ಚಂದ್ರಶೇಖರ್ ಸಾವು ಪ್ರಕರಣ: ತಂದೆ ರಮೇಶ್ ದೂರಿನ ಮೇರೆಗೆ ಎಫ್​ಐಆರ್ ದಾಖಲು​

ಚಂದ್ರಶೇಖರ್​ ತಂದೆ ರಮೇಶ್ ದೂರಿನ ಮೇರೆಗೆ ಜಿಲ್ಲೆಯ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್​ 302, 201 ಹಾಗೂ 427ರಡಿ ಪ್ರಕರಣ ದಾಖಲಿಸಲಾಗಿದೆ.

ಚಂದ್ರಶೇಖರ್ ಸಾವು ಪ್ರಕರಣ: ತಂದೆ ರಮೇಶ್ ದೂರಿನ ಮೇರೆಗೆ ಎಫ್​ಐಆರ್ ದಾಖಲು​
ತಂದೆ ರಮೇಶ್, ಮೃತ ಚಂದ್ರಶೇಖರ್
Edited By:

Updated on: Nov 04, 2022 | 8:05 PM

ದಾವಣಗೆರೆ: ಬಿಜೆಪಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವು ಪ್ರಕರಣ ಹಿನ್ನೆಲೆ ಚಂದ್ರಶೇಖರ್ (Chandrasekhar) ​ ತಂದೆ ರಮೇಶ್ ದೂರಿನ ಮೇರೆಗೆ ಜಿಲ್ಲೆಯ ಹೊನ್ನಾಳಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲು ಮಾಡಲಾಗಿದೆ. ಐಪಿಸಿ ಸೆಕ್ಷನ್​ 302, 201 ಹಾಗೂ 427ರಡಿ ಪ್ರಕರಣ ದಾಖಲಿಸಲಾಗಿದೆ. ಮೃತ ದೇಹದ ಕೈ-ಕಾಲು ಬಟ್ಟೆಯಿಂದ ಕಟ್ಟಿ ಹಾಕಿದ್ದು, ಕಿವಿಗಳಿಗೆ ಹೊಡೆದಿರುವ ಗುರುತುಗಳು ಮೃತ ದೇಹದಲ್ಲಿ ಪತ್ತೆಯಾಗಿವೆ. ತಲೆಗೆ ಆಯುಧಗಳಿಂದ ಹೊಡೆದಿರುವ, ದೇಹದ ಉಳಿದ ಭಾಗದಲ್ಲಿ ಹೊಡೆದಿರುವ ಬಗ್ಗೆ ಗುರುತು ಪತ್ತೆಯಾಗಿರುವುದರ ಬಗ್ಗೆ ಎಫ್​ಐಆರ್​​ನಲ್ಲಿ ಉಲ್ಲೇಖಿಸಲಾಗಿದೆ. ನನ್ನ ಮಗನನ್ನ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಬಳಿಕ ಅಪಘಾತದ ರೀತಿಯಲ್ಲಿ ಬಿಂಬಿಸಿ ಮೃತದೇಹವನ್ನ ಕಾರಿನಲ್ಲಿ ಇರಿಸಿ ಕಾರು ಜಖಂಗೊಳಿಸಿದ್ದಾರೆ. ಕಾರಿನ ಸಮೇತ ಚಾನಲ್​ಗೆ ತಳ್ಳಿದ್ದಾರೆ ಎಂದು ತಂದೆ ರಮೇಶ್ ಎಫ್​ಐಆರ್​ನಲ್ಲಿ​ ಉಲ್ಲೇಖಿಸಿದ್ದಾರೆ.

ದೂರಿನಲ್ಲಿ ಏನಿದೆ?

