ಕೋಮುಗಲಭೆಯಲ್ಲಿ ಪಾಲ್ಗೊಂಡವರ ಆಸ್ತಿ ಮುಟ್ಟುಗೋಲಿಗೆ ಕ್ರಮ, ಪ್ರವೀಣ್ ಕೊಲೆಗಾರನ ಶೀಘ್ರ ಬಂಧನ: ಎಡಿಜಿಪಿ ಅಲೋಕ್​ಕುಮಾರ್

ಕೋಮು ಗಲಭೆಯಲ್ಲಿ ತೊಡಗಿಸಿಕೊಂಡವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡುವುದು, ಆಸ್ತಿ ಮುಟ್ಟುಗೋಲು ಹಾಕುವುದು ಸೇರಿದಂತೆ ಹಲವು ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಕೋಮುಗಲಭೆಯಲ್ಲಿ ಪಾಲ್ಗೊಂಡವರ ಆಸ್ತಿ ಮುಟ್ಟುಗೋಲಿಗೆ ಕ್ರಮ, ಪ್ರವೀಣ್ ಕೊಲೆಗಾರನ ಶೀಘ್ರ ಬಂಧನ: ಎಡಿಜಿಪಿ ಅಲೋಕ್​ಕುಮಾರ್
ಅಲೋಕ್​ ಕುಮಾರ್, ಎಡಿಜಿಪಿ
Edited By:

Updated on: Aug 04, 2022 | 2:15 PM

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಗಲಭೆಯಲ್ಲಿ ತೊಡಗಿಸಿಕೊಳ್ಳುವವರ ಬಗ್ಗೆ ಪೊಲೀಸರು ನಿರ್ದಾಕ್ಷಿಣ್ಯವಾಗಿ ವರ್ತಿಸಲಿದ್ದಾರೆ. ಅಂಥವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡುವುದು, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಕೋಮು ಸೌಹಾರ್ದ ಕದಡುವವರ ಬಗ್ಗೆ ನಾವು ಹಾರ್ಷ್​ (ಕಠೋರ) ಆಗಿಯೇ ವರ್ತಿಸುತ್ತೇವೆ. ನಮ್ಮಿಂದ ಸಾಫ್ಟ್ ಆದ ವರ್ತನೆ ನಿರೀಕ್ಷಿಸಬೇಡಿ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಮುಖ್ಯ ಆರೋಪಿಯ ಜಾಡು ಸಿಕ್ಕಿದೆ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ (National Investigation Agency – NIA) ಒಪ್ಪಿಸಿದ್ದರೂ ನಮ್ಮ ಪ್ರಯತ್ನಗಳನ್ನು ನಾವು ನಿಲ್ಲಿಸುವುದಿಲ್ಲ ಎಂದು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಎಡಿಜಿಪಿ ಅಲೋಕ್​ ಕುಮಾರ್ ಎಚ್ಚರಿಸಿದರು.

