ವಿದ್ಯುತ್​ ಸಮಸ್ಯೆ: ಜಮೀನುಗಳಲ್ಲಿ ಸುಟ್ಟು ಕರಕಲಾದ ನೂರಾರು ಮೋಟಾರು, ಭಸ್ಮಗೊಂಡ ರೈತರ ಬದುಕು

ತಿಂಗಳುಗಳೆ ಉರುಳಿದರೂ ಕೂಡ ಈ ಮಂಡಲೂರು ಗ್ರಾಮಕ್ಕೆ 250 ಕೂ ಹೆಚ್ಚು ವೋಲ್ಟೇಜ್ ನೀಡುವ ಬದಲು, ಸಿಂಗಲ್ ವೋಲ್ಟೇಜ್ ವಿದ್ಯುತ್ ನೀಡ್ತಿದ್ದಾರಂತೆ. ಇನ್ನು ಕೇವಲ 150 ವಿದ್ಯುತ್ ವೋಲ್ಟೆಜ್ ಕೊಡುವುದರಿಂದ ಜಮೀನಿನಲ್ಲಿ ಕೊಳವೆ ಬಾವಿಗಳಿಗೆ ಅಳವಡಿಸಿರುವ 400 ಕ್ಕೂ ಹೆಚ್ಚು ಮೋಟಾರುಗಳು ಸುಟ್ಟು ಹೋಗಿವೆಯಂತೆ.

ವಿದ್ಯುತ್​ ಸಮಸ್ಯೆ: ಜಮೀನುಗಳಲ್ಲಿ ಸುಟ್ಟು ಕರಕಲಾದ ನೂರಾರು ಮೋಟಾರು, ಭಸ್ಮಗೊಂಡ ರೈತರ ಬದುಕು
ಜಮೀನುಗಳಲ್ಲಿ ಸುಟ್ಟು ಕರಕಲಾದ ನೂರಾರು ಮೋಟಾರು
ಸಾಧು ಶ್ರೀನಾಥ್​

Updated on: Feb 22, 2023 | 2:43 PM

ಡ್ರಾಪ್ ಆಗ್ತಿರುವ ವೋಲ್ಟೆಜ್, ಸಿಂಗಲ್ ಫೇಸ್ ನಿಂದ ವಿದ್ಯುತ್ (power) ಕಣ್ಣಾಮುಚ್ಚಾಲೆ, ಒಣಗುತ್ತಿರುವ ಬೆಳೆಗಳು, ಅತಂತ್ರವಾದ ರೈತರು ಬದುಕು. ಡ್ರೈ ಲ್ಯಾಂಡ್ ನಲ್ಲಿ ಬೆಳೆಗಳಿಗೆ ಭರಪೂರವಾಗಿ ನೀರು ಹಾಯಿಸುಲು ಮೋಟಾರ್ ಜೊತೆಗೆ ವಿದ್ಯುತ್ ಕೂಡ ರೈತರಿಗೆ ಅತ್ಯವಶ್ಯ. ವಿದ್ಯುತ್ ವೋಲ್ಟೆಜ್ ಡ್ರಾಪ್ ಆಗ್ತಿದ್ದು, ಸಿಂಗಲ್ ಫೇಸ್ ನಿಂದ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದ್ದರಿಂದ ಜಮೀನಿನಲ್ಲಿರುವ ನೂರಾರು ಮೋಟಾರ್ (pump set) ಗಳು ಸುಟ್ಟು ಹೋಗಿವೆ. ಇನ್ನು ಸಿಂಗಲ್ ಫೇಸ್ ವಿದ್ಯುತ್ ಇರುವುದರಿಂದ ವಿದ್ಯುತ್ ಟ್ರಾನ್ಸ್​​ಫಾರ್ಮರ್​​ಗಳು ಕೂಡ ಸುಟ್ಟು ಕರಕಲಾಗಿವೆ. ಇಲ್ಲಿದೆ ನೋಡಿ ಬೇಸಿಗೆ ಬಿಸಿಲಿನಲ್ಲಿ ರೈತರಿಗೆ ವಿದ್ಯುತ್ ಶಾಕ್, ಕಣ್ಣೀರು ಹಾಕುತ್ತಿರುವ ಅನ್ನದಾತನ ಕರುಣಾಜನಕ ಕತೆ. ದಾವಣಗೆರೆ ತಾಲೂಕಿನ (Davanagere) ಮಂಡಲೂರು (Mandaluru) ಗ್ರಾಮ ಸೇರಿದಂತೆ ಹತ್ತಾರು ಗ್ರಾಮಗಳ ಸ್ಥಿತಿ ಹೀಗಿದೆ. ಬರಪೀಡಿತ ಗ್ರಾಮವಾಗಿದ್ದರಿಂದ ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಕೊಳವೆ ಬಾವಿ ನೀರಿನ ಮೂಲಕ ಬದುಕು ಕಟ್ಟಿಕೊಂಡಿರುವ ರೈತರು ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಹೈರಾಣಾಗಿದ್ದಾರೆ. ಮಂಡಲೂರು ಗ್ರಾಮ ಬರಪೀಡಿತ ಗ್ರಾಮವಾಗಿದ್ದರಿಂದ ಇಲ್ಲಿನ ರೈತರು ಕೊಳವೆ ಬಾವಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಇನ್ನು ಕಳೆದ ವರ್ಷ ಮಳೆ ಹೆಚ್ಚು ಬಿದ್ದಿದ್ದರಿಂದ ಈ ಭಾಗದ ನೂರಾರು ಬೋರ್ ವೆಲ್ ಗಳಲ್ಲಿ ಭರಪೂರವಾದ ನೀರು ದೊರೆಯುತ್ತಿದೆ.

