AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರನ್​ವೇಯಿಂದ ಮನೆಗಳಿಗೆ ನುಗ್ಗುತ್ತಿದೆ ನೀರು! ಮಂಗಳೂರು ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿ ಸ್ಥಳೀಯರ ಪ್ರತಿಭಟನೆ

ಮಂಗಳೂರು ವಿಮಾನ ನಿಲ್ದಾಣ ಆಡಳಿತದ ವಿರುದ್ಧ ಸ್ಥಳೀಯ ಕೆಂಜಾರು ಹಾಗೂ ಕರಂಬಾರು ನಿವಾಸಿಗಳ ಆಕ್ರೋಶ ಕಟ್ಟೆ ಒಡೆದಿದೆ. ಇದಕ್ಕೆ ಕಾರಣ ಅವರ ಮನೆಗಳಿಗೆ ವಿಮಾನ ನಿಲ್ದಾಣದಿಂದ ನೀರು ನುಗ್ಗುವುದು! ಅದ್ಹೇಗೆ ವಿಮಾನ ನಿಲ್ದಾಣದ ನೀರು ಮನೆಗಳಿಗೆ ನುಗ್ಗುವುದು? ಸ್ಥಳೀಯರ ಆರೋಪವೇನು? ಎಲ್ಲ ವಿವರಗಳಿಗೆ ಮುಂದೆ ಓದಿ.

ರನ್​ವೇಯಿಂದ ಮನೆಗಳಿಗೆ ನುಗ್ಗುತ್ತಿದೆ ನೀರು! ಮಂಗಳೂರು ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿ ಸ್ಥಳೀಯರ ಪ್ರತಿಭಟನೆ
ಮಂಗಳೂರು ವಿಮಾನ ನಿಲ್ದಾಣ
ಪೃಥ್ವಿರಾಜ್​ ಬಿ.ಯು. ಮಂಗಳೂರು
| Updated By: Ganapathi Sharma|

Updated on: Jul 01, 2024 | 2:52 PM

Share

ಮಂಗಳೂರು, ಜುಲೈ 8: ಮಂಗಳೂರು ವಿಮಾನ ನಿಲ್ದಾಣದ ರನ್​​ವೇಯಿಂದ ಹರಿದುಹೋಗುವ ನೀರು ಕೆಂಜಾರು ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ನೆರೆ ಸೃಷ್ಟಿಸುತ್ತಿದ್ದು, ಕೆಲವು ಮನೆಗಳಿಗೂ ನೀರು ನುಗ್ಗಿದೆ. ಪರಿಣಾಮವಾಗಿ ಸಂಕಷ್ಟಕ್ಕೀಡಾಗಿರುವ ಸ್ಥಳೀಯರು ಏರ್​​ಪೋರ್ಟ್ ಆಡಳಿತದ ವಿರುದ್ಧ ಸೋಮವಾರ ಭಾರಿ ಪ್ರತಿಭಟನೆ ನಡೆಸಿದರು. ಮಂಗಳೂರು ವಿಮಾನ ನಿಲ್ದಾಣ ಮುಖ್ಯದ್ವಾರ ಬಂದ್ ಮಾಡಿದ ಸ್ಥಳೀಯರು, ಯಾವುದೇ ವಾಹನ ತೆರಳದಂತೆ ತಡೆಯೊಡ್ಡಿದರು.

ವಿಮಾನ ನಿಲ್ದಾಣದಿಂದ ಮಳೆ ನೀರು ಹರಿದು ಹೋಗಲು ಏರ್ಪೋರ್ಟ್ ಆಡಳಿತ ಸರಿಯಾದ ವ್ಯವಸ್ಥೆ ಕಲ್ಪಿಸಿಲ್ಲ. ಹಿಗಾಗಿ ಕೆಂಜಾರು ಹಾಗೂ ಏರ್ಪೋರ್ಟ್ ಸುತ್ತಮುತ್ತಲಿನ ಹಲವು ಮನೆಗಳಿಗೆ ನೆರೆ ಭೀತಿ ಸೃಷ್ಟಿಯಾಗಿದೆ. ಸೂಕ್ತ ವ್ಯವಸ್ಥೆ ಕಲ್ಪಿಸದೆ ಮಳೆ ನೀರನ್ನು ಅವೈಜ್ಞಾನಿಕವಾಗಿ ಹೊರ ಬಿಡಲಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಟೇಬಲ್ ಟಾಪ್ ಏರ್ಪೋರ್ಟ್ ಆಗಿರುವ ಕಾರಣ ಕೆಲ ಭಾಗದ ಜನ ವಸತಿ ಪ್ರದೇಶಗಳಿಗೆ ನೀರು ನುಗ್ಗುವ ಭೀತಿ ಉಂಟಾಗಿದೆ. ಈ ಮಧ್ಯೆ, ರಸ್ತೆ ತಡೆ ನಡೆಸಿದ ಕಾರಣ ಬಜ್ಪೆ ಠಾಣೆ‌‌ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಘಟನಾ ಸ್ಥಳದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ.

