ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು: ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ಮತ್ತಿಬ್ಬರ ಮೃತದೇಹ ಪತ್ತೆ
ದಾವಣಗೆರೆಯ ಕುಂದುವಾಡ ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ ಘಟನೆ ಇಂದು ನಡೆದಿದೆ. ಅದೇ ರೀತಿಯಾಗಿ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲ್ಲಸಮುದ್ರ ಕೆರೆಯಲ್ಲಿ ಇಬ್ಬರು ವ್ಯಕ್ತಿ ಮೃತಪಟ್ಟಿದ್ದಾರೆ. ಮೀನು ಹಿಡಿಯುವ ವೇಳೆ ಗಾಳಿ ರಭಸಕ್ಕೆ ತೆಪ್ಪ ಮಗುಚಿದ ಕಾರಣ ಈ ದುರಂತ ಸಂಭವಿಸಿದೆ.

ದಾವಣಗೆರೆ, ನವೆಂಬರ್ 25: ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವನ್ನಪ್ಪಿರುವಂತಹ (death) ಘಟನೆ ನಗರದ ಕುಂದುವಾಡ ಕೆರೆಯಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಶಾಂತಿನಗರದ ಚೇತನ್(22) ಮತ್ತು ಮನು(23) ಮೃತ ದುರ್ದೈವಿಗಳು. ಕೆರೆಯಲ್ಲಿ ಮೀನು ಹಿಡಿಯಲು ಹೋಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಕಳೆದ ಎರಡು ದಿನದಿಂದ ಇಬ್ಬರು ಯುವಕರು ನಾಪತ್ತೆಯಾಗಿದ್ದರು. ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದರು. ಆದರೆ ಇಂದು ಕುಂದುವಾಡ ಕೆರೆಯಲ್ಲಿ ಇಬ್ಬರ ಯುವಕರ ಶವ ಪತ್ತೆ ಆಗಿವೆ.
ಮೀನು ಹಿಡಿಯುವುದಕ್ಕೆ ಹೋಗಿ ನೀರುಪಾಲಾಗಿದ್ದ ಇಬ್ಬರ ಮೃತದೇಹ ಪತ್ತೆ
ಮೀನು ಹಿಡಿಯುವುದಕ್ಕೆ ಹೋಗಿ ಕೆರೆಯಲ್ಲಿ ನೀರುಪಾಲಾಗಿದ್ದ ಇಬ್ಬರು ವ್ಯಕ್ತಿಗಳ ಮೃತದೇಹ ಪತ್ತೆ ಆಗಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಲ್ಲಸಮುದ್ರ ಕೆರೆಯಲ್ಲಿ ನಡೆದಿದೆ. ಫಕ್ಕೀರಸಾಬ್(36) ಮತ್ತು ಶರಣಪ್ಪ(32) ಶವಪತ್ತೆ ಆಗಿದೆ.
ಇದನ್ನೂ ಓದಿ: ವೃದ್ದನ ಹತ್ಯೆಗೈದು ಮನೆಯಲ್ಲಿದ್ದ ಹಣ, ಚಿನ್ನ ದರೋಡೆ: ಡೆಡ್ಲಿ ಮರ್ಡರ್ಗೆ ಬೆಚ್ಚಿದ ಕೋಲಾರ
ಯಲಬುರ್ಗಾ ತಾಲೂಕಿನ ವಜ್ರಬಂಡಿ ನಿವಾಸಿ ಆಗಿದ್ದ ಫಕ್ಕೀರಸಾಬ್, ಗುತ್ತೂರ ನಿವಾಸಿ ಶರಣಪ್ಪ ಕಳೆದ ಮೂರು ದಿನಗಳ ಹಿಂದೆ ಮೀನು ಹಿಡಿಯಲು ಹೋಗಿದ್ದರು. ಮೀನು ಹಿಡಿಯುವ ವೇಳೆ ಗಾಳಿಯ ರಭಸಕ್ಕೆ ತೆಪ್ಪ ಮುಗುಚಿ ನೀರುಪಾಲಾಗಿದ್ದರು. ಕಳೆದ ಮೂರು ದಿನಗಳಿಂದ ಸ್ಥಳೀಯರು ಮತ್ತು ಅಗ್ನಿ ಶಾಮಕ ದಳ ಸಿಬ್ಬಂದಿ ಶವ ಹುಡುಕಾಡಿದ್ದು ಇಂದು ಪತ್ತೆ ಆಗಿವೆ.
ಗ್ಯಾಸ್ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು
ಗ್ಯಾಸ್ ಲಾರಿ ಡಿಕ್ಕಿಯಾಗಿ ಬೈಕ್ನಲ್ಲಿ ತೆರಳುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಸಮೀಪದ ಬಾಳೆಬೈಲಿನಲ್ಲಿ ನಡೆದಿದೆ. ಸುದೀಪ್(25) ಹಾಗೂ ಸುಧೀಶ್(30) ಮೃತ ದುರ್ದೈವಿಗಳು. ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆರೆಗೆ ಬಿದ್ದ ಲಾರಿ: ಚಾಲಕ ಸಾವು
ರಸ್ತೆ ಗುಂಡಿ ತಪ್ಪಿಸಲು ಹೋಗಿ ಚಾಲಕನ ಸಮೇತವಾಗಿ 12 ಚಕ್ರದ ಲಾರಿ ಕೆರೆಗೆ ಬಿದ್ದ ಘಟನೆ ಅತ್ತಿಬೆಲೆ-ಸರ್ಜಾಪುರ ಮುಖ್ಯರಸ್ತೆಯ ಬಿದರಗುಪ್ಪೆ ಕೆರೆ ಬಳಿ ನಡೆದಿದೆ. ಕಲಬುರಗಿ ಮೂಲದ ಲಾರಿ ಚಾಲಕ ಮಹೇಶ್ (37) ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿನಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ: ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ
12 ಚಕ್ರದ ಲಾರಿ ಜಲ್ಲಿ ತುಂಬಿಕೊಂಡು ಬಂದಿತ್ತು. ಅತ್ತಿಬೆಲೆಯಿಂದ ಸರ್ಜಾಪುರ ಮಾರ್ಗವಾಗಿ ಹೋಗುತ್ತಿತ್ತು. ರಸ್ತೆಯಲ್ಲಿ ಗುಂಡಿ ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ಕಳೆದುಕೊಂಡಿತ್ತು. ಸದ್ಯ ಕ್ರೇನ್ ಸಹಾಯದಿಂದ ಲಾರಿ ಮತ್ತು ಮೃತದೇಹ ಹೊರಕ್ಕೆ ತೆರೆಯಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