ದುರಂತ ಅಂದ್ರೆ ಈ ಮಂಡಲೂರು ಗ್ರಾಮವು ಆನಗೋಡು ವಿದ್ಯುತ್ ಸರಬರಾಜು ಕೇಂದ್ರದ ಕಟ್ಟಕಡೆಯ ಹಳ್ಳಿಯಾಗಿದ್ದರಿಂದ ಇಲ್ಲಿನ ಕೆಲ ಅಧಿಕಾರಿಗಳು ನೀರ್ಥಡಿ ಗ್ರಾಮಕ್ಕೆ ಹಾಗು ಮಂಡಲೂರು ಗ್ರಾಮಕ್ಕೆ ಐದು ತಾಸು ವಿದ್ಯುತ್ ಕೊಡುವುದಾಗಿ ಹೇಳಿ ನೂತನ ಲೈನ್ ವೊಂದನ್ನು ಹಾಕಲು ಮುಂದಾಗಿದ್ದರು. ಇದೀಗ ಅದರ ಕಾಮಗಾರಿ ಕೂಡ ನಡೆಯುತ್ತಿದ್ದರೂ ಕೂಡ ಈ ಮಂಡಲೂರು ಗ್ರಾಮಕ್ಕೆ ಮಾತ್ರ ಭರಪೂರವಾಗಿ ವಿದ್ಯುತ್ ನೀಡುವಲ್ಲಿ ಅಧಿಕಾರಿಗಳು ಎಡವಿದ್ದಾರೆ.

ತಿಂಗಳುಗಳೆ ಉರುಳಿದರೂ ಕೂಡ ಈ ಮಂಡಲೂರು ಗ್ರಾಮಕ್ಕೆ 250 ಕೂ ಹೆಚ್ಚು ವೋಲ್ಟೇಜ್ ನೀಡುವ ಬದಲು, ಸಿಂಗಲ್ ವೋಲ್ಟೇಜ್ ವಿದ್ಯುತ್ ನೀಡ್ತಿದ್ದಾರಂತೆ. ಇನ್ನು ಕೇವಲ 150 ವಿದ್ಯುತ್ ವೋಲ್ಟೆಜ್ ಕೊಡುವುದರಿಂದ ಜಮೀನಿನಲ್ಲಿ ಕೊಳವೆ ಬಾವಿಗಳಿಗೆ ಅಳವಡಿಸಿರುವ 400 ಕ್ಕೂ ಹೆಚ್ಚು ಮೋಟಾರುಗಳು ಸುಟ್ಟು ಹೋಗಿವೆಯಂತೆ.

ಬೆಳೆಗಳಿಗೆ ನೀರು ಹಾಯಿಸಲಾಗದೆ ಇಡೀ ರೈತ ಸಮುದಾಯ ಹೈರಾಣವಾಗಿದ್ದು, ಬೆಳೆಗಳು ಒಣಗುತ್ತಿವೆ. ಇದೇ ವೇಳೆ ರೈತ ತಿಮ್ಮನ ಗೌಡ ಮಾತನಾಡಿ ಬೆಸ್ಕಾಂ ಅಧಿಕಾರಿಗಳು ಒಂದು ಹೊಸ ಲೈ ನ್ ಮಾಡುವ ಮೂಲಕ ಹೆಬ್ಬಾಳು ಹಾಗು ಆನಗೋಡು ಮಧ್ಯೆ ಬರುವ 40 ಟಿಸಿಗಳಿಗೆ ಲೈನ್ ಎಳೆದುಕೊಟ್ಟ ಬೆನ್ನಲ್ಲೇ ನಮ್ಮ ಗ್ರಾಮಕ್ಕೆ ವೋಲ್ಟೆಜ್ ಡ್ರಾಪ್ ಆಗ್ತಿದೆ. ನಮ್ಮ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಸಿಗ್ತಿಲ್ಲ. ನಮ್ಮ ಗ್ರಾಮದಲ್ಲಿ ಲೋ ವೋಲ್ಟೆಜ್ ಇರುವುದರಿಂದ ರೈತರ 300 ರಿಂದ 400 ಮೋಟಾರುಗಳು ಸುಟ್ಟಿವೆ. ನಮಗೆ ಒಂದು ದಿನದಲ್ಲಿ 5 ತಾಸು ವಿದ್ಯುತ್ ಕೊಡ್ಬೇಕು, ಅದ್ರೇ ವಿದ್ಯುತ್ ಮಾತ್ರ ಮರೀಚಿಕೆಯಾಗಿದೆ. ಜಮೀನುಗಳಿಗೆ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ. ಮುಂದಿನ ದಿನಗಳಲ್ಲಿ ಇದನ್ನು ಬೆಸ್ಕಾಂ ಅಧಿಕಾರಿಗಳು ಸರಿಪಡಿಸದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ ಎಂದರು.