ಇದನ್ನೂ ಓದಿ: ಮಂಗಳೂರಿಗೆ ಮತ್ತೊಂದು ಹೊಸ ನಿಯಮ, ಶುಕ್ರವಾರದಿಂದ ದ್ವಿಚಕ್ರ ವಾಹನದಲ್ಲಿ ಹಿಂಬದಿ ಸವಾರರಿಗೆ ಅವಕಾಶ ಇಲ್ಲ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಸರಣಿ ಕೊಲೆ ಪ್ರಕರಣಗಳ ತನಿಖೆಯ ಸ್ಥಿತಿಗತಿ ಕುರಿತು ಕಮಿಷನರೇಟ್ ಕಚೇರಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದ ಅವರು, ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ವಿವಿಧ ಹತ್ಯೆ ಪ್ರಕರಣಗಳ ತನಿಖೆಯ ಪ್ರಗತಿ ಪರಿಶೀಲಿಸಿ ಅಗತ್ಯ ಸೂಚನೆ ನೀಡಿದ್ದೇನೆ. ಕೆಲವೊಮ್ಮೆ ಆರೋಪಿಗಳ ಬಂಧನದ ನಂತರ ತನಿಖೆ ಸಮರ್ಪಕವಾಗಿ ಆಗದಿದ್ದರೆ ನ್ಯಾಯಾಲಯದಲ್ಲಿ ಖುಲಾಸೆಯಾಗುವ ಅಪಾಯ ಇರುತ್ತದೆ. ಹೀಗಾಗಿ ಸಮರ್ಪಕ ತನಿಖೆಗೆ ಸೂಚನೆ ನೀಡಿದ್ದೇನೆ. ಈಗಾಗಲೇ ಆರೋಪಿಗಳನ್ನ ನ್ಯಾಯಾಲಯಗಳಲ್ಲಿ ನಡೆಯುತ್ತಿರುವ ವಿಚಾರಣೆಯ ಸ್ಥಿತಿಗತಿ ಬಗ್ಗೆಯೂ ಮಾಹಿತಿ ಪಡೆದಿದ್ದೇನೆ. ಕೋಮುಗಲಭೆಯಲ್ಲಿ ತೊಡಗಿಸಿಕೊಂಡವರ ಮೇಲೆ ಗೂಂಡಾ ಕಾಯ್ದೆ ಜಾರಿ ಮಾಡಿದ್ದೇವೆಯೇ ಇಲ್ಲವೇ ಎಂಬ ಬಗ್ಗೆ ಪರಿಶೀಲಿಸಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಹಿಂದೆಯೂ ಕೋಮು ಸೌಹಾರ್ದ ಕದಡುವ ಹಲವು ಪ್ರಕರಣಗಳು ವರದಿಯಾಗಿದ್ದವು. ದೀಪಕ್ ರಾವ್, ಶರತ್ ಮಡಿವಾಳರ, ಪಿಂಕಿ ನವಾಜ್, ವಿಠ್ಠಲ ಕೊಲೆ ಪ್ರಕರಣಗಳ ತನಿಖೆ ಮತ್ತು ನ್ಯಾಯಾಲಯದಲ್ಲಿ ವಿಚಾರಣೆ ಯಾವ ಹಂತದಲ್ಲಿದೆ ಎಂದು ವಿಚಾರಿಸಿದ್ದೇನೆ. ಈ ಪ್ರಕರಣಗಳ ಆರೋಪಿಗಳು ಅಕಸ್ಮಾತ್ ಖುಲಾಸೆಯಾಗಿ ಹೊರಗೆ ಬಂದರೆ, ನಂತರದ ದಿನಗಳಲ್ಲಿ ತರ್ಲೆ ಮಾಡಲು ಬಿಡಬಾರದು. ಕೆಲವು ಜೈಲುಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದೇನೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುಗಲಭೆಯ ಸರಪಳಿ ಸೃಷ್ಟಿಯಾಗಿದೆ. ಇದನ್ನು ನಾವು ತುಂಡರಿಸಲೇ ಬೇಕಿದೆ. ಕೋಮುಗಲಭೆಯಂಥ ದುಷ್ಕೃತ್ಯದಲ್ಲಿ ತೊಡಗಿಸಿಕೊಳ್ಳುವವರ ಆಸ್ತಿ ಮುಟ್ಟುಗೋಲು ಕ್ರಮಕ್ಕೂ ಮುಂದಾಗುತ್ತೇವೆ ಎಂದು ಎಚ್ಚರಿಸಿದರು.

ADGP Alok Kumar: ಒಂದು ಕೊಲೆ ಮತ್ತೊಂದು ಕೊಲೆ ಸರಣಿ ಬ್ರೇಕ್ ಮಾಡ್ಬೇಕು | Tv9 Kannada

ಫಾಝಿಲ್ ಹತ್ಯೆ ಪ್ರಕರಣದ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿಯೂ ಅಷ್ಟೇ, ಅಮಾಯಕನನ್ನು ಬಂಧಿಸಿ ತೊಂದರೆ ಕೊಡುವುದಿಲ್ಲ. ಆದರೆ ಸಂಚುಕೋರರನ್ನು ಬಿಡುವುದಿಲ್ಲ. ಯಾರು ಹೊಡೆದಿದ್ದಾನೆ ಅಂತ ನಮಗೆ ಗೊತ್ತಾಗಿದೆ. ಅವನನ್ನು ಬಂಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಶೀಘ್ರದಲ್ಲಿ ಈ ಕೆಲಸವೂ ಆಗುತ್ತದೆ. ಹೆಚ್ಚಿನ ವಿವರ ನಾನು ಕೊಡುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಷೇಧಾಜ್ಞೆ ಇನ್ನೂ ಕೆಲ ದಿನ ಮುಂದುವರಿಯಲಿದೆ ಎಂದು ಹೇಳಿದರು.

