
ಮಂಗಳೂರು, ಮೇ 25: ಕರಾವಳಿ (Coastal Karnataka) ಭಾಗದಲ್ಲಿ ಮಳೆಗಾಲ ಆರಂಭವಾಯಿತೆಂದರೆ ಸಾಕು, ಇಲ್ಲಿನ ಸಾರ್ವಜನಿಕರಲ್ಲಿ ಆತಂಕದ ನೆರಳು ಆವರಿಸುತ್ತದೆ. ಕಳೆದ ಕೆಲವು ವರ್ಷಗಳಲ್ಲಿ ಮಳೆಗಾಲ ಸೃಷ್ಟಿಸಿದ ಭೀಕರ ಅವಾಂತರಗಳು ಮತ್ತು ಪ್ರಾಣಹಾನಿಯ ಕಹಿ ನೆನಪುಗಳು ಜನರನ್ನು ಇಂದಿಗೂ ಬೆಚ್ಚಿಬೀಳಿಸುತ್ತವೆ. ಆದರೆ, ಈ ಬಾರಿಯ ಮುಂಗಾರು (Monsoon) ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದ್ದರೂ, ಮಂಗಳೂರು ಮಹಾನಗರ ಪಾಲಿಕೆ (MCC) ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ಹಾಗೂ ಪಾಲಿಕೆ ಮಳೆಗಾಲದ ಪೂರ್ವಸಿದ್ಧತೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಮುಂಜಾಗ್ರತಾ ಸಿದ್ಧತೆಯ ವೈಫಲ್ಯದ ವಿಷಯ ಇದೀಗ ಕರಾವಳಿ ರಾಜಕಾರಣದಲ್ಲಿ ಭಾರಿ ಕೆಸರೆರಚಾಟಕ್ಕೂ ಕಾರಣವಾಗಿದೆ.
ಪ್ರತಿ ವರ್ಷ ಭಾರಿ ಮಳೆಗೆ ಮಂಗಳೂರು ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಕೆರೆಯಂತಾಗುವುದು ಸಾಮಾನ್ಯವಾಗಿದೆ. ರಾಜಕಾಲುವೆಗಳಲ್ಲಿ ಹೂಳು ತುಂಬಿರುವುದು ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಈ ಬಾರಿಯೂ ಪಾಲಿಕೆಯು ಕೇವಲ ಹೆಸರಿಗಷ್ಟೇ ಹೂಳೆತ್ತುವ ಕಾಮಗಾರಿ ನಡೆಸಿದ್ದು, ಜೆಸಿಬಿಗಳು ಹೋಗದ ಕಡೆಗಳಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ ಎಂದು ಶಾಸಕ ವೇದವ್ಯಾಸ್ ಕಾಮತ್ ದೂರಿದ್ದಾರೆ.
ಇನ್ನೊಂದೆಡೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡ್ಡ ಕುಸಿತದ ಅಪಾಯವಿರುವ ಸ್ಥಳಗಳನ್ನು ಗುರುತಿಸಿರುವ ಜಿಲ್ಲಾಡಳಿತ, ಅಲ್ಲಿನ ನಿವಾಸಿಗಳ ಸ್ಥಳಾಂತರಕ್ಕೆ ಸೂಚನೆ ನೀಡಿದೆ.
ಇದನ್ನೂ ಓದಿ: ವೀಕೆಂಡ್, ಬೇಸಿಗೆ ರಜೆ ಎಫೆಕ್ಟ್: ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತಸಾಗರ
ಅಲ್ಲದೆ ಮಳೆಗಾಲ ಮುಗಿಯುವವರೆಗೆ ಯಾವುದೇ ರಸ್ತೆ ಅಥವಾ ಮಣ್ಣು ಅಗೆಯುವ ಕಾಮಗಾರಿ ನಡೆಸದಂತೆ ಕಠಿಣ ಆದೇಶ ಹೊರಡಿಸಲಾಗಿದೆ. ಆದರೆ, ಕೇವಲ ಕಾಗದದ ಮೇಲಿರುವ ಈ ಆದೇಶಗಳು ತಳಮಟ್ಟದಲ್ಲಿ ಸರಿಯಾಗಿ ಜಾರಿಯಾಗದಿದ್ದರೆ, ಈ ಬಾರಿಯೂ ಕರಾವಳಿಯಲ್ಲಿ ಮನುಷ್ಯನ ಎಡವಟ್ಟುಗಳಿಂದಾಗಿ ಕೃತಕ ಪ್ರವಾಹದ ಅವಾಂತರಗಳು ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