
ದಾವಣಗೆರೆ, ಫೆಬ್ರವರಿ 03: ತಂದೆಯ ಆಸ್ತಿಗಾಗಿ ಒಡಹುಟ್ಟಿದವನನ್ನೇ ಪಾಪಿ ಸಹೋದರನೋರ್ವ ಕೊಲೆ ಮಾಡಿರುವ ಆಘಾತಕಾರಿ ಘಟನೆ ದಾವಣಗೆರೆಯ ಮಾಯಕೊಂಡದಲ್ಲಿ ನಡೆದಿದೆ. ನೀಲಪ್ಪ ಮೃತ ವ್ಯಕ್ತಿಯಾಗಿದ್ದು, ಆತನ ಸಹೋದರ ಚಂದ್ರಪ್ಪನೇ ಆರೋಪಿ. ಕೇವಲ ಒಂದೂವರೆ ಎಕರೆ ಜಮೀನಿಗಾಗಿ ನಡೆದ ಕೌಟುಂಬಿಕ ಕಲಹ ಓರ್ವನ ಸಾವಲ್ಲಿ ಅಂತ್ಯ ಕಂಡಿದೆ.
ಚಂದ್ರಪ್ಪ ಮತ್ತು ನೀಲಪ್ಪಗೆ ಅವರ ತಂದೆ ಇರುವಾಗಲೇ ಅಂದ್ರೆ 1983ರಲ್ಲಿ ಆಸ್ತಿ ಪಾಲು ಮಾಡಲಾಗಿತ್ತು. ಈ ವೇಳೆ ತಂದೆ ಜೀವನೋಪಾಯಕ್ಕಾಗಿ ಒಂದೂವರೆ ಎಕರೆ ಜಮೀನನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದರು. ಅವರು ನೀಲಪ್ಪ ಜೊತೆಗೇ ನೆಲೆಸಿದ್ದು, ಈ ವೇಳೆ ಒಮ್ಮೆಯೂ ಅಪ್ಪನ ಯೋಗಕ್ಷೇಮ ವಿಚಾರಿಸಲು ಚಂದ್ರಪ್ಪ ಬಂದಿರಲಿಲ್ಲ. ಕನಿಷ್ಠ ತಂದೆಯ ಅಂತ್ಯ ಸಂಸ್ಕಾರಕ್ಕೂ ಬಂದಿಲ್ಲ. ಇನ್ನು ತನ್ನನ್ನು ಕೊನೇಗಾಲದಲ್ಲಿ ನೀಲಪ್ಪ ನೋಡಿಕೊಂಡ ಕಾರಣ ಆತನ ಪುತ್ರ ರಾಕೇಶ್ ಹೆಸರಿಗೆ ಬದುಕಿದ್ದಾಗಲೇ ಇವರ ತಂದೆ ಜಮೀನಿನ ಕಾಗದಪತ್ರ ಮಾಡಿಸಿದ್ದರು. ಇದೇ ಕಾರಣಕ್ಕೆ ಜಗಳ ತೆಗೆಯುತ್ತಿದ್ದ ಚಂದ್ರಪ್ಪ, ತನಗೂ ಆ ಜಮೀನಲ್ಲಿ ಪಾಲುಕೊಡುವಂತೆ ಪೀಡಿಸಿ ಸಹೋದರನನ್ನು ಬಡಿದು ಕೊಲೆ ಮಾಡಿದ್ದಾನೆ.
ಇದನ್ನೂ ಓದಿ: ಕೌಟುಂಬಿಕ ಕಲಹಕ್ಕೆ ಹರಿದ ನೆತ್ತರು; ಗಲಾಟೆ ವೇಳೆ ಹೋಯ್ತು ಇಬ್ಬರ ಪ್ರಾಣ!
ಇನ್ನು ಈ ಹಿಂದೆಯೂ ತೋಟದಲ್ಲಿನ ಅಡಿಕೆ ಮರಗಳನ್ನು ಚಂದ್ರಪ್ಪ ಕಡಿದುಹಾಕಿದ್ದ. ಪೊಲೀಸ್ ಠಾಣೆ ಮೆಟ್ಟಿಲು ಹತ್ತಿ ಜೈಲಿಗೂ ಹೋಗಿಬಂದಿದ್ದ ಎನ್ನಲಾಗಿದೆ. ನೀಲಪ್ಪ ಕೊಲೆಗೆ ಈತ ಮಾತ್ರ ಕಾರಣನಲ್ಲ. ಬದಲಾಗಿ ಆತನ ಪುತ್ರರು ಮತ್ತು ಪತ್ನಿ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿದೆ. ನೀಲಪ್ಪನ ಕೊಂದು ಆತನ ಪುತ್ರ ರಾಕೇಶ್ಗೂ ಆರೋಪಿ ಜೀವ ಬೆದರಿಕೆ ಹಾಕಿದ್ದ ಎನ್ನಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಒಟ್ಟಾರೆಯಾಗಿ ತನ್ನ ವೃದ್ಧಾಪ್ಯದಲ್ಲಿ ಸಲಹಿ- ಸೇವೆ ಮಾಡಿದ್ದ ಮಗನ ಕುಟುಂಬಕ್ಕೆ ಚಂದ್ರಪ್ಪ ತಂದೆ ಜಮೀನು ನೀಡಿದ್ದೇ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿಹೋಗಿದೆ. ತಂದೆ ಬದುಕಿದ್ದಾಗ ತುತ್ತು ಅನ್ನ ಹಾಕದ ಈ ಪಾಪಿ ಈಗ ಜಮೀನಿನ ಆಸೆಗೆ ಮಾಡಬಾರದ ಕೆಲಸ ಮಾಡಿದ್ದಾನೆ. ಆತನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದು, ಪ್ರತಿಭಟನೆಯ ಎಚ್ಚರಿಕೆಯನ್ನೂ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.