ದಾವಣಗೆರೆ, ಫೆಬ್ರವರಿ 10: ನಾಡಬಾಂಬ್ (Crude bomb) ಬಳಸಿ ಕಾಡುಪ್ರಾಣಿಯನ್ನು ಬೇಟೆಯಾಡುತ್ತಿದ್ದವನನ್ನು ಪೊಲೀಸರು (Police) ಬಂಧಿಸಿದ್ದಾರೆ. ನ್ಯಾಮತಿ (Nyamati) ತಾಲೂಕಿನ ದೊಡ್ಡೆತ್ತಿನಹಳ್ಳಿ ಗ್ರಾಮದ ನಿವಾಸಿ ಬಸವರಾಜಪ್ಪ (42) ಬಂಧಿತ ಆರೋಪಿ, ಅಪ್ಪು (38) ಪರಾರಿಯಾಗಿದ್ದಾನೆ. ಆರೋಪಿ ಬಳಿ ಇದ್ದ 63 ಜೀವಂತ ನಾಡಬಾಂಬ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಗಳು ನ್ಯಾಮತಿ ಶಾಖೆಯ ಹರಮಘಟ್ಟ ಅರಣ್ಯ ಪ್ರದೇಶದಲ್ಲಿ (Haramaghatta Forest Area) ನಾಡಬಾಂಬ್ಗಳನ್ನು ಕೋಳಿ ಹಾಗೂ ಕುರಿ ಮಾಂಸದಲ್ಲಿಟ್ಟು ಕಾಡು ಪ್ರಾಣಿಗಳನ್ನು ಬೇಟೆಯಾಡಲು ಮುಂದಾಗಿದ್ದರು. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಕೈಗೆ ಸಿಕ್ಕಿ ಬಿದ್ದಿದ್ದಾರೆ.
ಸದ್ಯ ಪೊಲೀಸರು ಆರೋಪಿ ಬಸವರಾಜಪ್ಪನನ್ನು ಜೆಎಂಎಫ್ಸಿ ಕೋರ್ಟ್ಗೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ. ಇನ್ನು ವಶಪಡಿಸಿಕೊಂಡ ಜೀವಂತ ನಾಡ ಬಾಂಬ್ಗಳನ್ನು ನಿಷ್ಕ್ರಿಯ ಗೊಳಿಸಲು ಚಿತ್ರದುರ್ಗ ಜಿಲ್ಲೆಯ ಡಿಎಸ್ ಹಳ್ಳಿ ಸ್ಪೋಟಕ ವಸ್ತು ಸಂಗ್ರಹಾಲಯಕ್ಕೆ ರವಾನೆ ಮಾಡಲಾಗಿದೆ.
ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಗೆ 13 ಹುಲ್ಲಿನ ಬಣವೆಗಳು ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಚನ್ನಗಿರಿ ತಾಲೂಕಿನ ಹರೋಸಾಗರ ಗ್ರಾಮದ ರೈತ ಪರಮೇಶ್ವರಪ್ಪ, ಬಸವರಾಜಪ್ಪ ಹಾಗೂ ರುದ್ರಪ್ಪ ಎಂಬುವರಿಗೆ ಸೇರಿದ ಹುಲ್ಲಿನ ಬಣವೆಗಳಿಗೆ ಇಂದು (ಫೆ.10) ಬೆಳಿಗ್ಗೆ ಮೂರು ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದೆ. ಆಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಬಸವಾ ಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ನಾಡಬಾಂಬ್ ಸ್ಫೋಟಿಸಿ ಕಾಡುಹಂದಿ ಹತ್ಯೆ; ಕಾಂತಾರ ಸಿನಿಮಾ ನಂತರ ದೈವದ ಸ್ಥಾನ ಕೊಟ್ಟು ಸಾಕಿದ್ದ ಗ್ರಾಮಸ್ಥರ ಕಣ್ಣೀರು
ಉತ್ತರ ಕನ್ನಡ: ಮುಂಡಗೋಡ ತಾಲೂಕಿನ ಬಾಚಣಕಿಯಲ್ಲಿ ಶುಕ್ರವಾರ (ಫೆ.09) ರಂದು ಅನುಮಾನಾಸ್ಪದ ವಸ್ತುವೊಂದು ಸ್ಫೋಟವಾಗಿತ್ತು. ಪರಿಣಾಮ ಕುರಿ ಕಾಯುತ್ತಿದ್ದ ವ್ಯಕ್ತಿಗೆ ಗಂಭೀರ ಗಾಯವಾಗಿತ್ತು. ಭರಮಪ್ಪ ಎನ್ನುವ ವ್ಯಕ್ತಿ ಕುರಿ ಮೇಯಿಸಲು ಬಾಚಣಕಿಯ ಕೆರೆ ಬಳಿ ಹೋಗಿದ್ದರು. ಈ ವೇಳೆ ಹೊಳಪಿರುವ ಒಂದು ವಸ್ತುವೊಂದು ಕಂಡಿದ್ದು,. ಕೂಡಲೇ ಭರಮಪ್ಪ, ಆ ಹೊಳಪಿನ ವಸ್ತುವನ್ನು ಕೈಯಿಂದ ಹಿಚುಕಿದ್ದಾರೆ.
ಈ ವೇಳೆ ಏಕಾಏಕಿ ವಸ್ತು ಸ್ಫೋಟಗೊಂಡಿತ್ತು. ಇದರಿಂದ ಭರಮಪ್ಪ ಅವರ ಎಡಗೈನ ಎರಡು ಬೆರಳುಗಳು ಕಟ್ ಆಗಿದ್ದವು. ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಸದ್ಯ ಭರಮಪ್ಪನನ್ನು ಮುಂಡಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ದುಷ್ಕರ್ಮಿಗಳು ಕಾಡುಪ್ರಾಣಿಗಳ ಬೇಟೆಗೆ ನಾಡಬಾಂಬ್ ಇಟ್ಟಿರಬಹುದು ಎನ್ನುವ ಸಂಶಯವಾಗಿದ್ದು, ಈ ಬಗ್ಗೆ ಮುಂಡಗೋಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