
ದಾವಣಗೆರೆ, (ಮಾರ್ಚ್ 07): ಖಾಸಗಿ ಆಸ್ಪತ್ರೆ ನರ್ಸ್, ಕಷ್ಟ ಅಂತ ಹೇಳಿಕೊಂಡು ಉದ್ಯಮಿಯನ್ನು ಬುಟ್ಟಿಗೆ ಹಾಕೊಂಡಿದ್ದು, ಬಳಿಕ ಮಾಡಬಾರದ ಕೆಲಸ ಮಾಡಿ ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ. ಹೌದು..ದಾವಣಗೆರೆಯ (Davanagere) ವಿದ್ಯಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದವೀರಪ್ಪ ಬಡಾವಣೆಯಲ್ಲಿ ನಡೆದ ಹನಿಟ್ರ್ಯಾಪ್ ಪ್ರಕರಣವನ್ನು (Honeytrap Case) ವಿದ್ಯಾನಗರ ಠಾಣೆ ಪೊಲೀಸರು ಭೇದಿಸಿದ್ದು, ಉದ್ಯಮಿಗೆ ಹನಿಟ್ರ್ಯಾಪ್ ಮಾಡಿದ್ದ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎನ್ನುವ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹನಿಟ್ರ್ಯಾಪ್ ಸೂತ್ರದಾರಿ ನರ್ಸ್ ಸುಷ್ಮಿತಾ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್, ಚನ್ನಬಸಪ್ಪ ಎಂಬುವರು ಬಂಧಿತ ಅರೋಪಿಗಳು.
ಕಷ್ಟದಲ್ಲಿದ್ದೇನೆ ಎಂದು ಹೇಳಿಕೊಂಡು ಹೋಗಿ ಉದ್ಯಮಿ ಪ್ರಭು ಎನ್ನುವರನ್ನು ಬುಟ್ಟಿಗೆ ಹಾಕಿಕೊಂಡಿದ್ದ ನರ್ಸ್, ತನ್ನ ತಂಡದೊಂದಿಗೆ ಸೇರಿ ಹನಿಟ್ರ್ಯಾಪ್ ಖೆಡ್ಡಾಗೆ ಬೀಳಿಸಿದ್ದಳು. ಇದೀಗ ನಾಲ್ವರು ಆರೋಪಿಗಳು ಪೊಲೀಸರ ಅತಿಥಿಗಳಾಗಿದ್ದಾರೆ.
ಮೊದಲು ಉದ್ಯಮಿ ಪ್ರಭು ಎನ್ನುವರನ್ನು ಪರಿಚಯ ಮಾಡಿಕೊಂಡ ನರ್ಸ್ ಸುಷ್ಮಿತಾ, ಮಕ್ಕಳ ಶಾಲಾ ಶುಲ್ಕ ಕಟ್ಟಬೇಕು ಸಹಾಯ ಮಾಡುವಂತೆ ಕೇಳಿಕೊಂಡಿದ್ದಳು. ಪರಿಚಯ ಮಾಡಿಕೊಂಡ ಬಳಿಕ ಸುಷ್ಮಿಯಾ, ಒಂದು ತಿಂಗಳ ಹಿಂದೆ ಮೊದಲ ಬಾರಿಗೆ ಪ್ರಭು ಅವರನ್ನ ದಾವಣಗೆರೆ ಸಿದ್ದವೀರಪ್ಪ ಬಡಾವಣೆಯ ಸರ್ವೀಸ್ ಅಪಾರ್ಟ್ಮೆಂಟ್ ಗೆ ಕರೆಯಿಸಿಕೊಂಡಿದ್ದಳು. ಹೀಗೆ ಹಲವು ಬಾರಿ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಇಬ್ಬರ ಭೇಟಿ ನಡೆಯುತ್ತಿತ್ತು.
ಆದ್ರೆ, ಕಳೆದ ಒಂದು ವಾರದ ಹಿಂದೆ ಸುಶ್ಮೀತಾ ಜೊತೆ ಆಕೆಯ ಸ್ನೇಹಿತೆ ಕೂಡ ಸರ್ವೀಸ್ ಅಪಾರ್ಟ್ಮೆಂಟ್ ಗೆ ಬಂದಿದ್ದಳು. ಸಂಜನಾಳನ್ನು ಪ್ರತ್ಯೇಕ ರೂಂ ನಲ್ಲಿ ಇರಿಸಿ ಸುಷ್ಮಿತಾ ಹಾಗೂ ಪ್ರಭು ಒಂದು ರೂಮ್ ನಲ್ಲಿ ಇದ್ದರು.ಈ ಸಂದರ್ಭದಲ್ಲಿ ಸಂಜನಾ, ರಾಹುಲ್, ಬೆಕ್ಕಿನಕಣ್ಣು ಕೃಷ್ಣ ಮೂರು ಜನ ಮೊಬೈಲ್ ನಲ್ಲಿ ವೀಡಿಯೋ ಮಾಡಿಕೊಂಡು ಪ್ರಭು ಸುಷ್ಮಿತಾ ಇದ್ದ ರೂಮಿಗೆ ನುಗ್ಗಿದ್ದಾರೆ. ಬಳಿಕ ನಿಮ್ಮ ವೀಡಿಯೋವನ್ನು ಸೋಷಿಯಲ್ ಮೀಡಿಯಾಗೆ ಹಾಕುತ್ತೇವೆ ಎಂದು ಹೆದರಿಸಿದ್ದಾರೆ. ಅಲ್ಲದೇ ವಿಡಿಯೋ ಆಚೆ ಬರಬಾರದು ಅಂದ್ರೆ 25 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾರೆ. ಕೊನೆಗೆ ಪ್ರಭು, 12 ಲಕ್ಷಕ್ಕೆ ಒಪ್ಪಿಸಿದ್ದು, ಎರಡು ದಿನದಲ್ಲಿ ಹಣ ಕೊಡುವುದಾಗಿ ಹೇಳಿ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾರೆ.
ಬಳಿಕ ಅರೋಪಿಗಳಾದ ಚನ್ನಬಸಪ್ಪ, ಬೆಕ್ಕಿನಕಣ್ಣು ಕೃಷ್ಣ, ರಾಹುಲ್ ಸೇರಿ ಪ್ರಭುಗೆ ಹಣಕ್ಕಾಗಿ ಬೆದರಿಕೆ ಹಾಕಲು ಶುರುಮಾಡಿದ್ದಾರೆ. ಇದರಿಂದ ಬೇಸತ್ತ ಪ್ರಭು, ಕೊನೆಗೆ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಹಣ ಕೊಡುವದಾಗಿ ಪ್ರಭು ಅವರಿಂದ ಹೇಳಿಸಿ ಹನಿಟ್ರ್ಯಾಪ್ ಗ್ಯಾಂಗ್ ಅನ್ನು ಕರೆಯಿಸಿಕೊಂಡು ಲಾಕ್ ಮಾಡಿದ್ದಾರೆ.