ಎಂ.ಪಿ.ರೇಣುಕಾಚಾರ್ಯ ಕುಟುಂಬಸ್ಥರು ನೀಡಿದ ದೂರಿನ ಸಾರಾಂಶ ಹೀಗಿದೆ. ‘ಚಂದ್ರಶೇಖರ್​ ಮೃತದೇಹ ಕಾರಿನ ಹಿಂದಿನ ಸೀಟ್​ನಲ್ಲಿತ್ತು. ಅಷ್ಟೇ ಅಲ್ಲದೇ ಚಂದ್ರಶೇಖರ್​ನ ಕೈಕಾಲುಗಳನ್ನು ಕಟ್ಟಿ ಹಾಕಿದ್ದರು. ನಂತರ ಕಿವಿ, ತಲೆಗೆ ಆಯುಧದಿಂದ ಹಲ್ಲೆ ಸಹ ಮಾಡಲಾಗಿತ್ತು. ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಮೃತದೇಹವನ್ನು ಕಾರಿನಲ್ಲಿಟ್ಟು ತುಂಗಾ ಕಾಲುವೆಗೆ ದೂಡಿದ್ದಾರೆ. ತನಿಖೆ ನಡೆಸಿ ಸೂಕ್ತ ಕ್ರಮಕೈಗೊಳ್ಳಿ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಚಂದ್ರಶೇಖರ್​ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವ ಭರವಸೆ

ಚಂದ್ರಶೇಖರ್​ ಸಾವಿನ ಬಗ್ಗೆ ಸೂಕ್ತ ತನಿಖೆ ನಡೆಸುವುದಾಗಿ ಸಿಎಂ ಬೊಮ್ಮಾಯಿ, ಸಚಿವ ಆರಗ ಜ್ಞಾನೇಂದ್ರ ಭರವಸೆ ನೀಡಿದ್ದಾರೆ ಎಂದು ಕುಂದೂರು ಗ್ರಾಮದಲ್ಲಿ ಶಾಸಕ ರೇಣುಕಾಚಾರ್ಯ ಹೇಳಿದರು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಸರ್ಕಾರ ನಿಮ್ಮ ಜೊತೆ ಇರುತ್ತೆ ಎಂದು ಸಿಎಂ ಹೇಳಿದ್ದಾರೆ. ನಿನ್ನ ಜನಪ್ರಿಯತೆ ಕಂಡು ಹೀಗೆ ಮಾಡಿದ್ದಾರೆಂದು ಹೇಳಿದ್ದಾರೆ. ತನಿಖೆ ಬಳಿಕ ಸತ್ಯಾಂಶ ಹೊರಬರಲಿದೆ. ನನ್ನಷ್ಟೇ ಪ್ರೀತಿಯನ್ನ ಚಂದ್ರಶೇಖರ್​ಗೂ ಜನ ಪ್ರೀತಿ ತೋರಿಸಿದ್ದಾರೆ. ಜನರು ತೋರಿದ ಪ್ರೀತಿ ವಿಶ್ವಾಸಕ್ಕೆ ಧನ್ಯವಾದ ಎಂದು ರೇಣುಕಾಚಾರ್ಯ ಹೇಳಿದರು.

ಚಂದ್ರಶೇಖರ್​ ಸಾವಿಗೆ ಸಂತಾಪ ಸೂಚಿಸಿದ ಸಿದ್ದರಾಮಯ್ಯ

ಚಂದ್ರಶೇಖರ್​ ಸಾವಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಜೊತೆಗೆ ಸಾವಿನ ಬಗ್ಗೆ ಹಲವು ಸಂಶಯ ಮೂಡಿದೆ. ಚಂದ್ರಶೇಖರ್​ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಚಂದ್ರಶೇಖರ್​ ಕಳೆದುಕೊಂಡಿರುವ ತಂದೆ, ತಾಯಿ, ಶಾಸಕ ರೇಣುಕಾಚಾರ್ಯಗೆ ದುಃಖ ಸಹಿಸುವ ಶಕ್ತಿ ನೀಡಲಿ. ಕುಟುಂಬಕ್ಕೆ ನೋವು ಸಹಿಸಿಕೊಳ್ಳುವ ಶಕ್ತಿ ದೇವರು ನೀಡಲಿ ಎಂದು ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:41 pm, Fri, 4 November 22

Web contact

TV9 Kannada

Read More
Follow Us