ಸಚಿವ ಪರಮೇಶ್ವರ್‌ಗೆ ಸ್ಟಾಲಿನ್‌ ಎಂದು ಹೆಸರಿಡಬಹುದಿತ್ತಲ್ಲವೇ; ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನೆ

| Updated By: ಗಣಪತಿ ಶರ್ಮ

Updated on: Sep 06, 2023 | 6:55 PM

ಸನಾತನ ಧರ್ಮದಿಂದ ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪಿಡುಗುಗಳನ್ನು ತೆಗೆದುಹಾಕಿದ್ದೇವೆ. ಮೂಢನಂಬಿಕೆ ತೊಡೆದು ಹಾಕುವ ಕೆಲಸ ಮಹಾಪುರುಷರು ಮಾಡಿದ್ದಾರೆ. ಈಗಿರುವ ಕೆಲವು ಆಚಾರ ಬದಲಾಯಿಸಲಾಗುತ್ತದೆ, ಇದನ್ನು ಮಾಡುತ್ತೇವೆ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಸಚಿವ ಪರಮೇಶ್ವರ್‌ಗೆ ಸ್ಟಾಲಿನ್‌ ಎಂದು ಹೆಸರಿಡಬಹುದಿತ್ತಲ್ಲವೇ; ಕಲ್ಲಡ್ಕ ಪ್ರಭಾಕರ ಭಟ್ ಪ್ರಶ್ನೆ
ಕಲ್ಲಡ್ಕ ಪ್ರಭಾಕರ ಭಟ್ & ಪರಮೇಶ್ವರ್
Follow us on

ಮಂಗಳೂರು, ಸೆಪ್ಟೆಂಬರ್ 6: ಹಿಂದೂ ಧರ್ಮದ (Hindu Religion) ಬಗ್ಗೆ ಗೃಹ ಸಚಿವ ಪರಮೇಶ್ವರ್ (G Parameshwara) ನೀಡಿರುವ ಹೇಳಿಕೆಗೆ ಆರ್​ಎಸ್​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಪ್ರತಿಕ್ರಿಯಿಸಿದ್ದು, ವಾಗ್ದಾಳಿ ನಡೆಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇದೊಂದು ಹುಚ್ಚು ಶುರುವಾಗಿದೆ. ಸನಾತನ ಧರ್ಮದ ಬಗ್ಗೆ ದೂಷಿಸಿದ್ರೆ ಅಲ್ಪಸಂಖ್ಯಾತರ ಮತ ಸಿಗುತ್ತೆ, ಅಧಿಕಾರ ಸಿಗುತ್ತೆ ಅನ್ನೋ ಕಾರಣಕ್ಕೆ ಈ ರೀತಿ ಹೇಳಿಕೆ ನೀಡುತ್ತಾರೆ. ಹಿಂದೂ ಧರ್ಮದ ಹುಟ್ಟು ಗೊತ್ತಿಲ್ಲವೆಂದು ಪರಮೇಶ್ವರ್ ಹೇಳಿದ್ದಾರೆ. ಹಾಗಾದ್ರೆ ಪರಮೇಶ್ವರ್ ಹೆಸರು ಇಸ್ಮಾಯಿಲ್‌ ಎಂದು ಏಕೆ ಇಟ್ಟಿಲ್ಲ? ಅವರಿಗೆ ಸ್ಟಾಲಿನ್‌ ಎಂದು ಹೆಸರು ಇಡಬಹುದಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವ ಪರಮೇಶ್ವರ್‌ ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ. ದೇವಸ್ಥಾನದಿಂದ ಹೊರಗೆ ಬಂದ ಬಳಿಕ ಈ ರೀತಿ ಹೇಳಿಕೆ ನೀಡ್ತಾರೆ. ಸನಾತನ ಧರ್ಮದ ಹುಟ್ಟು ಯಾರಿಗೂ ತಿಳಿದಿಲ್ಲ. ಸನಾತನ ಧರ್ಮಕ್ಕೆ ಹುಟ್ಟೂ ಇಲ್ಲ, ನಾಶವೂ ಇಲ್ಲ. ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮಗಳು ಇತ್ತೀಚೆಗೆ ಹುಟ್ಟಿಕೊಂಡಿವೆ. ಸನಾತನ ಧರ್ಮ ನಿತ್ಯ ನೂತನವಾದ ಧರ್ಮ. ಎಲ್ಲಾ ಕಾಲಕ್ಕೂ, ಎಲ್ಲವನ್ನೂ ಒಪ್ಪಿಕೊಳ್ಳುವ ಧರ್ಮ. ಕಾಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಅವಕಾಶವಿರುವ ಧರ್ಮ ಎಂದು ಅವರು ಹೇಳಿದ್ದಾರೆ.

