ಚನ್ನಗಿರಿ ಲಾಕಪ್​ ಡೆತ್​ ಕೇಸ್​: ಆದಿಲ್ ಅಪ್ಪ, ಚಿಕಪ್ಪ ದ್ವಂದ್ವ ಹೇಳಿಕೆ

| Updated By: ವಿವೇಕ ಬಿರಾದಾರ

Updated on: May 25, 2024 | 1:42 PM

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್​ ಠಾಣೆ ಲಾಕಪ್​ಡೆತ್​ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ. ಆದಿಲ್​ ಅನಾರೋಗ್ಯ, ಮೂರ್ಛೆ ರೋಗದಿಂದ ಮೃತಪಟ್ಟಿದ್ದಾನೆ ಎಂದು ಸರ್ಕಾರ ಹೇಳಿದೆ. ಇತ್ತ ಆದಿಲ್​​ ಚಿಕ್ಕಪ್ಪ ಮತ್ತು ಅಪ್ಪ ತಮ್ಮ ಪುತ್ರನ ಸಾವಿನ ಕುರಿತು ದ್ವಂದ್ವ ಹೇಳಿಕೆ ನೀಡಿದ್ದಾರೆ.

ಚನ್ನಗಿರಿ ಲಾಕಪ್​ ಡೆತ್​ ಕೇಸ್​: ಆದಿಲ್ ಅಪ್ಪ, ಚಿಕಪ್ಪ ದ್ವಂದ್ವ ಹೇಳಿಕೆ
ಚನ್ನಗಿರಿ ಪೊಲೀಸ್​ ಠಾಣೆ
Follow us on

ದಾವಣಗೆರೆ, ಮೇ 25: ಚನ್ನಗಿರಿ ಪೊಲೀಸ್​ ಠಾಣೆ ಲಾಕಪ್ ​ಡೆತ್​ ಪ್ರಕರಣಕ್ಕೆ (Channagiri Police Station Lockup Death Case) ಸಂಬಂಧಿಸಿದ್ದಂತೆ ಮೃತ ಆದಿಲ್​ ಅಪ್ಪ ಮತ್ತು ಚಿಕ್ಕಪ್ಪ ದ್ವಂದ್ವ ಹೇಳಿಕೆ ನೀಡಿದ್ದಾರೆ. ಮೃತ ಆದಿಲ್​ಗೆ ಮೂರ್ಛೆ ರೋಗ ಇತ್ತು. ಅದರಿಂದ ಆತ ಮೃತ ಪಟ್ಟಿದ್ದಾನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದರು. ಮುಖ್ಯಮಂತ್ರಿಗಳ ಹೇಳಿಕೆಗೆ ಸಂಬಂಧಿಸಿದಂತೆ ಆದಿಲ್ ಚಿಕ್ಕಪ್ಪ ಮೆಹಬೂಬ್ ಅಲಿ ದಾವಣಗೆರೆಯಲ್ಲಿ (Davangere) ಟಿವಿ9 ಜೊತೆ ಮಾತನಾಡಿ, ನನ್ನ ಪುತ್ರನ ಸಾವಿಗೆ ಪೊಲೀಸರೇ ಕಾರಣ. ಆದಿಲ್ ಬೆನ್ನಿಗೆ ಗಾಯ ಆಗಿದೆ, ಚರ್ಮ ಕೆಂಪಾಗಿರುವುದು ಕಂಡು ಬಂದಿದೆ. ನನ್ನ ಪುತ್ರ ಆದಿಲ್​ಗೆ​ ಮೂರ್ಛೆ ರೋಗ ಇಲ್ಲ ಎಂದು ಹೇಳಿದರು.

30 ವರ್ಷದಿಂದ ಆದಿಲ್​ನನ್ನು ನಾನೇ ಸಾಕಿದ್ದು, ಅವನಿಗೆ ಯಾವುದೆ ಕಾಯಿಲೆ ಇರಲಿಲ್ಲ. ವೈದ್ಯಕೀಯ ವರದಿ ಬರಲಿ, ಸತ್ಯ ಗೊತ್ತಾಗುತ್ತದೆ ಎಂದರು.

