹೆಚ್ಚು ಭಕ್ತರು ಬರುವ ಸ್ಥಳ ಇದೇ ಮಂಗಳೂರು ತಾಲೂಕಿನ ಆದಿಸ್ಥಳ ಕುತ್ತಾರು ಕೊರಗಜ್ಜ ಸನ್ನಿಧಾನ. ಇಲ್ಲಿನ ಫೋಟೋ ಮತ್ತು ಹೆಸರನ್ನು ಬಳಸಿಕೊಂಡು ದೈವಸ್ಥಾನದ ವೆಬ್ ಸೈಟ್ ಎಂದು ಬಿಂಬಿಸುವಂತೆ ಈ ನಕಲಿ‌ ಖಾತೆ ತೆರೆಯಲಾಗಿದೆ. ಕೊರಗಜ್ಜನ ಫೋಟೋ ಹಾಕಿ ನಾವು‌ ಕಷ್ಟದಲ್ಲಿದ್ದೇವೆ ಕೊರಗಜ್ಜನ ಭಕ್ತರು ಸಹಾಯ ಮಾಡುವಂತೆ ಕೇಳಿಕೊಳ್ಳಲಾಗಿದೆ. ಇದನ್ನು ನಂಬಿ‌ ಅನೇಕ ಭಕ್ತರು ದೇಣಿಗೆ ನೀಡಿದ್ದಾರೆ. ಈ ವಿಚಾರ ದೈವಸ್ಥಾನದ ಆಡಳಿತ ಮಂಡಳಿಯ ಗಮನಕ್ಕೆ ಬರುತ್ತಿದ್ದಂತೆ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಕುತ್ತಾರು ಕೊರಗಜ್ಜನ ಸನ್ನಿಧಾನದಲ್ಲಿ ದರ್ಶನ್​ಗೆ ಸನ್ಮಾನ; ಅಭಿಮಾನಿಗಳಿಗೆ ಸಂಭ್ರಮ

ಇದರ ಜೊತೆ ದೈವಸ್ಥಾನದ ಆಡಳಿತ ಮಂಡಳಿಯು ಯಾವುದೇ ಉದ್ದೇಶಕ್ಕಾಗಿ ಆನ್‌ಲೈನ್ ಮುಖಾಂತರ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ರೀತಿ ಆಡಳಿತ ಮಂಡಳಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯಾವುದೇ ರೀತಿಯ ಪ್ರಕಟಣೆ ಬಂದಲ್ಲಿ ಅದಕ್ಕೆ ಭಕ್ತರು ಪ್ರತಿಕ್ರಿಯಿಸಬಾರದು ಎಂದು ಕ್ಷೇತ್ರದ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ. ಕೊರಗಜ್ಜ ದೈವಕ್ಕೆ ಚಕ್ಕುಲಿ, ಎಲೆ-ಅಡಿಕೆ, ಮದ್ಯವೆ ನೈವೇದ್ಯ. ಇದನ್ನು ಹೊರತುಪಡಿಸಿ ಯಾವುದೇ ವೈಭವದ, ಆಡಂಬರದ ಸೇವೆಯನ್ನು ಕೊರಗಜ್ಜ ಬಯಸುವುದಿಲ್ಲ. ಕೊರಗಜ್ಜನ ಭಕ್ತರು ಕೇವಲ ಕರಾವಳಿ ಮಾತ್ರವಲ್ಲದೇ ಹೊರ ಜಿಲ್ಲೆ, ಹೊರ ರಾಜ್ಯದಲ್ಲೂ ಇದ್ದು ಇದನ್ನೆ ಬಂಡವಾಳ ಮಾಡಿಕೊಂಡಿರುವ ದುರುಳರು ವಂಚನೆಗೆ ಇಳಿದಿದ್ದು, ಇವರಿಗೆ ಸ್ವಾಮಿ ಕೊರಗಜ್ಜನೇ ಸದ್ಬುದ್ದಿ ನೀಡಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