ರೈತರು ಸಾಲಸೋಲ ಮಾಡುವ ಮೂಲಕ ತಮ್ಮ ಸಾವಿರಾರು ಎಕರೆ ಜಮೀನುಗಳಲ್ಲಿ ರೈತರು ಬಾಳೆ, ಅಡಿಕೆ, ಗುಲಾಬಿ ಹೂವು, ತರಕಾರಿ, ಮೆಕ್ಕೆ ಜೋಳ, ಶೇಂಗಾ ಬೆಳೆದಿದ್ದಾರೆ. ಅದ್ರೇ ಈ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ, ಎಕ್ಸ್ ಪ್ರೆಸ್ ಲೈನ್ ಹಾಕುವ ಮೂಲಕ ಒಂದು ದಿನದಲ್ಲಿ 5 ತಾಸು ವಿದ್ಯುತ್ ಕೊಡುವುದಾಗಿ ನಂಬಿಸಿದ ಬೆಸ್ಕಾಂ ಅಧಿಕಾರಿಗಳು ಈ ರೀತಿಯ ಯಡವಟ್ಟು ಮಾಡಿರುವುದರಿಂದ ರೈತರು ಅಧಿಕಾರಿಗಳ ವಿರುದ್ಧ ಕೆಂಡಕಾರುತ್ತಿದ್ದಾರೆ.

ಇದರ ಬಗ್ಗೆ ರೈತರು ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಸರಿಯಾದ ವಿದ್ಯುತ್ ಇಲ್ಲದೆ ಈ ಭಾಗದ ರೈತರು 15 ದಿನಗಳಿಂದ ತಮ್ಮ ಬೆಳೆಗೆ ಮೋಟಾರ್ ಚಾಲು ಆಗದ ಬೆನ್ನಲ್ಲೇ ನೀರು ಹಾಯಿಸಿಲ್ಲವಂತೆ. ಇನ್ನು ಈ ವೇಳೆ ಯಡವಟ್ಟಿನ ಬಗ್ಗೆ ಪ್ರತಿಕ್ರಿಯಿಸಿದ ರೈತ ಸಿದ್ದೇಶ್ ನಮ್ಮದು ನಾಲ್ಕು ಎಕರೆ ಜಮೀನಿದ್ದು, ಅದರಲ್ಲಿ ಅಡಿಕೆ ಹಾಕಿದ್ದು ನೀರಿಲ್ಲದೆ ಓಣಗುತ್ತಿದೆ. ನೀರು ಹಾಯಿಸೋಣ ಅಂದ್ರೆ ವಿದ್ಯುತ್ ಇಲ್ಲದೆ ಮೋಟಾರು ಚಾಲು ಆಗದೆ ಜೀವನ ಹೈರಾಣಾಗಿಸಿದೆ. ಇದರ ಬಗ್ಗೆ ಇಂಧನ ಸಚಿವರಾದ ಸುನೀಲ್ ಕುಮಾರ್ ರವರು ಇತ್ತ ಗಮನಹರಿಸಬೇಕಾಗಿದೆ ಎಂದು ಮನವಿ ಮಾಡಿದ್ರು. ಇನ್ನು ಬೆಸ್ಕಾಂನ ಎಇಇ ತೀರ್ಥೇಶ್ ರವರು ದೂರವಾಣಿಯಲ್ಲಿ ಮಾತನಾಡಿ ಮಂಡಲೂರು ಗ್ರಾಮದಲ್ಲಿ ವಿದ್ಯುತ್ ಹೆವಿ ಲೋಡ್ ಆಗಿದ್ದು, ನೂರಾರು ಮೋಟರ್ ಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆಯಾಗಿದೆ. ಅ ಗ್ರಾಮದಲ್ಲಿ ಮೊದಲಿಗೆ 40 ವಿದ್ಯುತ್ ಲೋಡ್ ಇದ್ದಿದ್ದು, ಇದೀಗ 80 ಲೋಡ್ ಆಗಿದ್ದರಿಂದ ಸಮಸ್ಯೆಯಾಗಿದೆ. ಹೊಸ ಲೈನ್ ಎಳೆಯುವ ಮೂಲಕ ಲೈನ್ ರೀಚಾರ್ಜ್ ಮಾಡುವ ಮೂಲಕ ಒಂದು ವಾರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.

ವರದಿ: ಬಸವರಾಜ್ ದೊಡ್ಮನಿ, ಟಿವಿ9, ದಾವಣಗೆರೆ

Published On - 2:25 pm, Wed, 22 February 23

Loading...
Unable to load recommendations.
Follow Us