
ಮಂಗಳೂರು, ಮೇ 19: ಪಂಜಾಬ್ನಲ್ಲಿ ಧರ್ಮಸ್ಥಳದ (Dharmasthala) ಆಕಾಂಕ್ಷ ನಿಗೂಢ ಸಾವು ಕೇಸ್ಗೆ ಸಂಬಂಧಿಸಿದಂತೆ ಪ್ರೇಮ ವೈಫಲ್ಯದಿಂದ ಯುವತಿ ಆತ್ಮಹತ್ಯೆ ಮಾಡಿಕೊಂಡಿರುವುದು ಈಗಾಗಲೇ ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆದರೆ ಆಕಾಂಕ್ಷ ಸಾವಿನಲ್ಲಿ ಕಾಲೇಜಿನ ಮೇಲೆ ಸಾಕಷ್ಟು ಅನುಮಾನಗಳು ಮೂಡಿವೆ. ಈ ಹಿನ್ನೆಲೆ ಪಂಜಾಬ್ ಸಿಎಂ ಭಗವಂತ್ ಮಾನ್ಗೆ (Bhagwant Mann) ಮೃತಾ ಆಕಾಂಕ್ಷ ಪೋಷಕರು ಪತ್ರ ಬರೆದಿದ್ದು, ಸರ್ಕಾರ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ಎಲ್ಪಿಸಿ ಕ್ಯಾಂಪಸ್ನಲ್ಲಿ ಇದೇ ರೀತಿ ಹಲವು ಅಸಹಜ ಸಾವುಗಳಾಗಿವೆ. ಇದರಲ್ಲಿ ಕಾಲೇಜಿನ ಕೈವಾಡ ಹೆಚ್ಚಾಗಿ ಕಂಡು ಬರುತ್ತಿದೆ. ಸರಿಯಾದ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರುತ್ತದೆ. ಸರಿಯಾಗಿ ತನಿಖೆ ನಡೆಸುವಂತೆ ಪಂಜಾಬ್ ಸಿಎಂಗೆ ಪತ್ರ ಬರೆದಿದ್ದಾರೆ.
ಇನ್ನು ಪ್ರಕರಣ ತಿರುಚಲು ಯತ್ನಿಸುತ್ತಿದ್ದಾರೆ ಎಂದು ಆಕಾಂಕ್ಷ ಪೋಷಕರು ಕಾಲೇಜು ಮತ್ತು ಪೊಲೀಸ್ ಇಲಾಖೆ ವಿರುದ್ಧ ಆರೋಪ ಮಾಡಿದ್ದಾರೆ. ಇನ್ನು ಕೂಡ ಎಫ್ಐಆರ್ ದಾಖಲಾಗಿಲ್ಲ. ಎಫ್ಐಆರ್ ದಾಖಲಾಗದಿರುವುದರಿಂದ ಮರಣೋತ್ತರ ಪರೀಕ್ಷೆ ಕೂಡ ಆಗಿಲ್ಲ.
ಇದನ್ನೂ ಓದಿ: ಪಂಜಾಬ್ನಲ್ಲಿ ಧರ್ಮಸ್ಥಳದ ಯುವತಿ ಸಾವಿನ ಕಾರಣ ಕೊನೆಗೂ ಬಹಿರಂಗ
ಕಾಲೇಜಿನವರು ನೀಡಿದ ಮಾಹಿತಿ ಆಧಾರದಲ್ಲಿ ಎಫ್ಐಆರ್ ಮಾಡಲು ಬಿಡಲ್ಲವೆಂದು ಪೋಷಕರು ಪಟ್ಟು ಹಿಡಿದಿದ್ದು, ಇತ್ತ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರೊಫೆಸರ್ ವಿರುದ್ಧ ಎಫ್ಐಆರ್ ಹಾಕಲು ಪೊಲೀಸರು ಹಿಂದೇಟು ಆರೋಪ ಕೇಳಿಬಂದಿದೆ. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಆಕಾಂಕ್ಷ ಪೋಷಕರು ದೂರು ನೀಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಆಕಾಂಕ್ಷ ಪೋಷಕರನ್ನು ಜಲಂಧರ್ನ ಡಿಐಜಿ ನವೀನ್ ಸಿಂಗ್ಲಾ ಮತ್ತು ಎಸ್ಪಿ ರೂರೇಂಧರ್ ಭಾಟ್ಟಿ ಕೌರ್ ಭೇಟಿ ಮಾಡಿದ್ದಾರೆ. ಈ ವೇಳೆ ಘಟನೆಯನ್ನು ವಿವರಿಸಿ ಪೋಷಕರ ಅಹವಾಲು ಸ್ವೀಕರಿಸಿದ್ದಾರೆ. ಕಾಲೇಜಿನ ವಿರುದ್ಧ ಪ್ರಕರಣ ದಾಖಲಿಸುವಂತೆ ಪೋಷಕರು ಆಗ್ರಹಿಸಿದ್ದಾರೆ. ಆದರೆ ಆ ರೀತಿ ಮಾಡಲು ಆಗಲ್ಲ ಅಂತಾ ಪೊಲೀಸರು ಹೇಳಿದ್ದಾರೆ. ಹಾಗಾಗಿ ಆಕಾಂಕ್ಷ ಸಾವು ಪ್ರಕರಣ ಇನ್ನು ಕೂಡ ಕಗ್ಗಂಟಾಗಿದೆ.
ಇದನ್ನೂ ಓದಿ: ಪಂಜಾಬ್ನಲ್ಲಿ ಧರ್ಮಸ್ಥಳ ಯುವತಿ ನಿಗೂಢ ಸಾವು: ಸರ್ಟಿಫಿಕೇಟ್ ತರಲು ಹೋಗಿ ದುರಂತ ಅಂತ್ಯ
22 ವರ್ಷದ ಆಕಾಂಕ್ಷ ಪಂಜಾಬ್ನ ಪಗ್ವಾರದಲ್ಲಿರುವ ಲವ್ಲಿ ಪ್ರೊಫೆಷನಲ್ ಕಾಲೇಜ್ನಲ್ಲಿ ಏರೋನಾಟಿಕ್ ಇಂಜಿನಿಯರಿಂಗ್ ಮುಗಿಸಿದ್ದಳು. 6 ತಿಂಗಳಿಂದ ದೆಹಲಿಯ ಸ್ಪೈಸ್ ಜೆಟ್ ಏರೋಸ್ಪೇಸ್ನಲ್ಲಿ ಕೆಲಸ ಮಾಡುತ್ತಿದ್ದಳು. ಹೆಚ್ಚುವರಿ ಕೋರ್ಸ್ಗಾಗಿ ಜರ್ಮನಿಗೆ ತೆರಳೋದಕ್ಕಾಗಿ ಸಜ್ಜಾಗಿದ್ದಳು. ಅಷ್ಟರಲ್ಲಿ ದುರಂತ ಸಂಭವಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.