ಸನಾತನ ಧರ್ಮದಿಂದ ಬಾಲ್ಯವಿವಾಹ, ವರದಕ್ಷಿಣೆ ಮೊದಲಾದ ಪಿಡುಗುಗಳನ್ನು ತೆಗೆದುಹಾಕಿದ್ದೇವೆ. ಮೂಢನಂಬಿಕೆ ತೊಡೆದು ಹಾಕುವ ಕೆಲಸ ಮಹಾಪುರುಷರು ಮಾಡಿದ್ದಾರೆ. ಈಗಿರುವ ಕೆಲವು ಆಚಾರ ಬದಲಾಯಿಸಲಾಗುತ್ತದೆ, ಇದನ್ನು ಮಾಡುತ್ತೇವೆ. ಆದರೆ ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮದಲ್ಲಿ ಇದಕ್ಕೆ ಅವಕಾಶವಿಲ್ಲ. ಇದೇ ಕಾರಣಕ್ಕೆ ಆ ಧರ್ಮದ ಜನರೇ ಸ್ವಂತ ಧರ್ಮವನ್ನು ಒಪ್ಪುತ್ತಿಲ್ಲ.ಅಮೆರಿಕ ಮತ್ತು ಬ್ರಿಟನ್‌ ದೇಶಗಳಲ್ಲಿ ಚರ್ಚ್‌ಗಳಿಗೆ ಜನರೇ ಬರುತ್ತಿಲ್ಲ. ಹೀಗಾಗಿ ಅಲ್ಲಿನ ಚರ್ಚ್‌ಗಳನ್ನು ಹರಾಜಿಗೆ ಇಡುತ್ತಿದ್ದಾರೆ ಎಂದು ಪ್ರಭಾಕರ ಭಟ್ ಹೇಳಿದರು.

ಇದನ್ನೂ ಓದಿ: ವಿವಾದಾತ್ಮಕ ಹೇಳಿಕೆ ನೀಡಿಲ್ಲ, ಧರ್ಮಗಳ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ ಅಷ್ಟೆ; ಜಿ ಪರಮೇಶ್ವರ ಸ್ಪಷ್ಟನೆ

ಚಂದ್ರನ ಬಗ್ಗೆ ಸನಾತನ ಧರ್ಮದಲ್ಲಿ ಉಲ್ಲೇಖವಿದೆ. ಕೃಷ್ಣ ಪರ್ವ, ಶ್ವೇತ ಪರ್ವದ ಬಗ್ಗೆ ಸನಾತನ ಧರ್ಮದಲ್ಲಿ ಉಲ್ಲೇಖವಿದೆ. ಆ ಸತ್ಯ ಚಂದ್ರಯಾನ-3 ಯಶಸ್ವಿಯಾದಾಗ ಬೆಳಕಿಗೆ ಬಂದಿದೆ. ಸನಾತನ ಧರ್ಮ ಮತ್ತು ವಿಜ್ಞಾನ ಪರಸ್ಪರ ಒಪ್ಪಿಕೊಂಡಿವೆ. ಹಿಂದೂ ಧರ್ಮ ಮತ್ತು ವಿಜ್ಞಾನ ಒಟ್ಟೊಟ್ಟಿಗೆ ಹೋಗುತ್ತವೆ. ಸನಾತನ ಧರ್ಮದ ಬಗ್ಗೆ ಉದಯನಿಧಿ‌ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಉದಯನಿಧಿ‌ ಸ್ಟಾಲಿನ್‌ ತಂದೆ ಹಿಂದೂ ಧರ್ಮದ ಸತ್ವ ಒಪ್ಪಿಕೊಂಡಿದ್ದರು. ಅವರ ಕಾರನ್ನು ಅವರ ಮನೆ ಮುಂದೆ ದೇಗುಲಕ್ಕೆ ಮುಖ ಮಾಡಿ ನಿಲ್ಲಿಸುತ್ತಿದ್ದರು. ಈಗ ಉದಯನಿಧಿ‌ ಸ್ಟಾಲಿನ್‌ ಡೋಂಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸನಾತನ ಧರ್ಮದ ಬಗ್ಗೆ ಮಾತಾಡುವವರು ಎಚ್ಚರಿಕೆಯಿಂದ ಮಾತಾಡಲಿ. ಇದರಿಂದ ಅವರ ಮುಂದಿನ ಪೀಳಿಗೆ ಚೆನ್ನಾಗಿ ಇರುತ್ತದೆ ಎಂದು ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ.

ಈ ಮಧ್ಯೆ, ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಪರಮೇಶ್ವರ, ವಿವಾದಾತ್ಮಕ ಹೇಳಿಕೆ ನೀಡಿಲ್ಲ. ನಾನು ಧರ್ಮಗಳ ನಡುವಿನ ವ್ಯತ್ಯಾಸಗಳ ಬಗ್ಗೆ ಪ್ರಸ್ತಾಪಿಸಿದ್ದೆ. ಜೈನ ಧರ್ಮ, ಬೌದ್ಧ ಧರ್ಮ, ಹಿಂದೂ ಧರ್ಮದ ಬಗ್ಗೆ ಹೇಳಿದ್ದೆ. ಯಾವುದೇ ವಿವಾದಾತ್ಮಕ ಹೇಳಿಕೆ ನೀಡಿರಲಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