ಸದ್ಯ ಗ್ರಾಮಸ್ಥರನ್ನು ಮನವೊಲಿಸಿ ರಸ್ತೆ ತೆರವು ಮಾಡಲಾಗಿದೆ. ಪ್ರತಿಭಟನಾನಿರತರು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಲು‌ ಒಂದು ಗಂಟೆಯ ಗಡುವು ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ಉತ್ತರ ವಿಭಾಗದ ಎಸಿಪಿ ಮನೋಜ್ ನಾಯಕ್, ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ಮಂಗಳೂರು ಉತ್ತರ ಶಾಸಕ ಡಾ. ವೈ ಭರತ್ ಶೆಟ್ಟಿ ಭೇಟಿ ನೀಡಿದ್ದಾರೆ. ಏರ್ಪೋರ್ಟ್ ಆಡಳಿತ ಅಧಿಕಾರಿಗಳು, ಸ್ಥಳೀಯರ ಜೊತೆ ಶಾಸಕ ಭರತ್ ಶೆಟ್ಟಿ ಚರ್ಚೆ ನಡೆಸಿದ್ದಾರೆ.

ಈ ಮಧ್ಯೆ, ಮಂಗಳೂರು ತಹಶಿಲ್ದಾರ್ ಪ್ರಶಾಂತ್ ಪಾಟೀಲ್​ರನ್ನು ಸ್ಥಳೀಯರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಸಮಸ್ಯೆ ಕೇಳಲು ಬಂದರೂ ಐದು ನಿಮಿಷ ಕೂಡ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕರಂಬಾರು ಗ್ರಾಮದ ಮನೆಗೆ ಭೇಟಿ ನೀಡಿದ ವೇಳೆ ತಹಶಿಲ್ದಾರ್ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಎಸಿ ಹರ್ಷವರ್ಧನ್ ಎದುರಲ್ಲೇ ಮನೆಯವರು ತರಾಟೆಗೆ ತೆಗೆದುಕೊಂಡಿದ್ದಾರೆ. ಏರ್ಪೋರ್ಟ್ ಅಧಿಕಾರಿಗಳನ್ನೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ: ಉಪ್ಪಿನಂಗಡಿ: ಇನ್ನೇನು ನೇತ್ರಾವತಿ ನದಿಗೆ ಹಾರಿ ಪ್ರಾಣ ಬಿಡಲಿದ್ದ ಮಹಿಳೆ, ದೇವರಂತೆ ಬಂದು ಕಾಪಾಡಿದ ಸಾಕುನಾಯಿ!

ನೆರೆ ನೀರಿನಿಂದ ಮನೆಯಲ್ಲಿದ್ದ ದಿನಸಿ ವಸ್ತುಗಳೆಲ್ಲಾ ನೀರು ಪಾಲು

ಮಂಗಳೂರು ಏರ್ಪೋರ್ಟ್ ಆಡಳಿತದ ನಿರ್ಲಕ್ಷ್ಯ, ಅವೈಜ್ಞಾನಿಕ ಕಾಮಗಾರಿಯಿಂದ ನೆರೆ ಸಮಸ್ಯೆ ಉಂಟಾಗಿದ್ದ, ನೆರೆಯಿಂದಾಗಿ ಮನೆಯಲ್ಲಿದ್ದ ದಿನಸಿ ವಸ್ತುಗಳೆಲ್ಲಾ ನೀರುಪಾಲಾಗಿವೆ ಎಂದು ಕರಂಬಾರು ಗ್ರಾಮದ ಜನರು ತಿಳಿಸಿದರು. ಕ್ವಿಂಟಾಲ್ ಗಟ್ಟಲೇ ಅಕ್ಕಿ, 30 ಕೆಜಿ ಬೇಳೆ, ಮೆಣಸು ಸೇರಿದಂತೆ ಅನೇಕ ವಸ್ತುಗಳು ನೀರು ಪಾಲಾಗಿವೆ. ಪೃಥ್ವಿನ್ ಎಂಬವರಿಗೆ ಸುಮಾರು ಒಂದೂವರೆ ಲಕ್ಷ ರೂಪಾಯಿಗೂ ಹೆಚ್ಚು ನಷ್ಟ ಉಂಟಾಗಿದೆ. ಇವರು ಪಿ.ಜಿ ನಡೆಸುತ್ತಿದ್ದಾರೆ. ಇಷ್ಟೇ ಅಲ್ಲದೆ, ಕರಂಬಾರು ಪರಿಸರದ ಸುಮಾರು ಏಳು ಮನೆಗಳಿಗೆ ನೆರೆ ಭೀತಿ ಉಂಟಾಗಿದೆ. ಶಾಶ್ವತ ಪರಿಹಾರ ಕಲ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