ದಕ್ಷಿಣ ಕನ್ನಡದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವುದು ನಮ್ಮ ಗುರಿ. ಶಿರೂರಿನಿಂದ ಸಂಪಾಜೆವರೆಗಿನ ಚಟುವಟಿಕೆಗಳ ಮೇಲೆ ನಿಗಾ ಇರಿಸುತ್ತೇವೆ. ಕೇರಳ ಗಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು 12 ಮತ್ತು ಮಂಗಳೂರು ಪೊಲೀಸರು 6 ಚೆಕ್​ಪೋಸ್ಟ್​ಗಳನ್ನು ನಿರ್ವಹಿಸುತ್ತಿದ್ದಾರೆ. ಈ ಚೆಕ್​ಪೋಸ್ಟ್​ಗಳಿಗೆ ಕೆಎಸ್​ಆರ್​ಪಿ ತುಕಡಿಗಳ ಬೆಂಬಲ ಒದಗಿಸಲಾಗಿದೆ. ಸಿಸಿಟಿವಿ ಕ್ಯಾಮೆರಾ ಸೇರಿದಂತೆ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಕೇರಳ ಗಡಿಯಲ್ಲಿ ಗಮನ ಕೊಡುತ್ತಿದ್ದೇವೆ. ಕನಿಷ್ಠ 1 ವರ್ಷ ಈ ಚೆಕ್​ಪೋಸ್ಟ್ ಇರುತ್ತವೆ ಎಂದು ಹೇಳಿದರು.

ADGP Alok Kumar: ಪ್ರವೀಣ್ Murder ಮುಖ್ಯ ಆರೋಪಿ ಯಾರು ಅಂದ್ರೆ.. | Tv9 Kannada

ಇನ್ನು ಕೆಲ ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಪುರುಷ ಹಿಂಬದಿ ಸವಾರರಿಗೆ ಅವಕಾಶ ಇರುವುದಿಲ್ಲ. ಹಿಂಬದಿ ಸವಾರರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಈ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಇಂಥ ಆದೇಶ ಈಗಾಗಲೇ ಜಾರಿಯಾಗಿತ್ತು. ಅದನ್ನು ನೋಡಿದ್ದೇನೆ. ಅದೇ ರೀತಿ ಇಲ್ಲಿಯೂ ಜಾರಿಗೊಳಿಸುತ್ತಿದ್ದೇವೆ. ಇತರ ರಾಜ್ಯಗಳಲ್ಲಿ ಯಾವುದೇ ಪುರುಷರಿಗೆ ಹಿಂಬದಿ ಸವಾರಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಲಾಗಿತ್ತು. ಇಲ್ಲಿ ವಯಸ್ಕ ಪುರುಷರಿಗೆ ಮಾತ್ರ ನಿರ್ಬಂಧ ವಿಧಿಸಲಾಗುತ್ತದೆ. ಹಿರಿಯ ನಾಗರಿಕರು, ಮಕ್ಕಳಿಗೆ ಅವಕಾಶ ಇರುತ್ತದೆ ಎಂದು ಹೇಳಿದರು.

ADGP Alok Kumar: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದುಷ್ಕೃತ್ಯ ಮಾಡೋರಿಗೆ ಎಚ್ಚರಿಕೆ | Tv9 Kannada

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಯದ ವಾತಾವರಣ ಇದೆ ಅಂತ ಎಂದು ನಾವು ಒಪ್ಪುವುದಿಲ್ಲ. ಒಂದು ವಾರದಿಂದ ಪೊಲೀಸ್​ ನಿಯೋಜನೆ ಹೆಚ್ಚಿಸಲಾಗಿದೆ. ಪೊಲೀಸ್ ಇಲಾಖೆಯ ಕಣ್ಣು ದಕ್ಷಿಣ ಕನ್ನಡ ಜಿಲ್ಲೆಯ ಮೇಲೆ ತೀಕ್ಷ್ಣವಾಗಿದೆ. ಇಲ್ಲಿನ ಜನರಿಗೆ ಧೈರ್ಯ ತುಂಬಲು ನಾನು ಬಂದಿದ್ದೇನೆ. ಹಿರಿಯ ಅಧಿಕಾರಿಗಳು ಇಲ್ಲಿದ್ದಾರೆ. ಕೇರಳ ಪೊಲೀಸರ ಜೊತೆಗೆ ಕ್ರೈಮ್ ಮೀಟಿಂಗ್ ಮಾಡುತ್ತೇವೆ ಎಂದು ವಿವರಿಸಿದರು.

Published On - 1:59 pm, Thu, 4 August 22

Follow Us