ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ: ಇನ್ಸ್ಟಾಗ್ರಾಮ್ ಪೇಜ್ ವಿರುದ್ಧ ಕೇಸ್
ಇನ್ಸ್ಟಾಗ್ರಾಮ್ನಲ್ಲಿ ಕೋಮು ಪ್ರಚೋದನೆ ಮತ್ತು ಕೊಲೆ ಬೆದರಿಕೆ ಹಾಕಿದ ಪೇಜ್ ವಿರುದ್ಧ ಮಂಗಳೂರು ಪೊಲೀಸರು ಸುಮೋಟೋ ಕೇಸ್ ದಾಖಲಿಸಿದ್ದಾರೆ. ನೈತಿಕ ಪೊಲೀಸ್ ಗಿರಿ ಘಟನೆ ಬಳಿಕ ಹಿಂದೂ ಸಂಘಟನೆ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಲಾಗಿದ್ದು, ಕೋಮು ಸಾಮರಸ್ಯ ಕದಡುವ ಯತ್ನಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಅಗತ್ಯ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ.

ಮಂಗಳೂರು, ಜನವರಿ 04: ಸಾಕಷ್ಟು ಕಠಿಣ ಕ್ರಮಗಳ ಹೊರತಾಗಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಾಮರಸ್ಯ ಹಾಳುಮಾಡುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ಇವುಗಳ ಸಾಲಿಗೀಗ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಮಾಡಿರುವ ಪೋಸ್ಟ್ ಕೂಡ ಸೇರ್ಪಡೆಯಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಯತ್ನ ನಡೆದಿರುವ ಹಿನ್ನಲೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡು, ತನಿಖೆ ಆರಂಭಿಸಿದ್ದಾರೆ.
ಅಕ್ರಮ ಗೋಮಾಂಸ ಸಾಗಾಟ ಮಾಡುತ್ತಿದ್ದ ಅಬ್ದುಲ್ ಸತ್ತಾರ್ ಎಂಬವರ ಮೇಲೆ ಸುಮಿತ್ ಮತ್ತು ರಜತ್ ನಾಯಕ್ ಹಲ್ಲೆ ನಡೆಸಿದ್ದರು. ಬಜಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಆ ಬೆನ್ನಲ್ಲೇ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು. ಇದೇ ವಿಚಾರವನ್ನು ಮುಂದಿಟ್ಟುಕೊಂಡು ನಾರ್ಲಪದವಿನ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿ ಬೆದರಿಕೆ ಹಾಕಲಾಗಿದೆ. muslim__leader ಎಂಬ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರಾದ ಪ್ರದೀಪ್, ರಜಿತ್, ಸಂತೋಷ್ ಹಾಗೂ ಜನಾರ್ಧನ ಎಂಬವರಿಗೆ ಬೆದರಿಕೆ ಹಾಕಲಾಗಿದೆ.
ಇದನ್ನೂ ಓದಿ: ಟೈರ್ ಸ್ಪೋಟಗೊಂಡು ಮನೆಯ ಆವರಣಕ್ಕೆ ಹಾರಿ ಬಂದು ಬಿದ್ದ ಕಾರು
ಪೋಸ್ಟ್ನಲ್ಲಿ ಏನಿದೆ?
ಸಂಘಿಗಳ ಅಟ್ಟಹಾಸ ಮಿತಿಮೀರುತ್ತಿದ್ದು ಇದಕ್ಕೆ ಕಡಿವಾಣ ಇಲ್ಲವಾಯಿತೇ? ಸಂಘಪರಿವಾರದ ಭಯೋತ್ಪಾದಕರ ದಾಳಿ ಈಗೀಗ ಹೆಚ್ಚುತ್ತಲೇ ಇದ್ದು, ಅವರಿಗೆ ಕಾನೂನಿನ ಭಯವಿಲ್ಲ ಮತ್ತು ಕಾನೂನು ಅವರನ್ನು ಏನು ಮಾಡುವುದಿಲ್ಲ. ಇನ್ನೂ ಗೋಮಾಂಸ ತಿನ್ನುತ್ತೇವೆ, ಸಂಘಿಗಳೆ ಏನು ಮಾಡುತ್ತೀರ? ಎಂದು ಪ್ರಶ್ನಿಸಿರೋದಲ್ಲದೆ, ಇವರಿಗೆ ಸದ್ಯದಲ್ಲಿ ಸುಹಾಸ್ ಶಟ್ಟಿ ಟ್ರೀಟ್ ಮೆಂಟ್ ಕೊಡಬೇಕು ಎಂದೂ ಬೆದರಿಕೆ ಹಾಕಲಾಗಿದೆ. ಈ ಸಂಬಂಧ ಬಜಪೆ ಪೊಲೀಸ್ ಠಾಣೆಯಲ್ಲಿ BNS ಕಲಂ 351(2), 351(3), 352, 353(2),192ರಡಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.