ಲೋ ಬಿಪಿಯಿಂದ​ ಸಾವು: ಆದಿಲ್ ಅಪ್ಪ

ನನ್ನ ಮಗನ ಮೈಮೇಲೆ ಯಾವುದೇ ಗಾಯಗಳಿರಲಿಲ್ಲ. ಪೊಲೀಸರ ಹಲ್ಲೆಯಿಂದ ಮೃತಪಟ್ಟಿಲ್ಲ, ಲೋ ಬಿಪಿಯಾಗಿ ಮೃತಪಟ್ಟಿದ್ದಾನೆ. ನನ್ನ ಮಗ ಆದಿಲ್​ಗೆ ಯಾವುದೇ ಮೂರ್ಛೆ ರೋಗ ಇರಲಿಲ್ಲ. ಆತನ ಸಾವಿನ ಬಗ್ಗೆ ನಮಗೆ ಯಾವುದೇ ರೀತಿ ಅನುಮಾನ ಇಲ್ಲ. ಠಾಣೆಗೆ ಕಲ್ಲು ಹೊಡೆದವರು ಯಾರು ಅನ್ನೋದು ನನಗೆ ಗೊತ್ತಿಲ್ಲ. ಸರ್ಕಾರ ನನಗೆ ಪರಿಹಾರ ಕೊಡಬೇಕು ಎಂದು ಆದಿಲ್ ತಂದೆ ಖಲೀಮುಲ್ಲಾ ಹೇಳಿದರು.

ಇದನ್ನೂ ಓದಿ: ದಾವಣಗೆರೆ ಯುವಕನ ಸಾವು ಲಾಕಪ್ ಡೆತ್ ಅಲ್ಲ, ಆದರೂ ಪೊಲೀಸರ ಅಮಾನತಿಗೆ ಸೂಚಿಸಿದ್ದೇನೆ; ಸಿದ್ದರಾಮಯ್ಯ ಹೀಗೆನ್ನಲು ಕಾರಣವಿದೆ!

ಏನಿದು ಪ್ರಕರಣ

ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಪೊಲೀಸ್​ ಠಾಣೆ ವ್ಯಾಪ್ತಿಯ ಟಿಪ್ಪು ನಗರ ನಿವಾಸಿಯಾಗಿದ್ದ ಅದೀಲ್ (30) ಒಸಿ(ಮಟ್ಕಾ) ಆಡಿಸುತ್ತಿದ್ದ ಎಂದು ಶುಕ್ರವಾರ ಪೊಲೀಸರು ಠಾಣೆಗೆ ಕರೆ ತಂದಿದ್ದರು. ಪೊಲೀಸರು ಠಾಣೆಗೆ ಕರೆ ತರುತ್ತಿದ್ದಂತೆ, ಆದಿಲ್​​ ಬಿಪಿ ಲೋ ಆಗಿ ಕುಸಿದು ಬಿದ್ದಿದ್ದಾನೆ. ಕೂಡಲೆ ಆತನನ್ನು ಆಸ್ಪತ್ರೆಗೆ ದಾಖಲಾಗಿಸಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದ ಮೃತಪಟ್ಟಿದ್ದಾನೆ. ಇದರಿಂದ ಆಕ್ರೋಶಗೊಂಡ ಮೃತ ಕುಟುಂಬಸ್ಥರು ಪೊಲೀಸ್​ ಠಾಣೆ ಮೇಲೆ ದಾಳಿ ಮಾಡಿದ್ದರು.

11 ಪೊಲೀಸರಿಗೆ ಗಾಯ, 10ಕ್ಕೂ ಹೆಚ್ಚು ವಾಹನ ಜಖಂ

ಕಲ್ಲು ತೂರಾಟದಲ್ಲಿ 11 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. 10ಕ್ಕೂ ಹೆಚ್ಚು ಪೊಲೀಸ್ ವ್ಯಾನ್​ಗಳು ಜಖಂ‌ಗೊಂಡಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ನಾಲ್ಕು‌ ಪ್ರಕರಣ ದಾಖಲಾಗಿವೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